Madikeri: ಅರುವತ್ತೊಕ್ಲು ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟ

By Kannadaprabha NewsFirst Published Aug 3, 2022, 11:44 AM IST
Highlights

ಮಡಿಕೇರಿಯ ಅರುವತ್ತೊಕ್ಲು ಗ್ರಾಮದ ಬೇಕೋಟು ಮಕ್ಕ ಯೂತ್‌ ಕ್ಲಬ್‌ನ ವತಿಯಿಂದ ಅರುವತೊಕ್ಲು ಗ್ರಾಮದ ತಳೂರು.ಎಂ. ಚಂಗಪ್ಪ ಹಾಗೂ ತಳೂರು ಎಂ. ಕುಶಾಲಪ್ಪ ಅವರ ಭತ್ತದ ಗದ್ದೆಯಲ್ಲಿ ಎರಡನೇ ವರ್ಷದ ಅದ್ದೂರಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.

ಮಡಿಕೇರಿ (ಆ.3) : ತಾಲೂಕಿನ ಅರುವತ್ತೊಕ್ಲು ಗ್ರಾಮದ ಬೇಕೋಟು ಮಕ್ಕ ಯೂತ್‌ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಅರುವತೊಕ್ಲು ಗ್ರಾಮದ ತಳೂರು.ಎಂ. ಚಂಗಪ್ಪ ಹಾಗೂ ತಳೂರು ಎಂ. ಕುಶಾಲಪ್ಪ ಅವರ ಭತ್ತದ ಗದ್ದೆಯಲ್ಲಿ ಎರಡನೇ ವರ್ಷದ ಅದ್ದೂರಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟಕ್ಕೆ ಅಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಗ್ರಾಮದ ಹಿರಿಯರು ಹಾಗೂ ಗ್ರಾಮದ ಹಿತಚಿಂತಕರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಉದ್ಘಾಟನೆಯು ಕ್ಲಬ್‌ನ ಸದಸ್ಯ ಕ್ರೀಡಾಪಟುಗಳು ನಾಲ್ಕು ದಿಕ್ಕುಗಳಿಂದ ಕ್ರೀಡಾ ಜ್ಯೋತಿಯನ್ನು ಹೊತ್ತು ತರುವ ಮೂಲಕ, ನೆರೆದಿದ್ದ ಕ್ರೀಡಾಪಟುಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಕ್ರೀಡಾಕೂಟವನ್ನು ಪ್ರಾರಂಭಿಸಿದರು. ಕೆಸರು ಗದ್ದೆ(Kesaru gadde) ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಪಂದ್ಯಾಟ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗ ಜಗ್ಗಾಟ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಯೋಮಾನದ ಆಧಾರದಲ್ಲಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಸೋಮವಾರಪೇಟೆ: ಒಕ್ಕಲಿಗರ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮ

ಈ ಕ್ರೀಡಾಕೂಟದಲ್ಲಿ ವಿವಿಧ ಸ್ಥಳಗಳಿಂದ 16 ಪುರುಷರ ಕ್ರಿಕೆಟ್‌ ತಂಡಗಳು, 12 ಪುರುಷರ ಹಗ್ಗ ಜಗ್ಗಾಟ ತಂಡಗಳು, 8 ಮಹಿಳೆಯರ ಹಗ್ಗ ಜಗ್ಗಾಟ ತಂಡಗಳು ಹಾಗೂ ಎಲ್ಲ ವಯೋಮಾನದ ನೂರಾರು ಓಟಗಾರರು ಓಟಗಾರ್ತಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಗ್ರಾಮದ ಬೆಳೆಗಾರರು ಹಾಗೂ ಹಿತಚಿಂತಕರಾದ ಚೆರುಮಾಡಂಡ ಸತೀಶ್‌ ಸೋಮಣ್ಣ ಬ್ಯಾಟಿಂಗ್‌ ಹಾಗೂ ಗ್ರಾಮದ ಮಾಜಿ ಸೈನಿಕರು ಹಾಗೂ ಹಿತಚಿಂತಕರುಗಳಾದ ತಳೂರು ಕೇಶವರವರು ಬೌಲಿಂಗ್‌ ಮಾಡುವ ಮೂಲಕ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಕ್ರೀಡಾಭಿಮಾನಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಂಗಳೂರಿನ 93.5 ಎಫ್‌. ಎಂ. ರೇಡಿಯೋ ಜಾಕಿ ಆರ್‌.ಜೆ. ತ್ರಿಶೂಲ…, ಗ್ರಾಮದ ಅಧ್ಯಾಪಕಿ ತಳೂರು ಉಭಿಣ ಕಾಶಿ ಹಾಗೂ ಗ್ರಾಮದ ಶಿಕ್ಷಕಿ ತಳೂರು ಕುಸುಮ ದಿನೇಶ್‌ ಇವರುಗಳ ನಿರೂಪಣೆ ಹಾಗೂ ವೀಕ್ಷಕ ವಿವರಣೆ ಈ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ನೆರೆದಿದ್ದ ಜನಸ್ತೋಮವನ್ನು ರಂಜಿಸಿದರು. ಸಮಾರೋಪ ಸಮಾರಂಭದ ಕ್ಲಬ್‌ನ ಅಧ್ಯಕ್ಷರಾದ ಸೂರಿ ಕಾಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಆಗಮಿಸಿದ್ದರು.

ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ಕ್ರೀಡಾಪಟುಗಳು

ವಿಶೇಷ ಅತಿಥಿಗಳಾಗಿ ಮಕ್ಕಳ ತಜ್ಞ ಹಾಗೂ ಸಾಹಿತಿ ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು, ಬೆಟ್ಟಗೇರಿ ಪಂಚಾಯಿತಿ ಅಧ್ಯಕ್ಷರಾದ ನಾಪಂಡ, ರಾಲಿ ಮಾದಯ್ಯ, ಬೆಟ್ಟಗೇರಿ ವಿ.ಎಸ್‌.ಎಸ್‌. ಎನ್ನ ಅಧ್ಯಕ್ಷರಾದ ತಳೂರು ಎ. ಕಿಶೋರ್‌ ಕುಮಾರ್‌, ಬೆಟ್ಟಗೇರಿ ಗ್ರಾ.ಪಂ. ಸದಸ್ಯರಾದ ತಳೂರು ದಿನೇಶ್‌ ಕರುಂಬಯ್ಯ, ಬೆಟ್ಟಗೇರಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷೆ ತಳೂರು ಶಾಂತಿ ಸೋಮಣ್ಣ, ಗ್ರಾಮದ ನಿವೃತ್ತ ಯೋಧ ಜಬ್ಬಂಡ ಕುಟ್ಟಪ್ಪ, ಸ್ಥಳದಾನಿಗಳಾದ ತಳೂರು.ಎಂ.ಚಂಗಪ್ಪ, ತಳೂರು ಎಂ. ಕುಶಾಲಪ್ಪ ಅವರು ಆಗಮಿಸಿ ಕ್ರೀಡಾಕೂಟಕ್ಕೆ ಮೆರಗು ನೀಡಿದರು.

click me!