
ಚಿಕ್ಕಮಗಳೂರು (ಏ.26): ಮಳೆಗಾಲದ ಆರಂಭದಲ್ಲೇ ಮಲೆನಾಡಿನ ರಸ್ತೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಸಮೀಪ ಇಂದು ನಡೆದ ಭೀಕರ ಕಾರು ಅಪಘಾತದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಯುವಕರನ್ನು ಸ್ವತಃ ಶಾಸಕಿ ನಯನಾ ಮೋಟಮ್ಮ ಅವರೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇಂದು ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಜಾರುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಯುವಕರು ತೀವ್ರವಾಗಿ ಗಾಯಗೊಂಡು, ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅತಿಯಾದ ರಕ್ತಸ್ರಾವವಾಗುತ್ತಿದ್ದರಿಂದ ಯುವಕರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು.
ಅದೇ ಸಮಯದಲ್ಲಿ ಹೊರನಾಡಿನಿಂದ ಮೂಡಿಗೆರೆ ಕಡೆಗೆ ಶಾಸಕಿ ನಯನಾ ಮೋಟಮ್ಮ ಅವರು ಪ್ರಯಾಣಿಸುತ್ತಿದ್ದರು. ರಸ್ತೆಯಲ್ಲಿ ಅಪಘಾತವಾಗಿರುವುದನ್ನು ಕಂಡ ಶಾಸಕಿ, ಕ್ಷಣಾರ್ಧವೂ ತಡಮಾಡದೆ ತಮ್ಮ ಕಾರನ್ನು ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದರು. ಆಂಬುಲೆನ್ಸ್ಗಾಗಿ ಕಾಯದೆ, ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನು ತಮ್ಮದೇ ಕಾರಿನಲ್ಲಿ ಹತ್ತಿಸಿಕೊಂಡು ಆಸ್ಪತ್ರೆಗೆ ಧಾವಿಸಿದರು.
ಯುವಕರಿಗೆ ತೀವ್ರ ಗಾಯಗಳಾಗಿದ್ದರಿಂದ ಶಾಸಕರ ಕಾರು ಸಂಪೂರ್ಣವಾಗಿ ರಕ್ತಮಯವಾಗಿತ್ತು. ಆದರೂ ಯಾವುದನ್ನೂ ಲೆಕ್ಕಿಸದ ನಯನಾ ಮೋಟಮ್ಮ, ಗಾಯಾಳುಗಳನ್ನು ಬಣಕಲ್ ಗ್ರಾಮದ ಕೃಷ್ಣ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದರಿಂದ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾಮಾನ್ಯವಾಗಿ ವಿವಿಐಪಿಗಳು ತಮ್ಮ ಕಾರು ಹಾಳಾಗುತ್ತದೆ ಅಥವಾ ರಕ್ತವಾಗುತ್ತದೆ ಎಂದು ಇಂತಹ ಸಂದರ್ಭಗಳಲ್ಲಿ ದೂರ ಉಳಿಯುತ್ತಾರೆ. ಆದರೆ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಬದಿಗೊತ್ತಿ, ಪ್ರಾಣ ಉಳಿಸುವುದೇ ಮುಖ್ಯ ಎಂದು ಭಾವಿಸಿ ನಡೆದುಕೊಂಡ ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. 'ಜನಪ್ರತಿನಿಧಿ ಎಂದರೆ ಹೀಗಿರಬೇಕು' ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.