Mandya: ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ಗೂಳಿಗೌಡ ಮನವಿ

By Govindaraj SFirst Published Nov 28, 2022, 7:44 PM IST
Highlights

ಜಿಲ್ಲೆಯಲ್ಲಿ ಬೆಳೆದಿರುವ ಭತ್ತ, ರಾಗಿಯನ್ನು ಬೆಂಬಲ ಯೋಜನೆಯಡಿ ಖರೀದಿ ಮಾಡಲು ಶೀಘ್ರವೇ ಖರೀದಿ ಕೇಂದ್ರ ತೆರೆಯಬೇಕು, ಒಬ್ಬ ರೈತರು ಬೆಳೆ ಮಾರಾಟ ಮಾಡಲು ವಿಧಿಸಿರುವ ಮಿತಿಯನ್ನು ತೆಗೆದುಹಾಕಬೇಕು ಎಂದು ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮಂಡ್ಯ (ನ.28): ಜಿಲ್ಲೆಯಲ್ಲಿ ಬೆಳೆದಿರುವ ಭತ್ತ, ರಾಗಿಯನ್ನು ಬೆಂಬಲ ಯೋಜನೆಯಡಿ ಖರೀದಿ ಮಾಡಲು ಶೀಘ್ರವೇ ಖರೀದಿ ಕೇಂದ್ರ ತೆರೆಯಬೇಕು, ಒಬ್ಬ ರೈತರು ಬೆಳೆ ಮಾರಾಟ ಮಾಡಲು ವಿಧಿಸಿರುವ ಮಿತಿಯನ್ನು ತೆಗೆದುಹಾಕಬೇಕು ಎಂದು ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಈವರೆಗೂ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಬೆಂಬಲ ಬೆಲೆ ದರ ನಿಗದಿಪಡಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಬ್ಬ ರೈತನಿಂದ ಇಂತಿಷ್ಟೇ ಕ್ವಿಂಟಾಲ್‌ ಭತ್ತ ಖರೀದಿಸಬೇಕೆ ಮಿತಿ ನಿಗದಿ ಮಾಡಿದೆ. ಇನ್ನು ನೋಂದಣಿ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದನ್ನು ಖಾತ್ರಿಪಡಿಸಿಲ್ಲ. ರೈತಾಪಿ ವರ್ಗ ತುಂಬಾ ಆತಂಕಕ್ಕೀಡಾಗಿದೆ. ತಾವು ಮಧ್ಯಪ್ರವೇಶ ಮಾಡಿ ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಜೆಡಿಎಸ್‌ ಮೊದಲು ಬಹುಮತ ಪಡೆಯಲಿ: ಸಂಸದೆ ಸುಮಲತಾ ಅಂಬರೀಶ್‌

2021-22ನೇ ಸಾಲಿನಲ್ಲಿ ಮಂಡ್ಯದಲ್ಲಿ 98 ಭತ್ತ ಖರೀದಿ ಏಜೆನ್ಸಿ ಮ್ಯಾಪಿಂಗ್‌ ಮಾಡಿದ ಮಿಲ್‌ಗಳಿಂದ ಖರೀದಿಸಲಾಗಿತ್ತು, 20 ಲಕ್ಷ ಕ್ವಿಂಟಾಲ್‌ ಭತ್ತವನ್ನು 75 ಸಾವಿರ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿತ್ತು. ಪ್ರಸಕ್ತ ಸಾಲಿನ ಮುಂಗಾರು ಋುತುವಿನಲ್ಲಿ ಜಿಲ್ಲೆಯಲ್ಲಿ 81,459 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆದಿರುವ ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ಅಂದಾಜು 50 ಲಕ್ಷ ಕ್ವಿಂಟಾಲ್‌ ಭತ್ತ ಉತ್ಪಾದನೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಾಗಿ ಬೆಳೆಗೆ ಸಂಬಂಧಪಟ್ಟಂತೆ 2001-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 30 ಸಾವಿರ ರೈತರಿಂದ 5 ಲಕ್ಷ ಕ್ವಿಂಟಾಲ್‌ ರಾಗಿಯನ್ನು ಬೆಂಬಲ ಬೆಲೆ ನೀಡುವ ಮೂಲಕ ಖರೀದಿಸಲಾಗಿತ್ತು. 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 50,000 ಹೆಕ್ಟೇರ್‌ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ. 10 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್‌ ರಾಗಿ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ಇನ್ನೂ ಕೂಡಾ ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದರಿಂದ ರಾಗಿ ಬೆಳೆದ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದಿದ್ದಾರೆ.

ಈಗಾಗಲೇ ಬೆಲೆ ಕುಸಿತ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳ ಬೆಲೆ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತನ ಬದುಕು ದುಸ್ತರವಾಗಿದೆ. ಜೀವನ ಸಂಕಷ್ಟಕ್ಕೆ ಸಿಲುಕಿ ಆತ್ಯಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿ ನಷ್ಟದ ದಾರಿ ಹಿಡಿದಿದೆ. ಕೃಷಿ ಕಾರ್ಮಿಕರ ಕೊರತೆಯೂ ತೀವ್ರವಾಗಿ ರೈತರನ್ನು ಕಾಡುತ್ತಿದೆ. ಖರೀದಿ ಕೇಂದ್ರ ತೆರೆಯುವುದು ವಿಳಂಬವಾದಲ್ಲಿ ಮಧ್ಯವರ್ತಿಗಳ ಕಪಿಮುಷ್ಟಿಗೆ ಸಿಲುಕಿ ರೈತರು ಕಡಿಮೆ ಬೆಲೆಗೆ ಭತ್ತ, ರಾಗಿಯನ್ನು ತುರ್ತು ಅಗತ್ಯತೆಗಳಗೆ ಮಾರಾಟ ಮಾಡಿ ನಷ್ಟಕ್ಕೊಳಗಾಗುತ್ತಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ವಿಷಯಗಳನ್ನು ತಿರುಚಿ ಜನರ ದಿಕ್ಕು ತಪ್ಪಿಸುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ಸರ್ಕಾರ ಕೂಡಲೇ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮಂಡ್ಯ ಜಿಲ್ಲೆಯ ಜೊತೆಗೆ ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಹಾಗೂ ಇನ್ನಿತರ ಜಿಲ್ಲೆಗಳಲ್ಲೆ ಕೂಡಲೇ ನೋಂದಣಿ ಕೇಂದ್ರವನ್ನು ಪ್ರಾರಂಭ ಮಾಡಬೇಕು. ಹಾಗೆಯೇ ದರ ಏರಿಕೆ ಮಾಡಬೇಕು. ಕಳೆದ ಬಾರಿ ಇದ್ದಂತಹ ಒಬ್ಬ ರೈತನಿಂದ ಇಂತಿಷ್ಟೇ ಕ್ವಿಂಟಾಲ್‌ ಖರೀದಿ ಮಾಡಬೇಕು ಎಂಬ ನಿಯಮವನ್ನು ತೆಗೆದುಹಾಕಬೇಕಿದೆ. ರೈತ ಉತ್ಪಾದಿಸಿದ ಎಲ್ಲ ಭತ್ತ ಮತ್ತು ರಾಗಿಯನ್ನು ಖಲೀದಿಸಬೇಕು ಎಂದು ಈ ಭಾಗದ ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

click me!