'ಕಾಂಗ್ರೆಸ್‌ನೊಳಗಿನ ಬಿಜೆಪಿ ಏಜೆಂಟರ ಬಗ್ಗೆ ಎಚ್ಚರಿಕೆ ಇರಲಿ'

By Kannadaprabha NewsFirst Published Dec 9, 2020, 12:20 PM IST
Highlights

ಕಾಂಗ್ರೆಸ್‌ ಪಕ್ಷದ ಶಕ್ತಿ ಕುಂದಿಸುವುದು ಅಷ್ಟು ಸುಲಭದ ಕೆಲಸವಲ್ಲ| ವಿರೋಧ ಪಕ್ಷಗಳ ನಾಯಕರು ತಮ್ಮ ಕೆಲ ಏಜೆಂಟರನ್ನು ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ| ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದರೆ ಜನಸಾಮಾನ್ಯರ ನೋವು- ನಲಿವಿಗೆ ಸ್ಪಂದಿಸುವುದು ಸುಲಭ ಸಾಧ್ಯ| 

ಹಾನಗಲ್ಲ(ಡಿ.09):  ಕಾಂಗ್ರೆಸ್‌ನೊಳಗಿನ ಬಿಜೆಪಿ ಏಜೆಂಟರ ಬಗೆಗೆ ಎಚ್ಚರಿಕೆ ಇರಲಿ. ಅವರು ನಮ್ಮವರಂತೆ ನಟಿಸುತ್ತಾರೆ. ಆದರೆ, ಅಂಥವರು ನಮ್ಮವರಲ್ಲ ಎನ್ನುವ ಅರಿವು ಇರಲಿ. ನಮ್ಮಲ್ಲಿ ಒಡಕು ಮೂಡಿಸಿ, ಬಣ ಸೃಷ್ಟಿಸಿ ಶಕ್ತಿ ಕುಂದಿಸುವ ಸಾಧ್ಯತೆ ಹೆಚ್ಚಿದೆ ಎಂದು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಶಂಕೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಗುರುಭವನದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್‌ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಶಕ್ತಿ ಕುಂದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿಯೇ ವಿರೋಧ ಪಕ್ಷಗಳ ನಾಯಕರು ತಮ್ಮ ಕೆಲ ಏಜೆಂಟರನ್ನು ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೇ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂಬರುವ ಗ್ರಾಪಂ ಚುನಾವಣೆ ಎದುರಿಸಬೇಕಿದೆ. ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದರೆ ಜನಸಾಮಾನ್ಯರ ನೋವು- ನಲಿವಿಗೆ ಸ್ಪಂದಿಸುವುದು ಸುಲಭ ಸಾಧ್ಯವಾಗಲಿದೆ ಎಂದರು.

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ. ಈ ನಿಟ್ಟಿನಲ್ಲಿ ಗ್ರಾಪಂ ಚುನಾವಣೆ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಗಮನ ನೀಡಬೇಕಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬದ್ಧತೆ ಇದೆ ಎಂದರು.

ಹಾವೇರಿ: ಬೈಕ್‌ ಸಮೇತ ನದಿಗೆ ಬಿದ್ದ ತಾಯಿ, ಮಗ

ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಸವರಾಜ್‌ ಶಿವಣ್ಣನವರ, ಮನೋಹರ ತಹಸೀಲ್ದಾರ್‌ ಮಾತನಾಡಿ, ರಾಜ್ಯದಲ್ಲಿ ಜನಬೆಂಬಲ ಇಲ್ಲದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರ ಹಿಡಿದ ಕೆಲವೇ ತಿಂಗಳಿನಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದೆ. ರಾಜ್ಯದ ಜನತೆಯೂ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗನಗೌಡ ಪಾಟೀಲ, ಪುಟ್ಟಪ್ಪ ನರೇಗಲ್‌, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖುರ್ಷಿದ್‌ಅಹ್ಮದ್‌ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ಈರಪ್ಪ ಲಮಾಣಿ, ಯಾಸೀರಖಾನ್‌ ಪಠಾಣ, ಮಹದೇವಪ್ಪ ಬಾಗಸರ, ಯಲ್ಲಪ್ಪ ಕಲ್ಲೇರ, ಯಾಸೀರ್‌ಖಾನ ಪಠಾಣ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
 

click me!