
ನಾಪೋಕ್ಲು (ಮೇ.01): ಚಲನಚಿತ್ರರಂಗದಲ್ಲಿ ತನಗೆ ಸಿಕ್ಕ ಎಲ್ಲ ಪ್ರಶಸ್ತಿಗಳಿಗಿಂತ ಜನಾಂಗದವರ ಆಶೀರ್ವಾದ, ತಾಯಿ ಕಾವೇರಮ್ಮೆಯ ಆಶೀರ್ವಾದ ಅಮೂಲ್ಯವಾದದು ಎಂದು ಕೊಡಗು ಮೂಲದ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಹೇಳಿದರು. ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಹಿಳೆಯರ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ದಾಟಿಸಿ ಮಾತನಾಡಿದರು.
ತಾಯಿ ಕಾವೇರಮ್ಮನಿಗೆ ತನ್ನನ್ನು ಹೋಲಿಸಿದ್ದು ನಿಮ್ಮೆಲ್ಲರ ಆಶೀರ್ವಾದಕ್ಕೆ ತಾನು ಋಣಿ ಎಂದರು. ಕೊಡಗಿನಲ್ಲಿ ಕೈಲು ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳನ್ನು ಪ್ರಮುಖ ಹಬ್ಬಗಳನ್ನಾಗಿ ಆಚರಿಸಲಾಗುತ್ತಿದೆ ಇದೀಗ ಕೊಡವ ಹಾಕಿ ಉತ್ಸವ ಕೂಡ ಹಬ್ಬಗಳ ಸಾಲಿಗೆ ಸೇರ್ಪಡೆಗೊಂಡಿದ್ದು ನಾಲ್ಕು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಕೊಡಗಿನಲ್ಲಿ ನಡೆಯುವ ಈ ಹಾಕಿ ಉತ್ಸವ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಯಾವುದೇ ಜನಾಂಗದಲ್ಲಿಯೂ ಇಲ್ಲ. ಅಂತಹ ವೈಶಿಷ್ಟ್ಯ ಪೂರ್ಣವಾದ ಹಾಕಿ ಉತ್ಸವವನ್ನು ಕೊಡವ ಜನಾಂಗದವರು ಆಯೋಜಿಸುತ್ತಿರುವುದು ಪ್ರಶಂಶನೀಯ ಎಂದರು. ಇಂಡಿಯನ್ ಹಾಕಿ ಕ್ಯಾಂಪರ್ ಕನ್ನಡ ರಾಣಿ ಕರಂಬಯ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇಂಟರ್ನ್ಯಾಷನಲ್ ಕೀಯರ್ ತೆಕ್ಕಡ ಭವಾನಿ, ಹಾಕಿ ಕರ್ನಾಟಕ ಕಾರ್ಯದರ್ಶಿ, ಮಾಜಿ ಒಲಂಪಿಯನ್ ಅಂಜಪರವಂಡ ಬಿ ಸುಬ್ಬಯ್ಯ, ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟು ಕೂತಂಡ ಪೂನಚ್ಚ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಪುವಯ್ಯ, ದಾಟಿ ಪುವಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮತ್ತಿತರರಿದ್ದರು.
ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ರೋಚಕ ಫೈನಲ್ ಪಂದ್ಯ ಜರುಗಿ ಎರಡು ಗೋಲುಗಳ ಸಮ ಬಲವನ್ನು ಹೊಂದಿದ್ದು ಬಳಿಕ ಟೈ ಬ್ರೇಕ್ ರಲ್ಲಿ 1-2 ಗೋಲುಗಳನ್ನು ಗಳಿಸಿ ಕೇಚೆಟ್ಟಿರ ವಿಜಯದ ಮಾಲೆಯನ್ನು ಮುಡಿಗೇರಿಸಿಕೊಂಡಿತು.