ತುಮಕೂರು: ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ, ಶಾಸಕರ ಖಡಕ್ ವಾರ್ನಿಂಗ್

By Kannadaprabha NewsFirst Published Aug 4, 2019, 9:48 AM IST
Highlights

ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಚಿಕ್ಕನಾಯಕನಹಳ್ಳಿ  ಶಾಸಕ ಜೆ.ಸಿ.ಮಾಧುಸ್ವಾಮಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ನಿಮಗೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ಬಿಟ್ಟಿಸಂಬಳ ಬೇಕು. ನಿಮ್ಮಂತವರನ್ನಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ನೀವು ಜಾಗ ಖಾಲಿ ಮಾಡಿ, ಬೇರೆ ಕೆಲಸಗಾರರನ್ನಿಟ್ಟುಕೊಂಡು ನಾವು ಜನರಿಗೆ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ಹೇಳಿದರು.

ತುಮಕೂರು(ಆ.04): ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಚಿಕ್ಕನಾಯಕನಹಳ್ಳಿ  ಶಾಸಕ ಜೆ.ಸಿ.ಮಾಧುಸ್ವಾಮಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ತಾಲೂಕು ಕಚೇರಿಯಲ್ಲಿ ನಡೆದ ಪಟ್ಟಣದ ಪುರಸಭೆಯ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ 20 ದಿನಕ್ಕೊಮ್ಮೆ ಕುಡಿಯುವ ನೀರಿನ ಅಸಮರ್ಪಕ ವಿತರಣೆ, ವಾರಗಟ್ಟಲೆ ಕಸವಿಲೇವಾರಿ ಮಾಡದೆ ಅನೈರ್ಮಲ್ಯಉಂಟಾಗಿ ರೋಗ ರುಜಿನುಗಳಿಗೆ ದಾರಿಯುಂಟಾಗಿದೆ. ನಿಮಗೆ ಸಮರ್ಥವಾಗಿ ಕೆಲಸ ಮಾಡಲು ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಕಿಡಿಕಾರಿದರು.

ಕೆಲಸ ಮಾಡದೇ ಬಿಟ್ಟಿಸಂಬಳ ಬೇಕಾ?:

ಇದರಿಂದ ಬಾಬು ಮೇಲೆ ಮತ್ತೂ ಸಿಟ್ಟಾದ ಶಾಸಕರು ಪ್ರತಿನಿತ್ಯ 6 ಲಕ್ಷ ಲೀ ನೀರು ಲಭ್ಯವಿದ್ದರೆ. ಇಲ್ಲಿನ ಜನಸಂಖ್ಯೆಗೆ 3 ದಿಕ್ಕೊಮ್ಮೆ ನೀರು ಬಿಡಬಹುದು. ವಿಶ್ವ ಆರೋಗ್ಯ ಯೋಜನೆ ಪ್ರಕಾರ ಪ್ರತಿನಿತ್ಯ ಒಬ್ಬ ಮನುಷ್ಯನಿಗೆ 135 ಲೀ ನೀರು ಬೇಕು. ಆದರೆ ಇಲ್ಲಿ ಕೇವಲ 25 ಲೀ ನೀರನ್ನು ಅದೂ 15-20ದಿನಕ್ಕೆ ಬಿಡಲಾಗುತ್ತಿದೆ. ಇನ್ನು ಸ್ವಚ್ಛತೆಯಂತೂ ಕೇಳುವಂತೇಯೇ ಇಲ್ಲ. ಪ್ರಮುಖ ಬೀದಿಗಳಲ್ಲಿಯೇ ವಾರವಾದರು ಕಸತೆಗೆಯುವುದಿಲ್ಲವೆಂಬ ದೂರು ಸಾಮಾನ್ಯವಾಗಿದೆ. ನಿಮಗೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ಬಿಟ್ಟಿಸಂಬಳ ಬೇಕು. ನಿಮ್ಮಂತವರನ್ನಿಟ್ಟುಕೊಂಡು ಪಟ್ಟಣದ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ನೀವು ಜಾಗ ಖಾಲಿ ಮಾಡಿ, ಬೇರೆ ಕೆಲಸಗಾರರನ್ನಿಟ್ಟುಕೊಂಡು ನಾವು ಜನರಿಗೆ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ಹೇಳಿದರು.

ಸದಸ್ಯರು ಪ್ರತಿಷ್ಠೆ ನಿಲ್ಲಿಸಿ:

ಪಟ್ಟಣದಲ್ಲಿರುವ ಮತ್ತೊಂದು ಸಮಸ್ಯೆ ಪಬ್ಲಿಕ್‌ ನಲ್ಲಿಗಳಿದ್ದು, ಕೊಳವೆ ಬಾವಿಗಳಿಂದ ಬರುವ ನೀರು ಜಲಸಂಗ್ರಹಾಗಾರಗಳಿಗೆ ಹೋಗದೆ ಬರೀ ರೈಸಿಂಗ್‌ ಮೈನ್‌ನಲ್ಲಿರುವ ನಲ್ಲಿಗಳ ಮೂಲಕ ಹರಿಯುವುದರಿಂದ ಓವರ್‌ ಹೆಡ್‌ ಟ್ಯಾಂಕ್‌ಗಳು ತುಂಬದೆ ನೀರು ವಿತರಣೆ ಹಳ್ಳ ಹಿಡಿದಿದೆ. ಇಂತಹ ನಲ್ಲಿಗಳನ್ನು ತಮ್ಮ ವಾರ್ಡ್‌ಗಳಲ್ಲಿ ಅತಿ ಹೆಚ್ಚು ಹಾಕಿಸುವುದೇ ತಮ್ಮ ಪ್ರತಿಷ್ಠೆ ಎಂದು ಸದಸ್ಯರು ಭಾವಿಸಿರುವುದರಿಂದ ಇದರ ಪರಿಹಾರ ಅಸಾಧ್ಯ. ಸದಸ್ಯರು ಅನಾವಶ್ಯಕವಾಗಿ ಮಧ್ಯಪ್ರವೇಶ ಮಾಡುವುದನ್ನು ನಿಲ್ಲಿಸದ ಹೊರತು ಪರಿಹಾರ ಅಸಾಧ್ಯ ಎಂದರು.

ಪಕ್ಕಾ ಲೆಕ್ಕಾ ಕೊಡಿ:

ಕೊನೆಯಲ್ಲಿ ಸದಸ್ಯರು ಟ್ಯಾಂಕರ್‌ ಮೂಲಕ ನೀರು ಸಬರಾಜಿಗೆ ಅವಕಾಶ ನೀಡಬೇಕೆಂದು ಶಾಸಕರನ್ನು ಕೋರಿದಾಗ ಅವರು ಇದನ್ನು ತಳ್ಳಿ ಹಾಕಿದರು. ಈ ಹಿಂದಿನ ಆಡಳಿತ ಮಂಡಳಿ ಕಾಲದಲ್ಲಿ ಟ್ಯಾಂಕರ್‌ ವಿಚಾರದಲ್ಲಿ ಅವ್ಯವಹಾರ ನಡೆದಿದೆ. ಆದ್ದರಿಂದ ಇದಕ್ಕೆ ನನ್ನ ಸಮ್ಮತಿಯಿಲ್ಲ. ಅವಶ್ಯಕತೆಯಿದ್ದರೆ ಟ್ಯಾಂಕರ್‌ ಮೂಲಕ ಸಂಪ್‌ಗಳಿಗೆ ಸಂಗ್ರಹಿಸಿ ವಿತರಿಸಿ, ಇದಕ್ಕೂ ಪ್ರತಿ ಟ್ರಿಪ್‌ಗೂ ಪಕ್ಕ ಲೆಕ್ಕಾ ಕೊಡಬೇಕು ಎಂದರು.

ನೀರಿಗಾಗಿ ರಾಜೀನಾಮೆ ನೀಡಲೂ ಸಿದ್ಧ ಎಂದ್ರು ಶಾಸಕ

ಮಾಹಿತಿ ನೀಡಲು ತಡಬಡಾಯಿಸಿದ ಎಂಜಿನಿಯರ್‌:

ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಕೊರೆದಿರುವ 49 ಕೊಳವೆ ಬಾವಿಗಳು ಮತ್ತು ಅವುಗಳಿಂದ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ಶಾಸಕರು ಪ್ರಶ್ನಿಸಿದಾಗ ಎಂಜಿನಿಯರ್‌ ಯೋಗಾನಂದಬಾಬು ಸಮರ್ಪಕ ಉತ್ತರ ನೀಡಲು ಹಿಂಜರಿಯುತ್ತಿದ್ದು ಕಂಡುಬಂತು. ನಂತರ ಮಾಹಿತಿ ನೀಡಿದ ಎಂಜನಿಯರ್‌ ಹಾಲಿ ಕೊರೆದಿರುವ 49 ಕೊಳವೆ ಬಾವಿಗಳಲ್ಲಿ 29ರಲ್ಲಿ ನೀರಿಲ್ಲ. ಉಳಿದ 21 ಕೊಳವೆಬಾವಿಗಳಿಂದ ಪ್ರತಿನಿತ್ಯ 6 ಲಕ್ಷ ಲೀ ನೀರು ದೊರೆಯುತ್ತದೆ ಎಂದು ತಪ್ಪು ಮಾಹಿತಿ ನೀಡಿದರು.

ಇದನ್ನು ಸಭೆಯಲ್ಲಿದ್ದ ಪುರಸಭಾ ಸದಸ್ಯರು ವಿರೋಧಿಸಿದರು. ಎಂಜಿನಿಯರ್‌ ಬಾಬು ಪಟ್ಟಣದಲ್ಲಿರುವ ಕೊಳವೆ ಬಾವಿಗಳಿಂದ ದೊರೆಯುವ ನೀರಿನ ಬಗ್ಗೆಯಾಗಲಿ ಅಥವಾ ನಲ್ಲಿಗಳ ಬಗ್ಗೆಯಾಗಲಿ ಮಾಹಿತಿಯೇ ಇಲ್ಲ. ಇವರು ನೀಡುತ್ತಿರುವ ಉತ್ತರ ಬರೀ ಬೊಗಳೆ ಎಂದು ಖಂಡಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಬಿ.ತೇಜಸ್ವಿನಿ, ಇಒ ನಾರಾಯಣಸ್ವಾಮಿ, ಪ್ರಭಾರ ಮುಖ್ಯಾಧಿಕಾರಿ ನಿರ್ವಾಣಯ್ಯ, ಪಟ್ಟಣದ ಎಲ್ಲಾ ವಾರ್ಡ್‌ಗಳ ಸದಸ್ಯರು ಹಾಜರಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 J C Madhuswamy slams Municipality Officials to work properly

click me!