ಕೆಜಿಎಫ್ ಚಿನ್ನದ ಗಣಿ ಪ್ರದೇಶದ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

By Kannadaprabha NewsFirst Published Feb 28, 2024, 12:18 PM IST
Highlights

ಎಸ್‌ಟಿಬಿಪಿ ಯೋಜನೆಯನ್ನು ಯಾರು ಒಪ್ಪಿಕೊಂಡಿದ್ದಾರೆ, ಅವರೆಲ್ಲರಿಗೂ ಮೊದಲ ಹಂತದಲ್ಲಿ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಉಳಿದವರಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಯಾರನ್ನೂ ಸಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ 

ಕೆಜಿಎಫ್(ಫೆ.28): ಮುಚ್ಚಿರುವ ಕೆಜಿಎಫ್ ಚಿನ್ನದ ಗಣಿ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪೋಲೆಂಡ್ ದೇಶದ ಮೆರಿಕ್ಸಾ ಸಾಲ್ಟ್ ಗಣಿ ಮಂಡಳಿ ಕೆಜಿಎಫ್‌ನಲ್ಲಿ ಪ್ರವಾಸೋದ್ಯಮ ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದಾಗಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದ ಕೆಜಿಎಫ್ ಕ್ಲಬ್ ಆವರಣದಲ್ಲಿ ಎಸ್‌ಟಿಬಿಪಿ ಯೋಜನೆಯಡಿ ನಿವೃತ್ತಿಯಾದ ಸುಮಾರು ೨ ಸಾವಿರ ಮಂದಿ ಗಣಿ ಕಾರ್ಮಿಕರಿಗೆ ಮನೆಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ೨೦೨೩ರ ಫೆಬ್ರುವರಿ ೨೭ ರಂದು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಪೋಲೆಂಡ್ ದೇಶದಲ್ಲಿ ಗಣಿಗಾರಿಕೆ ಪೂರ್ಣಗೊಂಡ ಸ್ಥಳಗಳಲ್ಲಿ ಕೈಗೊಂಡಿರುವ ಪ್ರವಾಸೋದ್ಯಮದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಯಿತು. ಇದರ ಪರಿಣಾಮವಾಗಿ ಅಲ್ಲಿನ ಮೆರಿಕ್ಸಾ ಸಾಲ್ಟ್ ಗಣಿ ಮಂಡಳಿ ಮುಚ್ಚಿರುವಂತಹ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬಂದಿದೆ ಎಂದರು.

ಲೋಕಸಭಾ ಚುನಾವಣೆ: ಮಂಡ್ಯದಿಂದ ಸ್ಪರ್ಧೆ ಸುಳಿವು ನೀಡಿದ ಎಚ್‌ಡಿ ಕುಮಾರಸ್ವಾಮಿ! ಹೇಳಿದ್ದೇನು?

ಚುನಾವಣಾ ನೀತಿ ಸಂಹಿತೆಗೆ ಇನ್ನೂ ೧೫-೨೦ ದಿನಗಳ ಕಾಲಾವಕಾಶ ಇದ್ದು, ಉಳಿದ ಏನೇ ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಚರ್ಚಿಸಲು ನೀವು ಸಹ ದೆಹಲಿಗೆ ಬಂದಲ್ಲಿ ಗಣಿ ಅಧಿಕಾರಿಗಳೊಂದಿಗೆ ಕುಳಿತು ಚರ್ಚಿಸಿ ಕ್ರಮ ಕೈಗೊಳ್ಳಬಹುದಾಗಿದೆ, ಚಿನ್ನದ ಗಣಿ ಪ್ರದೇಶದಲ್ಲಿ ವಾಸಿಸುತ್ತಿರುವ ನೌಕರರ ಸಮಸ್ಯೆಗಳು ಬಗೆಹರಿಯಬೇಕು ಎನ್ನುವುದು ನಮ್ಮ ಮೂಲ ಧ್ಯೇಯವಾಗಿದ್ದು, ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳಿದ್ದಾಗ್ಯೂ ಸಹಿತ ೨೦೦೬ರಿಂದ ನನೆಗುದಿಗೆ ಬಿದ್ದಿದಂತಹ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವಾಗಿ ಮೊದಲ ಹಂತದಲ್ಲಿ ೨ ಸಾವಿರ ಮಂದಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.

ಗಣಿ ಕಾರ್ಮಿಕರಿಗೆ ಬಾಕಿಯಿರುವ ೫೨ ಕೋಟಿ ಗ್ರಾಚ್ಯುಟಿ ಹಣವನ್ನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ನ್ಯಾಯಾಲಯದಿಂದ ಅಂತಿಮ ತೀರ್ಪು ಬಂದಿಲ್ಲ, ಆದಾಗ್ಯೂ ನ್ಯಾಯಾಲಯದ ತೀರ್ಪಿನ ವಿರುದ್ಧ ಆಫೀಲು ಹೋಗದೇ ನೌಕರರ ಬಾಕಿ ಹಣವನ್ನು ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

೨೦೦೧ರಲ್ಲಿ ಗಣಿಯನ್ನು ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಒಂದು ತೀರ್ಮಾನವಾದರೂ ಸಹ ಅನೇಕ ಅಡೆತಡೆಗಳಿದ್ದವು. ಬಳಿಕ ೨೦೦೬ರ ಕ್ಯಾಬಿನೆಟ್ ತೀರ್ಮಾನದಲ್ಲಿಯೇ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ಕಾರ್ಮಿಕರು ಯಾವ ಜಾಗದಲ್ಲಿದ್ದಾರೆ? ಎಷ್ಟು ಜಾಗದಲ್ಲಿದ್ದಾರೆ? ಎಂಬುದನ್ನು ನಿಗದಿಪಡಿಸಿ ಅಷ್ಟು ಜಾಗವನ್ನು ಅವರಿಗೆ ಕೊಡಬೇಕೆನ್ನುವುದು ಎಸ್‌ಟಿಬಿಪಿ ಯೋಜನೆಯ ಒಂದು ಭಾಗವಾಗಿದ್ದು, ಅದರಂತೆಯೇ ಕ್ರಮ ವಹಿಸಲಾಗಿದೆ.

ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೂ ಇಂದಿಗೂ ಇಲ್ಲಿನ ಜಾಗ ಬಿಜಿಎಂಎಲ್ ಕಾರ್ಖಾನೆ ಹೆಸರಿನಲ್ಲಿ ಇಲ್ಲ. ಬಿಜಿಎಂಎಲ್ ಕಂಪನಿ ಆಸ್ತಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ದಾಖಲೆಗಳಲ್ಲಿ ದಾಖಲಾಗಿರಲಿಲ್ಲ. ೨೦೦೬ರಲ್ಲಿಯೇ ತೀರ್ಪು ಬಂದರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ೮ ವರ್ಷಗಳ ಮುನ್ನ ಅಂದರೆ ೨೦೧೪ಕ್ಕಿಂತ ಮುಂಚೆ ಆಗ ಅಧಿಕಾರದಲ್ಲಿದ್ದ ಸರ್ಕಾರ ಬಿಜಿಎಂಎಲ್ ಆಸ್ತಿಗಳನ್ನು ಕಂದಾಯ ಇಲಾಖೆ ದಾಖಲೆಗಳಲ್ಲಿ ದಾಖಲಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಎಸ್‌ಟಿಬಿಪಿ ಯೋಜನೆಯನ್ನು ಯಾರು ಒಪ್ಪಿಕೊಂಡಿದ್ದಾರೆ, ಅವರೆಲ್ಲರಿಗೂ ಮೊದಲ ಹಂತದಲ್ಲಿ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಉಳಿದವರಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಯಾರನ್ನೂ ಸಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗಣಿಗಾರಿಕೆ ನಡೆಸಲು ಲೀಜ್ ದೊರೆತಲ್ಲಿ ಟೈಲಿಂಗ್ ಡಂಪ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಉಳಿದ ಗಣಿ ಜಾಗದ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ. ಆದರೆ ರಾಜ್ಯ ಸರ್ಕಾರ ಮೈನಿಂಗ್ ಲೀಜ್‌ನ್ನು ನೀಡುತ್ತಿಲ್ಲ. ಇದು ಬಾಕಿಯಿದೆ. ಆದ್ದರಿಂದ ಮೊದಲ ಹೆಜ್ಜೆಯಾಗಿ ಎಸ್‌ಟಿಬಿಪಿ ಯೋಜನೆಯಡಿ ಸುಮಾರು ೨ ಸಾವಿರ ಮಂದಿಗೆ ಮನೆಗಳ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಛಿದ್ರ: ಸಂಸದ ಮುನಿಸ್ವಾಮಿ

ಎಂಪಿ-ಎಂಎಲ್‌ಎ ಟಾಕ್ ಫೈಟ್:

ಈ ನಡುವೆ ಸಂಸದ ಮುನಿಸ್ವಾಮಿ ಮತ್ತು ಶಾಸಕಿ ರೂಪಕಲಾ ಶಶಿಧರ್ ಮಧ್ಯ ಮಾತಿನ ಚಕಮಕಿ ಉಂಟಾಯಿತು. ಗಣಿಗಳನ್ನು ಮುಚ್ಚಿ ೨೩ ವರ್ಷಗಳು ಕಳೆದಿವೆ, ಬಿಜೆಪಿ ಸರಕಾರ ಬಂದು ೧೦ ವರ್ಷಗಳಾದರೂ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ ಆಗಲಿಲ್ಲ, ಕಾರ್ಮಿಕರಿಗೆ ಸಿಗಬೇಕಾಗಿರುವ ೫೨ ಕೋಟಿ ರು.ಗಳ ಗ್ಯಾಚ್ಯೂಟಿ ಹಣವನ್ನು ನೀಡಿಲ್ಲವೆಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದಾಗ, ಸಂಸದ ಮುನಿಸ್ವಾಮಿ ೬೦ ವರ್ಷಗಳಿಂದ ಕಾಂಗ್ರೆಸ್ ಸರಕಾರ ಎಷ್ಟು ಚಿನ್ನವನ್ನು ಲೂಟಿ ಮಾಡಿದೆ ಎಂದು ನಿವೃತ್ತ ಕಾರ್ಮಿರನ್ನು ಕೇಳಿ, ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಾಂಗ್ರೆಸ್ ಸರಕಾರವು ೫ ವರ್ಷಗಳ ಕಾಲ ಆಡಳಿತ ನಡೆಸಿದ್ದು, ಆಗ ಕಾರ್ಮಿಕರ ನೆನಪು ಬರಲಿಲ್ಲವೇ?, ಚಿನ್ನದ ಗಣಿಗಳನ್ನು ಮುಚ್ಚಲು ಪ್ರಮುಖ ಕಾರಣ ಕಾಂಗ್ರೆಸ್ ಸರಕಾರ ಗಣಿಗಳಲ್ಲಿದ್ದ ಚಿನ್ನವನ್ನು ಬೇನಾಮಿ ಲೆಕ್ಕದಲ್ಲಿ ಲೂಟಿ ಮಾಡಿದ ಹಿನ್ನೆಲೆಯಲ್ಲಿ ಚಿನ್ನದ ಗಣಿಗಳು ನಷ್ಟ ಉಂಟಾಗಿ ಭಾರತ್ ಗೋಲ್ಡ್ ಮೈನ್ಸ್‌ನನ್ನು ಮುಚ್ಚಲಾಯಿತು ಎಂದು ತಿರುಗೇಟು ನೀಡಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕಿ ರೂಪಕಲಾ ಶಶಿಧರ್, ಕೇಂದ್ರ ಗಣಿ ಜಂಟಿ ಕಾರ್ಯದರ್ಶಿ ಫರೀದಾ ನಾಯಕ್, ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಮೊದಲಾದವರು ಇದ್ದರು.

click me!