ಪರಿಹಾರ ನೀಡಿ ಟೀಕಾ​ಕಾ​ರರ ಬಾಯಿ ಮುಚ್ಚಿ​ಸಿದ ಪ್ರಧಾ​ನಿ: ನಡಹಳ್ಳಿ

By Web DeskFirst Published Oct 7, 2019, 11:34 AM IST
Highlights

ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು, ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ 1200 ಕೋಟಿ ಪರಿಹಾರವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುವ ಮೂಲಕ ಹಿಂದೆ ಯಾವುದೇ ಸರ್ಕಾರ ಮಾಡದ ಕೆಲಸ ಮಾಡಿ ಕನ್ನಡಿಗರ ಮೇಲಿನ ತಮ್ಮ ಅಪಾರ ಪ್ರೀತಿ ಅನಾವರಣಗೊಳಿಸಿದ್ದಾರೆ ಎಂದ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ| ಹಿಂದಿನ ಕೇಂದ್ರ, ರಾಜ್ಯ ಸರ್ಕಾರಗಳು ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ಕೊಡದೆ ಅಲ್ಪಸ್ವಲ್ಪ ಕೊಟ್ಟು ಕೈ ತೊಳೆದುಕೊಂಡಿದ್ದವು| 

ಮುದ್ದೇಬಿಹಾಳ(ಅ.7): ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು, ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ 1200 ಕೋಟಿ ಪರಿಹಾರವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುವ ಮೂಲಕ ಹಿಂದೆ ಯಾವುದೇ ಸರ್ಕಾರ ಮಾಡದ ಕೆಲಸ ಮಾಡಿ ಕನ್ನಡಿಗರ ಮೇಲಿನ ತಮ್ಮ ಅಪಾರ ಪ್ರೀತಿ ಅನಾವರಣಗೊಳಿಸಿದ್ದಾರೆ. ಇದು ಮೋದಿ ಟೀಕಾಕಾರರ ಬಾಯಿ ಮುಚ್ಚುವಂತೆ ಮಾಡಿದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ಇಲ್ಲಿನ ದಾಸೋಹ ನಿಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದೆಯೂ ನೆರೆ ಹಾವಳಿ ರಾಜ್ಯವನ್ನು ಅಲ್ಲಾಡಿಸಿತ್ತು. ಆಗ ಹಿಂದಿನ ಕೇಂದ್ರ, ರಾಜ್ಯ ಸರ್ಕಾರಗಳು ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ಕೊಡದೆ ಅಲ್ಪಸ್ವಲ್ಪ ಕೊಟ್ಟು ಕೈ ತೊಳೆದುಕೊಂಡಿದ್ದವು. ಆದರೆ ಮೋದಿ ಎಲ್ಲ ಕೋನದಿಂದಲೂ ಪರಿಶೀಲಿಸಿ, ತಡವಾಗಿಯಾದರೂ ಹೆಚ್ಚಿನ ಪರಿಹಾರ ನೀಡಿರುವುದು ಶ್ಲಾಘನೀಯ. ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೆರೆ ಹಾವಳಿ ಹೆಚ್ಚಿನ ಹಾನಿ ಮಾಡಿತ್ತು. ಆಗ ಅವರು ವಿರೋಧ ಪಕ್ಷದ ಶಾಸಕರು ಅಧಿಕಾರದಲ್ಲಿದ್ದರೂ ಮುದ್ದೇಬಿಹಾಳ ಮತಕ್ಷೇತ್ರದ 2, ದೇವರ ಹಿಪ್ಪರಗಿ ಮತಕ್ಷೇತ್ರದ 3 ಸೇರಿ ರಾಜ್ಯದ 160 ಪ್ರವಾಹಪೀಡಿತ ಹಳ್ಳಿಗಳನ್ನು ವಸತಿ ಸೌಕರ್ಯ ಸಮೇತ ಸ್ಥಳಾಂತರಗೊಳಿಸಿ ಜನಮೆಚ್ಚುವ ಕಾರ್ಯ ಮಾಡಿದ್ದರು. ಹಿಂದಿನ ಯಾವುದೇ ಬಿಜೆಪಿಯೇತರ ಸರ್ಕಾರ ಈ ಕೆಲಸ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಹಿಂದೆ ಕಾಂಗ್ರೆಸ್‌ ಸರ್ಕಾರದ ಸಿಎಂ ಆಗಿದ್ದ ಸಿದ್ದರಾಮಯ್ಯ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸಿ ಕೃಷ್ಣಾಕೊಳ್ಳದ ಯೋಜನೆಗೆ ಪ್ರತಿ ವರ್ಷ 10000 ಕೋಟಿ ನೀಡುವ ವಾಗ್ದಾನ ಮಾಡಿ ಜನರಿಗೆ ಮಂಕುಬೂದಿ ಎರಚಿದ್ದರು. ಆದರೆ ಈಗಿನ ಸಿಎಂ ಯಡಿಯೂರಪ್ಪ ಅವರು ಇದೇ ಯೋಜನೆಗೆ 20000 ಕೋಟಿ ಕೊಡುವುದಾಗಿ ಹೇಳಿರುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.

ಮುದ್ದೇಬಿಹಾಳ ಮತಕ್ಷತ್ರದ ಕೃಷ್ಣಾ ನದಿ ತೀರದಲ್ಲಿ ಬರುವ ಈಗಾಗಲೇ ಪುನರ್ವಸತಿ ಕಂಡಿದ್ದರೂ ಮೂಲ ಸೌಕರ್ಯ ಕೊರತೆ ಇರುವ ಗ್ರಾಮಗಳ ಜಂಟಿ ಸಮೀಕ್ಷೆ ನಡೆಸುವಂತೆ ಹಾಗೂ ಮೊನ್ನೆ ಸಂಭವಿಸಿದ ಪ್ರವಾಹದಿಂದ ತೊಂದರೆಗೊಳಗಾಗಿರುವ ಗ್ರಾಮಗಳ ಜನರು ಪುನರ್ವಸತಿ, ಸ್ಥಳಾಂತರಕ್ಕೆ ಸಂಪೂರ್ಣ ಒಪ್ಪಿಗೆ ನೀಡಿದರೆ ಸೂಕ್ತ ಜಮೀನು ಗುರ್ತಿಸಿ ಸ್ಥಳಾಂತರ ಬಗ್ಗೆ ಕ್ರಮ ಕೈಕೊಳ್ಳುವಂತೆ ಯಡಿಯೂರಪ್ಪ ಅವರು ಆಲಮಟ್ಟಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿರುವುದು ನಮ್ಮ ಬೇಡಿಕೆಗೆ ದೊರೆತ ಮನ್ನಣೆ ಎಂದರು.

ಎಂ.ಬಿ.ಪಾಟೀಲ ವಿರುದ್ಧ ಟೀಕೆ:

ಹಿಂದಿನ ನೀರಾವರಿ ಸಚಿವರು (ಎಂ.ಬಿ.ಪಾಟೀಲ) ಕೃಷ್ಣೆಗೆ ಪ್ರವಾಹ ಬಂದ ಸಂದರ್ಭ ಒಂದು ದಿನವೂ ಜನರ ಅಳಲು ಕೇಳಲಿಲ್ಲ, ಸಕಾರಾತ್ಮಕ ಸ್ಪಂದಿಸ​ಲಿಲ್ಲ. ಈಗ ಅಧಿಕಾರ ಹೋದ ಮೇಲೆ ನಮ್ಮ ಜನರು ನೆನಪಾಗಿದ್ದಾರೆ ಎಂದು ಟೀಕಿಸಿದರು. ತಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಹ ಪೀಡಿತರಿಗೆ ಏನನ್ನೂ ಮಾಡದೆ ಇರುವವರು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವ ನೈತಿಕತೆ ಕೆಳದುಕೊಂಡಿದ್ದಾರೆ. ಅವರು ಪ್ರಸ್ತುತ ಬಿಜೆಪಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಟೀಕೆಗಳು ಹಾಸ್ಯಾಸ್ಪದ ಎಂದು ಕುಟುಕಿದರು.

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರನ್ನು ಟೀಕಿಸುವುದಕ್ಕೂ ಮೊದಲು ಅವರು ಏನು ಮಾಡಿದ್ದಾರೆಂದು ಅವಲೋಕಿಸಿಕೊ​ಳ್ಳು​ವುದು ಉತ್ತಮ. ಬಿಜೆಪಿ ಸರ್ಕಾರ ಜನಪರ ಎನ್ನುವುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ ಎಂದರು.
 

click me!