ಮೈಸೂರು : ಅಗದಿದ್ದ ರಸ್ತೆಗೆ ತೇಪೆ ಹಾಕಿದ ಅಧಿಕಾರಿಗಳು..!

By Kannadaprabha NewsFirst Published Apr 5, 2024, 11:52 AM IST
Highlights

ಮೂರು ತಿಂಗಳಾದರೂ ದುರಸ್ತಿ ಪಡಿಸದ ರಸ್ತೆಗೆ ಕೊನೆಗೂ ಅಧಿಕಾರಿಗಳು ತೇಪೆ ಹಾಕಿದ್ದಾರೆ.

  ತಲಕಾಡು :  ಮೂರು ತಿಂಗಳಾದರೂ ದುರಸ್ತಿ ಪಡಿಸದ ರಸ್ತೆಗೆ ಕೊನೆಗೂ ಅಧಿಕಾರಿಗಳು ತೇಪೆ ಹಾಕಿದ್ದಾರೆ.

ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಟಿ.ನರಸೀಪುರ ತಾಲೂಕು ಹಿರಿಯೂರು ಹಾಗು ಹೊಸಪುರ ಗ್ರಾಮದ ಎರಡು ಕಡೆ ಕತ್ತರಿಸಿದ್ದ ಡಾಂಬರು ಮುಖ್ಯ ಯನ್ನು, ಮೂರು ತಿಂಗಳಾದರು ದುರಸ್ತಿಪಡಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸಿದ್ದರು. ಹೀಗಾಗಿ ಇದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಗೆದ ರಸ್ತೆ ದಾಟಲು ನಿತ್ಯ ಬವಣೆ ಪಡುತ್ತಿದ್ದರು.

ಇಲ್ಲಿ ಅಗೆದಿದ್ದ ರಸ್ತೆ ದಾಟಲು ವಾಹನ ಪ್ರಯಾಣಿಕರು ಪಡುತ್ತಿರುವ ಬವಣೆಯ ಕುರಿತು ಹಾಗು ಟಿ. ನರಸೀಪುರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಿದ್ದಾರೆ.

ಅಗೆದಿದ್ದ ಡಾಂಬರು ರಸ್ತೆಗೆ ಬುಧವಾರ ತರಾತುರಿಯಲ್ಲಿ ಕಾಂಕ್ರಿಟ್ ತೇಪೆ ಹಾಕಿ ಮುಚ್ಚಲು ಯಶಸ್ವಿ ಯಾಗಿದ್ದಾರೆ.

ಎಚ್ಚರಿಕಾ ಫಲಕ ಅಳವಡಿಸದೆ ನಿರ್ಲಕ್ಷ್ಯ:

ಇಲ್ಲಿ ಅಗೆದಿದ್ದ ರಸ್ತೆಯ ಬಳಿ ರಸ್ತೆ ದುರಸ್ತಿಯಲ್ಲಿದೆ ಎಂದು ಎಚ್ಚರಿಸುವ ಯಾವುದೇ ನಾಮಫಲಕ ಅಳವಡಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸಿದ್ದರು. ಹೀಗಾಗಿ ವಾಹನಗಳು ಬಂದ ವೇಗದಲ್ಲಿಯೇ ಇಲ್ಲಿ ಅಗೆದಿದ್ದ ಡಾಂಬರು ರಸ್ತೆ ಗುಂಡಿ ಕಾಣದೆ ಅಪಾಯಕ್ಕೆ ಅಹ್ವಾನ ನೀಡಿದಂತೆ ಧಡಾರನೆ ಗುಂಡಿಯಲ್ಲಿ ಕುಸಿದೆದ್ದು ದಾಟುವ ಸರ್ಕಸ್ ಮಾಡುತ್ತಿದ್ದವು.

ಒಂದು ವೇಳೆ ಇಲ್ಲಿನ ಗುಂಡಿ ರಸ್ತೆ ದಾಟುವಾಗ ವಾಹನ ಪ್ರಯಾಣಿಕರಿಗೆ ಅವಘಡ ಸಂಭವಿಸಿದರೆ ಹೊಣೆ ಯಾರದ್ದು..? ಎಂದು ಇದೇ ರಸ್ತೆಯಲ್ಲಿ ದೈನಂದಿನ ಸಂಚಾರ ನಡೆಸುವ ಪ್ರಯಾಣಿಕರು ಕಳವಳದಿಂದ ಪ್ರಶ್ನಿಸಿದ್ದಾರೆ.

ಕೋಟಿ ಲೆಕ್ಕದಲ್ಲಿ ನಿರ್ಮಿಸಿದ ರಸ್ತೆ ಬೇಕಾಬಿಟ್ಟಿ ಅಗೆತ:

ಸರ್ಕಾರ 2009ರ ತಲಕಾಡು ಪಂಚಲಿಂಗ ದರ್ಶನದ ಪ್ರಯುಕ್ತ ಕಿ.ಮೀ.ಗೆ ಒಂದು ಕೋಟಿರೂನಂತೆ ವೆಚ್ಚಮಾಡಿ ಟಿ. ನರಸೀಪುರ ಮಾದಾಪುರ ತಲಕಾಡಿಗೆ ಉತ್ತಮ ಸಂಪರ್ಕ ರಸ್ತೆ ಸೇವೆ ಕಲ್ಪಿಸಿಕೊಟ್ಟಿದೆ. ಇಲ್ಲಿನ ರಸ್ತೆ ಅಭಿವೃದ್ದಿಗೆ ಮುನ್ನ ಹೆವಿ ಮರಳು ಮರಳು ಲಾರಿಗಳ ನಿರಂತರ ಸಂಚಾರದಿಂದ ಸಂಪೂರ್ಣ ಹದಗೆಟ್ಟಿತ್ತು. ತಲಕಾಡಿನಿಂದ ನರಸೀಪುರಕ್ಕೆ ತೆರಳಲು 15 ಕಿ.ಮೀ ದೂರದ ರಸ್ತೆ ಪ್ರಯಾಣಿಕರಿಗೆ ನರಕ ಸದೃಶ್ಯದ ಅನುಭವ ನೀಡಿತ್ತು.

ಅಲ್ಲದೇ, ತಲಕಾಡು ಟಿ. ನರಸೀಪುರ ತಲುಪಲು 20 ನಿಮಿಷದ ಹಾದಿ ತೀವ್ರವಾಗಿ ಹದಗೆಟ್ಟಿದ್ದ ಇಲ್ಲಿನ ರಸ್ತೆಯಿಂದಾಗಿ ಒಂದು ಗಂಟೆ ತಡವಾಗುತಿತ್ತು. ನೂತನ ರಸ್ತೆ ಅಸ್ತಿತ್ವಕ್ಕೆ ಬಂದ ಬಳಿಕ, ತಲಕಾಡು ಹೋಬಳಿ ಪ್ರಯಾಣಿಕರಿಗೆ ಹಾಗು ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆ ಒದಗಿಸಿಕೊಟ್ಟಿದೆ. ಇದೇ ರಸ್ತೆಯ ಅಕ್ಕಪಕ್ಕದ ಸರ್ವೀಸ್ ಶೋಲ್ಡರ್ ಜಾಗದಲ್ಲಿ ತ್ಯಾಜ್ಯಗಳ ಸುರಿಯಲಾಗುತ್ತಿದೆ ಇದರ ಕಡೆ ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸುವುದು ಅಗತ್ಯ.

click me!