
ಮದ್ದೂರು (ಮೇ.17): ನಮಗೂ ಪೊರಕೆ, ದೊಣ್ಣೆ, ಒನಕೆ ಹಿಡಿದು ಪ್ರತಿಭಟನೆ ಮಾಡಲು ಬರುತ್ತದೆ. ಪ್ರತಿಭಟನೆ ಮಾಡಲು ನಮ್ಮ ಬಳಿಯೂ ಜನರಿದ್ದಾರೆ. ನಮಗೆ ಶಾಂತಿ ಕಾಪಾಡುವುದು ಮುಖ್ಯ ಎಂದು ಶಾಸಕ ಕೆ.ಎಂ.ಉದಯ್ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವ ವಿರುದ್ಧ ಕಿಡಿಕಾರಿದರು. ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿ ಅಶಾಂತಿ ಉಂಟು ಮಾಡುವುದು ಬೇಡ ಎಂದು ಸುಮ್ಮನೆ ಇದ್ದೇವೆ. ನಿಮ್ಮ ವಿರುದ್ಧ ಹೇಳಿಕೆ ನೀಡಲು ನಮಗೆ ಸಮಯವಿಲ್ಲ. ನಮಗೆ ಮತ ನೀಡಿರುವ ಜನರು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ.
ನ್ಯಾಯಾಲಯದಲ್ಲಿ ಪ್ರಕರಣವಿದೆ. ಪ್ರಕರಣದ ತೀರ್ಪಿಗೆ ನಾವು ಬದ್ಧವಾಗಿದೆ. ಅಲ್ಲಿಯವರೆಗೆ ನೀವು ಸಹ ಬದ್ಧವಾಗಿ ಇರಬೇಕು ಎಂದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪ್ರತಿಭಟನೆ ಬೇಡ ಎಂದಿದ್ದರು. ಯಾರದೋ ಹಿತ ಕಾಪಾಡಲು ತಮ್ಮ ಪ್ರತಿಷ್ಠೆಗೋಸ್ಕರ ಪ್ರತಿಭಟನೆ ಮುಂದುವರಿಸಿದ್ದೀರಿ. ಪ್ರತಿಭಟನೆಯಲ್ಲಿ ಭಾಗವಹಿಸುವ ಮುಗ್ಧ ಜನರನ್ನು ದಿಕ್ಕು ತಪ್ಪಿಸುವ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯ ಹಲವು ಗ್ರಾಪಂಗಳನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಶಾಸಕರು ಮುಖ್ಯಮಂತ್ರಿಗಳಿಗೆ ಬಳಿ ದುಂಬಾಲು ಬಿದ್ದಿದ್ದಾರೆ. ಆದರೆ, ನಮ್ಮ ಪ್ರಯತ್ನದಿಂದ ಗೆಜ್ಜಲಗೆರೆ ಗ್ರಾಮವು ನಗರಸಭೆಯನ್ನಾಗಿ ಸೇರ್ಪಡೆಯಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆ ನಿರ್ಮಾಣಕ್ಕೆ ಅಗತ್ಯ ಸೌವಲತ್ತುಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಅನ್ನು ಕೆಲವರು ನಗರಸಭೆಗೆ ಸೇರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವವರೇ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಖಾಸಗಿ ಶಾಲೆಗಳಲ್ಲಿ ಮಾಡಿಸುತ್ತಿದ್ದಾರೆ. ಅವರ ಮಕ್ಕಳಿಗೆ ದೊಡ್ಡ ಕಂಪನಿಗಳಲ್ಲಿ ಕೆಲಸ ಕೊಡುಸುತ್ತಾರೆ. ಆದರೆ, ಗ್ರಾಮದ ರೈತರ, ಕೂಲಿಕಾರರ ಮಕ್ಕಳು ಅವರ ಮಕ್ಕಳ ದೊಡ್ಡ ಮಟ್ಟಕ್ಕೆ ಬೆಳೆಯುವುದು ಬೇಡವೇ. ಇದನ್ನು ಮುಗ್ಧ ರೈತರು, ಗ್ರಾಮದ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೆಜ್ಜಲಗೆರೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ನೆರ ರಾಜ್ಯಗಳಿಂದ ಬಂಡವಾಳ ಶಾಹಿಗಳು ಬಂದು ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ವಿದ್ಯಾವಂತ ಯುವಕರಿಗೆ ನಿರುದ್ಯೋಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಿಳಿಸಿದರು. ಈಗಾಗಲೇ ಗೆಜ್ಜಲಗೆರೆ ಗ್ರಾಮವು ನಗರಸಭೆ ಸೇರಿದೆ. ಹಲವು ವರ್ಷಗಳಿಂದ ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಸಮಸ್ಯೆಯಾಗಿತ್ತು.
ಈಗ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಸರಬರಾಜ ಮಾಡಲು ಈಗಾಗಲೇ 220 ಕೆ ವಿ. ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಯು ಸೋಮನಹಳ್ಳಿ ಹೊರವಲಯದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಮುಂದಿನ ವರ್ಷದೊಳಗೆ ಕಾಮಗಾರಿ ಮುಕ್ತಾವಾಗಿ ಕೈಗಾರಿಕಾ ಪ್ರದೇಶಕ್ಕೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತದೆ. ಇದರ ಜೊತೆಗೆ ನಿರಂತರ ನೀರಿನ ವ್ಯವಸ್ಥೆ ಹಾಗೂ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.