ವಿದ್ಯಾರ್ಥಿಗಳ ಸಾಧನೆಯೇ ನನಗೆ ಕಮಿಷನ್‌: ಶಾಸಕ ರಾಜೂಗೌಡ

By Web DeskFirst Published Oct 2, 2019, 12:51 PM IST
Highlights

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ ಎಂದ ಶಾಸಕ ನರಸಿಂಹನಾಯಕ ರಾಜೂಗೌಡ| ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌| ಪದವಿಯೂ ವಿದ್ಯಾರ್ಥಿಗಳ ಜೀವನ ಕಟ್ಟಿಕೊಳ್ಳುವ ಪ್ರಮುಖವಾದ ಘಟ್ಟ| ಈ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಅಭ್ಯಾಸ ಮಾಡಿ ಉತ್ತಮ ಸಾಧನೆ ತೋರಬೇಕು| 

ಸುರಪುರ(ಅ.2): ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ವಿವಿಧ ಸಮಿತಿಗಳ ಚಟುವಟಿಕೆ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿ ಸ್ವಾಗತ ಸಮಾರಂಭಕ್ಕೆ ಡೋಲು ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪದವಿಯೂ ವಿದ್ಯಾರ್ಥಿಗಳ ಜೀವನ ಕಟ್ಟಿಕೊಳ್ಳುವ ಪ್ರಮುಖವಾದ ಘಟ್ಟ. ಈ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಅಭ್ಯಾಸ ಮಾಡಿ ಉತ್ತಮ ಸಾಧನೆ ತೋರಬೇಕು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸರಕಾರಿ ಶಾಲೆಯಲ್ಲಿ ಓದಿದವರೇ ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು. ಓದುವ ಸಮಯದಲ್ಲಿ ಹಲವಾರು ಸಮಸ್ಯೆಗಳು ಇರುತ್ತವೆ. ಇವುಗಳಿಗೆ ಎದೆಯೊಡ್ಡಿ ಯಶಸ್ಸು ಗಳಿಸಬೇಕು. ಕಾಲೇಜಿನಲ್ಲಿ ಕಳೆಯುವ ಒಂದೊಂದು ಕ್ಷಣಗಳು ಮುತ್ತುರತ್ನಗಳಿದ್ದಂತೆ. ಕಾಲೇಜಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು 25 ಲಕ್ಷ ರೂ. ಅನುದಾನ ಒದಗಿಸಿಕೊಡಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಿದ್ದಲ್ಲಿ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಜೀವನ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. 

ತಾಲೂಕಿನ ಶಿಕ್ಷಣ ಕುರಿತು ಮಾಡಿದ ಸರ್ವೇ ಪ್ರಕಾರ 1ನೇ ತರಗತಿಗೆ ಪ್ರತಿಶತವಿದ್ದಿದ್ದು, 7ನೇ ತರಗತಿಗೆ ಶೇ. 70ಕ್ಕೆ ಇಳಿಯುತ್ತದೆ. ಎಸ್ಸೆಸ್ಸೆಲ್ಸಿ ವೇಳೆ ಶೇ. 60ಕ್ಕೆ ಕ್ಷೀಣಿಸುತ್ತದೆ. ಶೈಕ್ಷಣಿಕ ಪ್ರಗತಿಗಾಗಿ 20 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಕಾಲೇಜು, 5 ಕಿ.ಮೀ. ಗೊಂದು ಪ್ರೌಢಶಾಲೆ ಸ್ಥಾಪಿಸಿ ಅಕ್ಷರಕ್ರಾಂತಿಗೆ ಮುನ್ನುಡಿ ಬರೆಯಬೇಕು. ಶಿಕ್ಷಣದಿಂದ ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

‘ಉತ್ತಮ ಐಡಿಯಾ ಕೊಡಿ’

ನಾನು ಕ್ಷೇತ್ರದ ಶಾಸಕನಾದರೆ ಹೇಗೆ ಆಡಳಿತ ನಡೆಸುವೆ ಅನ್ನುವ ಪ್ರಬಂಧ ಪಿಯು-ಪದವಿ-ಸ್ನಾತಕೋತ್ತರ ಕಾಲೇಜುಗಳಲ್ಲಿ ನಡೆಸಲು ಮನವಿ ಮಾಡಿದರು. ವಿದ್ಯಾರ್ಥಿಗಳು ಕೊಡುವ ಉತ್ತಮ ಸಲಹೆಗಳನ್ನು ಸ್ವೀಕರಿಸಲಾಗುವುದು. ಯುವ ವಿದ್ಯಾರ್ಥಿಗಳಲ್ಲಿ ಉತ್ತಮ ಐಡಿಯಾಗಳಿದ್ದರೆ ನಮಗೆ ಕೊಡುವ ಕೆಲಸ ಮಾಡಬೇಕು. ಈಮೂಲಕ ತಾಲೂಕಿನ ಇನ್ನಷ್ಟುಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕರು ತಿಳಿಸಿದರು.

ಕಾಲೇಜಿನ ಶೈಕ್ಷಣಿಕ ಪ್ರವಾಸಕ್ಕಾಗಿ ಅನುದಾನ ನೀಡಲಾಗುವುದು. ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕದ ವ್ಯವಸ್ಥೆ, ಯುವಕ-ಯುವತಿಯರಿಗೆ ಶೌಚಾಲಯದ ವ್ಯವಸ್ಥೆ, ಬಸ್‌ ನಿಲ್ದಾಣದಿಂದ ಪದವಿ ಕಾಲೇಜಿಗೆ 8.30ರಿಂದ 10ರವರೆಗೆ, 12ರಿಂದ 1ರವರೆಗೆ ಸಿಟಿ ಬಸ್‌ನ ವ್ಯವಸ್ಥೆ ಮಾಡಿ ಕೊಡಲಾಗುವುದು. ಪದವಿ ಕಾಲೇಜಿನ ಅಭಿವೃದ್ಧಿಗೆ .25 ಲಕ್ಷ ಶಾಸಕರ ಅನುದಾನದಲ್ಲಿ ಒದಗಿಸಲಾಗವುದು. 15 ದಿನಗಳಲ್ಲಿ ಗ್ರಂಥಾಲಯಕ್ಕೆ ಪುಸ್ತಕ ಬರುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೂಗಳತೆಯಲ್ಲಿ ತಪ್ಪಿದ ಸಚಿವ ಸ್ಥಾನ 

ರಾಜ್ಯ ಸಚಿವ ಸಂಪುಟ ರಚನೆ ಕೊನೆಗಳಿಗೆಯವರೆಗೂ ಸಚಿವರ ಆಯ್ಕೆ ಪಟ್ಟಿಯಲ್ಲಿ ಹೆಸರಿತ್ತು. ಕೂಗಳತೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು ನಿರಾಸೆ ಮೂಡಿಸಿದ್ದು, ಮುಂದೆ ರಚನೆಯಾಗುವ ಸಚಿವ ಸಂಪುಟದಲ್ಲಿ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ಆತ್ಮೀಯರಾಗುವುದು ಒಂದಡೆ ಸಂತಸವಾದರೂ ಮತ್ತೊಂದೆಡೆ ಅಷ್ಟೇ ಮಾರಕವಾಗಿದೆ. ನಮ್ಮ ಹುಡಗ ಯುವಕನಾಗಿದ್ದು, ಮುಂದೆ ದಿನಗಳಲ್ಲಿ ಸಚಿವ ಸ್ಥಾನ ಕೊಟ್ಟರಾಯಿತು ಎನ್ನುವ ಮನೋಭಾವ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಅನಿಸಿಕೆಯಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುರಪುರ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿಯೇ 5 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಸುರಪುರ ನಗರಕ್ಕೆ 3 ಕೋಟಿ ರು.ಗಳು, ಕಕ್ಕೇರಾಕ್ಕೆ 2 ಕೋಟಿ ರು.ಗಳ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಕುಡಿಯುವ ನೀರು ಕಲ್ಪಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
 

click me!