* ಶೋ ಕೊಡೋ ರಾಜಕಾರಣ ಮಾಡಬಾರದು
* ಜನರಿಗೆ ಅನುಕೂಲ ಮಾಡೋ ಕೆಲಸ ಮಾಡಬೇಕು
* ಶಾಸಕ ಪ್ರೀತಂಗೌಡಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಪ್ರಜ್ವಲ್
ಹಾಸನ(ಸೆ.11): ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ದೊಡ್ಡವರ ಜೊತೆ ಮಾತಾಡಿರೋ ವಿಷಯ ಕೇಳಿದ್ದೇನೆ. ದೊಡ್ಡವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಹೇಳಿದ್ದಾರೆ. ನಿಮ್ಮ ಒಪ್ಪಿಗೆ ಇದ್ದರೆ ಸಾಲಲ್ಲ, ನಿಮ್ಮ ಪಕ್ಷದ ಒಪ್ಪಿಗೆ ಕೇಳಿ ಅಂತಾ ಹೇಳಿದ್ದಾರೆ. ಅವರೆಲ್ಲಾ ಚರ್ಚೆ ಮಾಡಿದ ಬಳಿಕ ನಾವು ಚರ್ಚೆಗೆ ತೆಗೆದುಕೊಳ್ಳಬೇಕು. ಏನು ಮಾಡೋದು ಅಂತಾ ದೇವೇಗೌಡ್ರು, ಕುಮಾರಣ್ಣನವರ ಜೊತೆ ಮಾತಾಡಿದ್ದಾರೆ. ಸೋಮವಾರ ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತೇವೆ. ಕುಮಾರಣ್ಣ ಹಾಗೂ ದೇವೇಗೌಡ್ರು ಏನು ತಿರ್ಮಾನ ಮಾಡ್ತಾರೋ ಅದಕ್ಕೆ ನಾವು ಹಾಗೂ ಪಕ್ಷ ಬದ್ಧ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನದ ಉಡುವಾರೆ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಣ್ಣನ ಹತ್ತಿರ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತಾಡಿದ್ದಾರೆ ಅಂತಾ ಕೇಳ್ಪಟ್ಟಿದ್ದೇನೆ. ಸೋಮವಾರ ಕುಳಿತು ಚರ್ಚೆ ಮಾಡಿ ನಿರ್ಧಾರ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಮೇಕೆದಾಟು, ಮಹಾದಾಯಿವಿಚಾರದಲ್ಲಿ ಚರ್ಚೆ ಮಾಡಿದ್ದೇನೆ. ಅಧಿವೇಶನ ಸರಿಯಾಗಿ ನಡೆಯದೇ ಇದ್ದರಿಂದ ಹೆಚ್ಚಿನ ಚರ್ಚೆ ಮಾಡೋಕೆ ಸಾಧ್ಯವಾಗಿಲ್ಲ. ಮಂದಿನ ಅಧಿವೇಶನ ಸರಿಯಾಗಿ ನಡೆದ್ರೆ ಅವಕಾಶ ಸಿಕ್ಕರೆ ಇನ್ನೂ ಹೆಚ್ಚಿನ ವಿಚಾರ ಬೆಳಕಿಗೆ ತರೋ ಪ್ರಯತ್ನ ಮಾಡ್ತೇನೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ರು ಎಷ್ಟೋ ಎಂಪಿಗಳು ಚರ್ಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಸುಮಲತಾ ಹೈಲಿ ಡಿಗ್ನಿಫೈಡ್ : ಪ್ರಜ್ವಲ್ಗೆ ಮುಂದಿದೆ ಒಳ್ಳೆ ಭವಿಷ್ಯ'
ಹಾಸನದಲ್ಲಿ ಸರ್ಕಾರದ ಅನುದಾನದಲ್ಲಿ ಪ್ರೀತಂಗೌಡ ಭಾವಚಿತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, ಯಾರದ್ದೊ ಯಾರ ಮನೆಯ ದುಡ್ಡೋ ಅಲ್ಲ, ಇದು ಸರ್ಕಾರದ ದುಡ್ಡು. ಸರ್ಕಾರಕ್ಕೆ ಯಾರು ದುಡ್ಡು ಕೊಡೋದು. ಜನರಿಂದ ಕಂದಾಯ ವಸೂಲಿ ಮಾಡಿ, ಬೇರೆಯವರಿಗೆ ಅನುದಾನ ಕೊಡ್ತೇವೆ. ಸಾರ್ವಜನಿಕರಿಗೆ ಸೇರಬೇಕಾದದ್ದನ್ನು ನಮ್ಮದು ಅಂತಾ ಫೋಟೋ ಹಾಕೊಳೋದಾದ್ರೆ ಅದು ತಪ್ಪಾಗುತ್ತೆ ಎಂದು ಹೇಳುವ ಮೂಲಕ ಶಾಸಕ ಪ್ರೀತಂಗೌಡಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ರೇವಣ್ಣ ಸಾಹೇಬ್ರು ಹಲವಾರು ಬಿಲ್ಡಿಂಗ್ಗಳನ್ನು ಕಟ್ಟಿದ್ದಾರೆ. ರೇವಣ್ಣ ಸಾಹೇಬ್ರು ಫೋಟೋ ಹಾಕೊಂಡಿರೋದನ್ನ ನೋಡಿದ್ದೀರಾ?. ರಾಜಕಾರಣ ಮಾಡಬೇಕಾದ್ರೆ, ಶೋ ಕೊಡೋ ರಾಜಕಾರಣ ಮಾಡಬಾರದು. ಜನರಿಗೆ ಅನುಕೂಲ ಮಾಡೋ ಕೆಲಸ ಮಾಡಬೇಕು ಅಂತ ಹೇಳಿದ್ದಾರೆ.