
ಗಂಗಾವತಿ (ಮೇ.01): ಮೇ.9ರಂದು ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ 50ನೇ ಅಭಿಮಾನೋತ್ಸವಕ್ಕೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ.
ಅವರ 50 ವರ್ಷ ಸಾಧನೆ ಪ್ರಸ್ತುತ ಬಿಜೆಪಿ ಕಾರ್ಯಕರ್ತರಿಗೆ ಮಾರ್ಗದರ್ಶನವಾಗಿದ್ದಾರೆ. ಈ ಹಿಂದೆ ತಾವು ಚುನಾವಣೆ ಸಂದರ್ಭದಲ್ಲಿ ಅವರ ಜೊತೆಗೆ ಪ್ರಚಾರಕ್ಕೆ ತೆರಳಿದ್ದೇನೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಗಂಗಾವತಿಯಲ್ಲಿ ಚುನಾವಣೆ ಪ್ರಚಾರ ಮಾಡಿ ವಿರೋಧಿಗಳಿಗೆ ಗುಡಗಿದ ಉದಾಹರಣೆಗಳಿವೆ ಎಂದರು. ಯಡಿಯೂರಪ್ಪ ಅವರು ಸೈಕಲ್ ಮೇಲೆ ಪ್ರಚಾರ, ಪೋಸ್ಟರ್ಗಳನ್ನು ಹಚ್ಚಿ ಪಕ್ಷ ಸಂಘಟಿಸಿದ ಮಹಾನ್ ನಾಯಕರಾಗಿದ್ದಾರೆ.
ಇಂತಹ ನಾಯಕರ ಅಭಿಮಾನೋತ್ಸವಕ್ಕೆ 10 ಸಾವಿರಕ್ಕು ಹೆಚ್ಚು ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ ತಾವು ಈ ಹಿಂದೆ ಸಂಸದರಾಗಲು ಯಡಿಯೂರಪ್ಪ ಅವರೇ ಕಾರಣರಾಗಿದ್ದಾರೆ. ತಾಲೂಕ್ ಪಂಚಾಯಿತಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಕಾಣದೆ ಇವರುವ ನನಗೆ ಬಿಜೆಪಿ ಟಿಕೆಟ್ ನೀಡಿ ಸಂಸದರನ್ನಾಗಿ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ವೇಳೆ ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಮಾತನಾಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಾರೆ ಎಂದರು. ಹೊಸಕೇರಿ ಗಿರೇಗೌಡ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಡಿ.ಕೆ.ಆಗೋಲಿ, ಚಂದ್ರಪ್ಪ ಹಿರಿಯೂರು, ತಿಪ್ಪೇರುದ್ರಸ್ವಾಮಿ ಇದ್ದರು.