ತಿಂಗಳಲ್ಲಿ 11,436 ಮಂದಿಗೆ ಪಿಂಚಣಿ ಮಂಜೂರು

By Kannadaprabha NewsFirst Published Sep 8, 2021, 4:02 PM IST
Highlights
  • ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಜುಲೈ 26 ರಿಂದ ಪಿಂಚಣಿ ಆಂದೋಲನ 
  •  ಒಂದೇ ತಿಂಗಳಲ್ಲಿ ಹೊಸದಾಗಿ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ

 ಚಿಕ್ಕಬಳ್ಳಾಪುರ (ಸೆ.08): ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿಲ್ಲಾದ್ಯಂತ ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಜುಲೈ 26 ರಿಂದ ಪಿಂಚಣಿ ಆಂದೋಲನ ಕೈಗೊಂಡು ಒಂದೇ ತಿಂಗಳಲ್ಲಿ ಹೊಸದಾಗಿ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಯ ಯಾವೊಬ್ಬ ಅರ್ಹ ವ್ಯಕ್ತಿಯೂ ಪಿಂಚಣಿಯಿಂದ ವಂಚಿತರಾಗಬಾರದು, ಕೋವಿಡ್‌ ದುಸ್ಥಿತಿಯ ಸಂದಿಗ್ಧ ಸಮಯದಲ್ಲಿ ಜನರನ್ನು ಕಚೇರಿಗಳಿಗೆ ಅಲೆದಾಡದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನಡೆದಿ ಅಭಿಯಾನದಲ್ಲಿ ನಿರೀಕ್ಷೆಗೂ ಮೀರಿ ಪಿಂಚಣಿಗೆ ಅರ್ಜಿ ಸಲ್ಲಿಕೆ ಆಗಿದೆ ಎಂದರು.

75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ವಿನಾಯ್ತಿ ಫಾರಂ ಬಿಡುಗಡೆ!

ಕೋವಿಡ್‌ ಅವಧಿಯಲ್ಲಿ ಹಲವು ಅಂಗವಿಕಲರು, ವಯೋವೃದ್ಧರು, ಪರಿತ್ಯಕ್ತ ಅಶಕ್ತ ಮಹಿಳೆಯರು,ವಿಧವೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಜೀವನೋಪಾಯಕ್ಕೆ ತೊಡಕಾಗಿರುವ ಎಲ್ಲಾ ಅಂಶಗಳನ್ನು ಮನಗಂಡ ಜಿಲ್ಲಾಡಳಿತ ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಅಲ್ಪ ಮಟ್ಟದ ಸಹಾಯ ಸರ್ಕಾರದಿಂದ ಆಗಲಿ ಎಂದು ಪಿಂಚಣಿ ಆಂದೋಲನವನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಕಳೆದ ಜುಲೈ 26 ರಿಂದ ಆರಂಭಿಸಿತ್ತು ಎಂದರು.

ಮನೆ ಬಾಗಿಲಿಗೆ ಕಂದಾಯ ಇಲಾಖೆ

ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪಿಂಚಣಿ ಆಂದೋಲನದಡಿ ಕಾರ್ಯೋನ್ಮುಖರಾಗಿ ಗ್ರಾಮ, ವಾರ್ಡವಾರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಅರ್ಹರಿದ್ದು ಸಹ ಯಾರಿಗೆ ಪಿಂಚಣಿ ಸೌಲಭ್ಯ ದೊರಕದ ಜನರಿಂದ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಪಡೆದು 13,546 ಅರ್ಜಿಗಳನ್ನು ಸ್ವೀಕರಿಸಿದ್ದರು. ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿರುವ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಉಳಿದ 2,110 ಅರ್ಜಿಗಳು ಅನರ್ಹಗೊಂಡಿವೆ. ಮಂಜೂರಾಗಿರುವ ಪಿಂಚಣಿ ಆದೇಶ ಪತ್ರಗಳನ್ನು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿತರಿಸಲಾಗುತ್ತಿದೆ. ವಿತರಣಾ ಕಾರ್ಯ ಚಾಲ್ತಿಯಲ್ಲಿದ್ದು ಅತಿ ಶೀಘ್ರದಲ್ಲೇ ಮುಗಿಯಲಿದೆ ಎಂದು ಭರವಸೆ ನೀಡಿದರು.

13 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ಸ್ವೀಕೃತವಾದ 13,546 ಅರ್ಜಿಗಳ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1597, ಗೌರಿಬಿದನೂರು ತಾಲೂಕಿನಲ್ಲಿ 3950, ಶಿಡ್ಲಘಟ್ಟತಾಲ್ಲೂಕಿನಲ್ಲಿ 2818, ಬಾಗೇಪಲ್ಲಿ ತಾಲೂಕಿನಲ್ಲಿ 1969, ಗುಡಿಬಂಡೆ ತಾಲೂಕಿನಲ್ಲಿ 701 ಮತ್ತು ಚಿಂತಾಮಣಿ ತಾಲೂಕಿನಲ್ಲಿ 2511 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಸ್ವೀಕೃತವಾಗಿರುವ ಈ ಅರ್ಜಿಗಳ ಪೈಕಿ ವೃದ್ಧಾಪ್ಯ ವೇತನದಡಿ 5,439, ಸಂಧ್ಯಾ ಸುರಕ್ಷ ಯೋಜನೆಯಡಿ 3,954, ನಿರ್ಗತಿಕ ವಿಧವಾ ವೇತನದಡಿ 1,198, ವಿಕಲಚೇತನರ ವೇತನದಡಿ 584, ಮನಸ್ವಿನಿ ಯೋಜನೆಯಡಿ 252 ಮತ್ತು ಮೈತ್ರಿ ಯೋಜನೆಯಡಿ 9 ಅರ್ಜಿಗಳು ಸೇರಿದಂತೆ ಒಟ್ಟು 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

click me!