ಮೈಸೂರು- ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ನೀಡಿ ಬಗೆಹರಿಸಲು ಜಿಪಂ ಸಿಇಒ ಸೂಚನೆ

By Kannadaprabha NewsFirst Published Feb 17, 2024, 1:08 PM IST
Highlights

ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗೆಯೇ, ಗಂಭೀರವಾದ ಸಮಸ್ಯೆಗಳೇನಾದರೂ ಇದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಸೂಚಿಸಿದರು.

  ಮೈಸೂರು :  ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗೆಯೇ, ಗಂಭೀರವಾದ ಸಮಸ್ಯೆಗಳೇನಾದರೂ ಇದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥರು ಜನರ ಕಷ್ಟವನ್ನು ಆಲಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದರು.

ಪ್ರತಿಯೊಬ್ಬರಿಗೂ ಅತ್ಯಗತ್ಯ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೊದಲು ಗ್ರಾಮಗಳಲ್ಲಿ ಇರುವ , ಕೆರೆ, ಬೋರ್‌ ವೆಲ್‌ ಗಳ ನೀರಿನ ಮಟ್ಟವನ್ನು ಪರೀಕ್ಷಿಸಿ, ಕಡಿಮೆಯಾಗಿರುವುದು ಕಂಡು ಬಂದರೆ ನೀರನ್ನು ಮರು ತುಂಬಿಸಬೇಕು ಎಂದು ಅವರು ತಿಳಿಸಿದರು.

ನೀರಿನ ಸಮಸ್ಯೆ ಇರುವ ಹಾಡಿಯಲ್ಲಿರವ ಜನರಿಗೆ ವಾಟರ್‌ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಬೇಕು. ಹಾಡಿಯಲ್ಲಿ ಸ್ಮಶಾಣ, ಗೋಮಾಳ ಇತ್ಯಾದಿ ಕುಂದು- ಕೊರತೆಗಳು ಕಂಡುಬಂದರೆ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು. ನಿಮ್ಮ ವ್ಯಾಪ್ತಿಯಲ್ಲೇ ಸಮಸ್ಯೆಗಳನ್ನು ಹುಡುಕಿ ಬಗೆಹರಿಸಿಕೊಳ್ಳದಿದ್ದರೆ ಮುಂದೊಂದು ದಿನ ಅದೇ ದೂರುಗಳಾಗಿ ಹೊರಹೊಮ್ಮಿ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಇದು ಬೇಸಿಗೆ ಸಮಯವಾದ್ದರಿಂದ ಡೀಹೈಡ್ರೇಟ್, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತಮ್ಮ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಜನರಿಗೆ ವೈದ್ಯಕೀಯ ಇಲಾಖೆಯಿಂದ ಬಂದ ಮಾಹಿತಿಯನ್ನು ತಲುಪಿಸಿ, ಅವರಿಗೆ ಸರಿಯಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಚರಂಡಿಗಳು, ರಸ್ತೆ ಬದಿಗಳು, ನೀರಿನ ಟ್ಯಾಂಕರ್‌, ಬೋರ್‌ ವೆಲ್‌ ಹಾಗೂ ತೊಂಬೆಗಳನ್ನು ಸ್ವಚ್ಛಗೊಳಿಸಿ ಗ್ರಾಮವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯು ಒಂದು ಅಭಿಯಾನದಂತೆ ಅರಿವು ಮೂಡಿಸಬೇಕು ಎಂದರು.

ಜಾನುವಾರುಗಳ ಮೇವನ್ನು ಬೇರೆ ಜಿಲ್ಲೆಗೆ ರಫ್ತು ಮಾಡಬಾರದು. ಹಾಗೆ ಮಾಡಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಅಧಿಕಾರಿಗಳು ತಾವು ಮಾಡುವ ಪ್ರತಿಯೊಂದು ಕೆಲಸದ ದಾಖಲೆಗಳನ್ನು ಪ್ರತ್ಯೇಕ ಫೈಲ್ ಮಾಡಬೇಕು. ಇದರಿಂದ ಎಲ್ಲಾ ಕೆಲಸಗಳ ಒಂದು ಚಿತ್ರಣ ಹುಡುಕುವುದು ಸುಲಭವಾಗುತ್ತದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಡಿ.ಎಸ್. ಕೃಷ್ಣಂರಾಜು, ಪಿಡಿಒಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

click me!