ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್‌ ಗೌಡ ತರಾಟೆ

Published : Jun 16, 2023, 11:41 PM IST
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್‌ ಗೌಡ ತರಾಟೆ

ಸಾರಾಂಶ

ಮಳೆಯಿಂದಾದ ಹಾನಿಗೊಳಗಾದ ಆದಿವಾಸಿಗಳ ಮನೆಗಳಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದೀರಲ್ಲ ಏಕೆ.., ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿಗೆ ಲಂಚದ ಹಾವಳಿ ಹೆಚ್ಚಾಗಿದೆ ಎಂಬ ದೂರಿದೆ..ಇದು ಸರೀನಾ..

ಹುಣಸೂರು (ಜೂ.16): ಮಳೆಯಿಂದಾದ ಹಾನಿಗೊಳಗಾದ ಆದಿವಾಸಿಗಳ ಮನೆಗಳಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದೀರಲ್ಲ ಏಕೆ.., ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿಗೆ ಲಂಚದ ಹಾವಳಿ ಹೆಚ್ಚಾಗಿದೆ ಎಂಬ ದೂರಿದೆ..ಇದು ಸರೀನಾ.. ಇದು ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಬುಧವಾರ ಶಾಸಕ ಜಿ.ಡಿ. ಹರೀಶ್‌ಗೌಡ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಮೊದಲ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದಾಗಿತ್ತು. ಶಾಸಕರ ಪ್ರಶ್ನೆಗಳಿಗೆ ಅಧಿಕಾರಿಗಳ ಮೌನವೇ ಉತ್ತರವಾಗಿತ್ತು.

ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರದ ಪರಿಹಾರಧನ ಸಿಕ್ಕಿವೆಯೇ? ಎಷ್ಟುಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾಕೆ ಮಾಡಿಕೊಂಡಿದ್ದಾರೆ ಎಂದು ವಿಚಾರಿಸಿದ್ದೀರಾ ಎಂದು ಪ್ರಶ್ನಿಸಿದರು. ತಹಸೀಲ್ದಾರ್‌ರಾದಿಯಾಗಿ ಎಲ್ಲರೂ ಮೌನವಾಗಿದ್ದರು. ಮಳೆ ಹಾನಿ ಜನರ ಜೀವನ ಅಸ್ತವ್ಯಸ್ತಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ಗಿರಿಜನ ಹಾಡಿಗಳಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡಿರುವ ಗಿರಿಜನರಿಗೆ ಮನೆ ನಿರ್ಮಿಸಿಕೊಳ್ಳಲು ನೀವು ಕೊಟ್ಟಿರುವ ಪರಿಹಾರಮೊತ್ತ ಸೊನ್ನೆಯಾಗಿದೆ. ಇದ್ಯಾಕೆ ಹೀಗೆ? ಪರಿಹಾರ ನೀಡಲು ಲಂಚ ಕೇಳುತ್ತಿದ್ದೀರಾ ಎನ್ನುವ ದೂರು ನನ್ನಲ್ಲಿಗೆ ಬಂದಿದೆ. ನಾಡ ಕಚೇರಿಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳದ್ದೇ ದರ್ಬಾರ್‌ ಆಗಿದೆ. ಪಿಂಚಣಿ ಪಡೆಯಲು ಲಂಚ ನೀಡಬೇಕಂತೆ. ಇದು ಎಷ್ಟುಸರಿ? ನಮ್ಮ ರೈತರ ಆಸ್ತಿಪಾಸ್ತಿ ಕಾಪಾಡುವ ಜವಾಬ್ದಾರಿ ನಿಮ್ಮದು. ಮುಂದೆ ಈ ರೀತಿ ಎಚ್ಚರವಹಿಸಿರೆಂದು ಸೂಚಿಸಿದರು.

ಜು.1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನ: ಡಿ.ಕೆ.ಶಿವಕುಮಾರ್‌

ಅಕ್ರಮ ಸಕ್ರಮದ ಕಥೆಯೇನು?: ಕಳೆದ 5 ವರ್ಷಗಳಲ್ಲಿ ಅಕ್ರಮ ಸಕ್ರಮದ 97ಅರ್ಜಿಗಳನ್ನು ಮಾತ್ರ ವಿಲೇ ಮಾಡಿದ್ದೀರಿ. ಇನ್ನೂ ಸಾವಿರಾರು ಅರ್ಜಿಗಳು ಬಾಕಿಯಿವೆಯಲ್ಲ ಯಾಕೆ? ಒಂದೇ ಕುಟುಂಬದ ನಾಲ್ವರಿಗೆ ಸಾಗುವಳಿ ಚೀಟಿ ನೀಡಿದ್ದು ಹೇಗೆ? ಇದು ಕಾನೂನು ಬಾಹಿರವಾಗಿದ್ದು, ಸಾಗುವಳಿ ಚೀಟಿ ಕೊಟ್ಟಅಧಿಕಾರಿ ಮುಂದೆ ಬೆಲೆ ತೆರೆಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ಮುಂದೆ ತಿಂಗಳಿಗೊಂದು ಕಂದಾಯ ಇಲಾಖೆಯ ಸಭೆ ತೆಗೆದುಕೊಳ್ಳುತ್ತೇನೆ ಎಂದರು. ತಹಸೀಲ್ದಾರ್‌ ಡಾ.ಎಸ್‌.ಯು. ಅಶೋಕ್‌, ಗ್ರೇಡ್‌ 2 ತಹಸಿಲ್ದಾರ್‌ ನರಸಿಂಹಯ್ಯ, ಉಪತಹಸೀಲ್ದಾರ್‌ ಅರುಣ್‌, ಚೆಲುವರಾಜು, ಅರುಣ್‌ಸಾಗರ್‌, ಶಿರಸ್ತೇದಾರ್‌ ಶಕೀಲಾಬಾನು, ಕಿರಣಕುಮಾರ್‌, ಶೋಭ, ಆರ್‌ಐಗಳಾದ ನಂದೀಶ್‌, ಪುರುಷೋತ್ತಮ, ರಾಜ್‌ ಅರಸು ಇದ್ದರು.

ಪಿಡಿಒಗಳು ಕ್ರಿಯಾಶೀಲರಾದಲ್ಲಿ ಗ್ರಾಮಗಳ ಅಭಿವೃದ್ಧಿ: ಪ್ರತಿ ಗ್ರಾಮ ಪಂಚಾಯಿತಿಯಿಂದ ವರ್ಷಕ್ಕೊಂದು ಮಾದರಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಸ್ಮಶಾನಗಳನ್ನು ನಿರ್ಮಿಸುವ ಹೊಣೆಯನ್ನು ಆಯಾ ಇಲಾಖೆ ಅಧಿಕಾರಿಗಳು ಹೊರಬೇಕು ಎಂದು ಶಾಸಕ ಜಿ.ಡಿ. ಹರೀಶ್‌ಗೌಡ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ಪಿಡಿಒಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಅಭಿವೃದ್ಧಿಯ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪಿಡಿಒ ಬಳಿ ತನ್ನ ಗ್ರಾಪಂಯ ಅಭಿವೃದ್ಧಿಯ ಕುರಿತಾಗಿನ ಕ್ರಿಯಾಯೋಜನೆ ಇರಬೇಕು. ವರ್ಷಕ್ಕೊಂದು ಶಾಲೆ, ಸ್ಮಶಾನ, ಆರೋಗ್ಯ ಕೇಂದ್ರ ಮತ್ತು ಅಂಗನವಾಡಿಯನ್ನು ಮಾದರಿ ಕೇಂದ್ರಗಳನ್ನಾಗಿ ಪರಿವರ್ತಿಸಿರಿ ಎಂದರು.

ವಿದ್ಯಾಭ್ಯಾಸವನ್ನು ಅರ್ಧಕ್ಕೆ ಯಾರೂ ನಿಲ್ಲಿಸಬೇಡಿ: ಶಾಸಕ ಹರೀಶ್‌ ಗೌಡ ಕರೆ

ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳೀರಿ. ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ. ಪಿಡಿಒಗಳು ಕಚೇರಿಯಲ್ಲಿ ಕೂರದೇ ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಅರಿತು ಬಗೆಹರಿಸಿರಿ. ನಿಮ್ಮ ವ್ಯಾಪ್ತಿಯಲ್ಲಿ ಗ್ರಾಮೀಣರಿಂದ ದೂರಗಳು ನನ್ನ ಬಳಿ ಬಂದಲ್ಲಿ ನಾನು ಶಿಸ್ತು ಕ್ರಮ ವಹಿಸುವುದು ಖಚಿತ ಎಂದು ಅವರು ಎಚ್ಚರಿಸಿದರು. ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ಕಾರ್ಯ ನಿರ್ವಹಿಸಿ. ಮಾಹಿತಿಯ ಕೊರತೆಯಿದ್ದರೆ ಸಂಬಂಧಪಟ್ಟವರ ಬಳಿ ಪಡೆಯಿರಿ. ಬದಲಾಗಿ ಯೋಜನೆಯನ್ನೇ ವಿಫಲಗೊಳಿಸುವ ಕಾರ್ಯ ಬೇಡ. ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ವಿವಿಧ ವಸತಿ ಯೋಜನಗಳ ಅನುದಾನ ಫಲಾನುಭವಿಗಳಿಗೆ ಬಾಕಿ ಇದೆ ಯಾಕೆ? ಯೋಜನೆಗಳ ಕುರಿತು ಮಾಹಿತಿ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು