ಚಾಮರಾಜನಗರ ಸಮೀಪ ಜಾಲಹಳ್ಳಿಹುಂಡಿಯಲ್ಲಿ ಕಾರು ಚಲಾಯಿಸಲು ಬಾರದ ವ್ಯಕ್ತಿಯೊಬ್ಬ ಬೀದಿ ಬದಿಯಲ್ಲಿ ನಿಂತಿದ್ದ ಕಾರನ್ನು ಚಲಾಯಿಸಲು ಹೋಗಿ ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿಯನ್ನೇ ಬಲಿ ಪಡೆದಿದ್ದಾನೆ.
ಚಾಮರಾಜನಗರ[ನ.21]: ಮಗನ ಮದುವೆ ಸಡಗರದಲ್ಲಿದ್ದ ಮನೆಯೊಂದಕ್ಕೆ ಕಾರು ಡಿಕ್ಕಿ ಹೊಡೆದು ಜಗಲಿಯಲ್ಲಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯ ಸಹೋದರಿಯರಿಯೂ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ.
ಚಾಮರಾಜನಗರ ಸಮೀಪ ಜಾಲಹಳ್ಳಿಹುಂಡಿಯಲ್ಲಿ ಕಾರು ಚಲಾಯಿಸಲು ಬಾರದ ವ್ಯಕ್ತಿಯೊಬ್ಬ ಬೀದಿ ಬದಿಯಲ್ಲಿ ನಿಂತಿದ್ದ ಕಾರನ್ನು ಚಲಾಯಿಸಲು ಹೋಗಿ ಈ ಅವಘಡ ಸಂಭವಿಸಿದೆ. ಗ್ರಾಮದ ಲಕ್ಷ್ಮ್ಮಮ್ಮ ಎಂಬಾಕೆ ತನ್ನ ಮಗನ ಮದುವೆ ನಿಗಧಿಯಾಗಿದ್ದ ಹಿನ್ನಲೆಯಲ್ಲಿ ಗ್ರಾಮದೇವರ ಹಬ್ಬ ಮಾಡಿ ಊರಿನವರಿಗೆಲ್ಲ ಊಟ ಹಾಕಿ ಬಳಿಕ ಜಗಲಿ ಮೇಲೆ ತನ್ನ ಅಕ್ಕತಂಗಿಯರೊಡನೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈಕೆಯ ಸಹೋದರಿಯರಾದ ಸಾಕಮ್ಮ ಹಾಗೂ ದುಂಡಮ್ಮ ಎಂಬುವವರು ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೀದಿ ಬದಿಯಲ್ಲಿ ನಿಂತಿದ್ದ ಕಾರನ್ನು ಅದೇ ಗ್ರಾಮದ ರಾಜಪ್ಪ ಎಂಬಾತ ಚಾಲನೆ ಮಾಡಿ ಅಪಘಾತ ಸಂಭವಿಸುತ್ತಿದ್ದಂತೆ ಪರಾರಿಯಾಗಿದ್ದಾನೆ. ಕಾರು ಡಿಕ್ಕಿ ಹೊಡದ ರಭಸಕ್ಕೆ ಲಕ್ಷಮ್ಮನ ರುಂಡ ಮನೆಯ ಮೇಲೆ ಹಾರಿ ಬಿದ್ದಿದ್ದು, ಕಾರು ಕೂಡಾ ಮನೆಯ ಮೇಲೆ ಹತ್ತಿನಿಂತಿದೆ.