ದಶಕದ ಬೇಡಿಕೆ: ಕೆರೆ ತುಂಬಿಸಿ ನೀರಿನ ಹಾಹಾಕಾರ ಈಡೇರಿಸಿದ ಶಾಸಕ ನಡಹಳ್ಳಿ

By Kannadaprabha NewsFirst Published May 9, 2020, 2:15 PM IST
Highlights

ಮಲಗಲದಿನ್ನಿ ಕೆರೆಗೆ ನೀರು ತುಂಬಿಸುವ ಮೂಲಕ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಈ ಭಾಗದ ಭಗೀರಥ| ದಶಕದ ಬೇಡಿಕೆ: ಕೆರೆ ತುಂಬಿಸಿ ಈಡೇರಿಕೆ| ಕೆರೆಗೆ ಬಾಗಿ ಅರ್ಪಿಸಿದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ|

ಜೆ.ಎನ್‌ ಯಾಚಾರಿ 

ಮುದ್ದೇಬಿಹಾಳ(ಮೇ.09): ನಾಲ್ಕಾರು ವರ್ಷಗಳಿಂದ ಕೈಕೊಟ್ಟ ಮಳೆ, ಇದ್ದ ಬೋರವೆಲ್‌ನಲ್ಲಿ ಪಾತಾಳ ಕಂಡು ನೀರು ರೈತರನ್ನು ಸಂಕಷ್ಟದ ಕೂಪಕ್ಕೆ ತಳ್ಳುವಂತೆ ಮಾಡಿತ್ತು. ಆದರೆ, ಪ್ರಸಕ್ತ ವರ್ಷದ ಬಿರು ಬೇಸಿಗೆಯಲ್ಲಿಯೇ ಶಾಸಕರು ವಿಶೇಷ ಕಾಳಜಿ ವಹಿಸಿ ಕೆರೆಗೆ ನೀರು ಹರಿಸುವ ಮೂಲಕ ರೈತರ ಮೊಗದಲ್ಲಿ ಸಂತಸದ ಜಲಧಾರೆಯ ಹರಿಸಿದ್ದಾರೆ.

ಕೃಷ್ಣಾ ಮೇಲ್ದಂಡೆಯಿಂದ ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಕಾಲುವೆಗಳ ಮೂಲಕ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸುವ ಬಹುವರ್ಷಗಳ ಬೇಡಿಕೆಯಾಗಿದ್ದ ಕನಸನ್ನು ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ನನಸಾಗಿಸಿದ್ದಾರೆ.

ಕೃಷ್ಣಾ ನೀರು ನಿರ್ವಹಣೆ ಮಂಡಳಿ ರದ್ದತಿಗೆ ಆಗ್ರಹ: ಪ್ರಧಾನಿ ಮೋದಿಗೆ ಮನವಿ

ತಾಲೂಕಿನ ಮಲಗಲದಿನ್ನಿ ಕೆರೆಗೆ ಸಂಬಂಧಿಸಿದಂತೆ ಅಡವಿ ಸೋಮನಾಳ, ನಾಗರಬೆಟ್ಟಹಾಗೂ ಹಿರೆಮೂರಾಳ 3 ಪಂಚಾಯತಿಗಳ ವ್ಯಾಪ್ತಿಗೆ ಬರುವ ಬೂದಿಹಾಳ, ಮಾನಬಾವಿ, ಮಲಗಲದಿನ್ನಿ, ನಾಗರಬೆಟ್ಟ, ಚವನಬಾವಿ, ಹಿರೆಮೂರಾಳ ಸೇರಿದಂತೆ ಜಂಗಮುರಾಳ ಒಟ್ಟು 7 ಗ್ರಾಮಗಳು ಕೆರೆ ಅವಲಂಬಿಸಿವೆ. ಸುಮಾರು 56 ಎಕರೆ ವಿಸ್ತಿರ್ಣವಾದ ಕೆರೆಗೆ ನೀರು ಬಂದಿದ್ದು, ರೈತರ ಬಾಳನ್ನು ಮತ್ತಷ್ಟು ಹಸಿರಾಗಿಸಿದೆ.

ಕಾಲುವೆ ದುರಸ್ತಿಗೆ 75 ಲಕ್ಷ ಬಿಡುಗಡೆ

2011-12ರಲ್ಲಿ ಕೆರೆಗೆ ಮಳೆನೀರು ಸಂಗ್ರಹಿಸುವ ಕಾರ್ಯ ನಡೆದಿತ್ತು. ಕಾಮಗಾರಿ ಪ್ರಾರಂಭಗೊಂಡಿದ್ದರೂ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಹೀಗಾಗಿ ರೈತರು ಮಳೆ ಆಧಾರಿತ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಳ್ಳಬೇಕಿತ್ತು. ನಾಲ್ಕೈದು ವರ್ಷಗಳ ಹಿಂದೆ ಕಾಲುವೆ ಕಾಮಗಾರಿಗಳು ಪೂರ್ಣಗೊಂಡರೂ ಇಲ್ಲಿಯವರೆಗೆ ಯಾವುದೇ ನೀರು ಹರಿಸುವ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಇಲ್ಲಿಯವರೆಗೆ ನೀರು ಬಾರದೆ ಕಾಲುವೆಗಳು ದುರಸ್ತಿಯ ಅಂಚಿಗೆ ಬಂದು ನಿಂತಿದ್ದವು. ಕಳೆದ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಆಲಮಟ್ಟಿ ಆಣೆಕಟ್ಟಿನಿಂದ ಹರಿದು ಹಾಳಾಗುತ್ತಿದ್ದು, ಅದರ ಸದ್ಬಳಕೆಗೆ ಮುಂದಾದ ಸದ್ಯದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿಯವರು ವಿಶೇಷ ಕಾಳಜಿ ಹಾಗೂ ಸತತ ಪ್ರಯತ್ನದಿಂದ ಕಾಲುವೆಗಳ ದುರಸ್ತಿಗಾಗಿ .75 ಲಕ್ಷ ವೆಚ್ಚ ಖರ್ಚು ಮಾಡಿಸಿ ನೀರು ಹರಿಸಿದರು.

ನೀರು ಹರಿಸಲು ಪಣತೊಟ್ಟ ನಡಹಳ್ಳಿ

ಚಿಮ್ಮಲಗಿ ಏತ ನಿರಾವರಿ ಕಾಲುವೆಗಳನ್ನು ಅರ್ಧ ಕಾಮಗಾರಿ ನಡೆಸಿದ್ದ ಪರಿಣಾಮ ಕಾಲುವೆಗಳು ಒಡೆದಿದ್ದವು. ಹೀಗಾಗಿ ಹಲವು ಮುಖಂಡರು ಶಾಸಕ ನಡಹಳ್ಳಿಯವರ ಗಮನಕ್ಕೆ ತಂದ ನಂತರ ತಕ್ಷಣವೇ ಕೆಬಿಜೆಎನ್‌ಎಲ್‌ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ದುರಸ್ತಿ ಕಾರ್ಯಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ರೂಪಿಸಿ ಧನ ಸಹಾಯಕ್ಕಾಗಿ ಸರ್ಕಾರಕ್ಕೆ ಬೆನ್ನು ಬಿದ್ದು ಅನುದಾನ ಬಿಡುಗಡೆ ಮಾಡಿಸಿದರು. ನಂತರ ಕಾಲುವೆ ದುರಸ್ತಿ ಮಾಡಿಸಿ ನೀರು ಹರಿಸುವಲ್ಲಿ ಯಶಸ್ವಿಯಾದರು.

ಮತ್ತೆ ಚಿಗುರೊಡೆದ ಈರುಳ್ಳಿ ಬೆಳೆ:

ಚವನಬಾವಿ, ಮಲಗಲದಿನ್ನಿ ಮತ್ತು ಇತರೇ ಗ್ರಾಮಗಳಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆದ ಕೋಟ್ಯಂತರ ರುಪಾಯಿ ಲಾಭ ಪಡೆದುಕೊಳ್ಳುತ್ತಿದ್ದರು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಮಳೆ ಇಲ್ಲದೇ ಕೆರೆಗೆ ನೀರು ಬರದೇ ಇರುವುದರಿಂದ ಈರುಳ್ಳಿ ಬೆಳೆ ಕಡಿಮೆಯಾಗಿದ್ದು, ರೈತರು ಆರ್ಥಿಕ ಸಂಕಷ್ಟವನ್ನು ಅನುಭವಿಸುವಂತಾಗಿತ್ತು. ಸದ್ಯ ಕೆರೆಗೆ ನೀರು ಬಂದಿರುವ ಪರಿಣಾಮ ಬೋರವೆಲ್‌ಗಳು ಚಾಜ್‌ರ್‍ ಆಗಿ ಈರುಳ್ಳಿ ಬೆಳೆಯಲು ರೈತರಿಗೆ ಅನುಕೂಲವಾಗಿದೆ.

ಕಳೆದ ಇಪ್ಪತೈದು ವರ್ಷಗಳಿಂದ ಈ ಭಾಗದಲ್ಲಿ ಮಾಡದ ಅಭಿವೃದ್ಧಿಯನ್ನು ಕೇವಲ ಮೂರೇ ವರ್ಷದಲ್ಲಿ ತಾಲೂಕಿನ ಬಹುತೇಕ ಎಲ್ಲ ಕೆರೆಗಳನ್ನು ತುಂಬಿಸುವ ಮೂಲಕ ನೂರಾರು ಕೋಟಿ ಅನುದಾನ ತರುವುದರ ಜೊತೆ ಮಾದರಿಯ ಕ್ಷೇತ್ರವನ್ನಾಗಿ ಮಾಡಿದ್ದೇನೆ. ಕಾರಣ ನನಗೂ ಕೂಡ ಮುಂದಿನ ಇಪ್ಪತೈದು ವರ್ಷಗಳ ಅಧಿಕಾರ ಕೊಡಿ ಮತಕ್ಷೇತ್ರವನ್ನು ಸ್ವರ್ಗವನ್ನೇ ಮಾಡಿ ತೋರಿಸುತ್ತೇನೆ.2018 ರಲ್ಲಿ ಈ ಮತಕ್ಷೇತ್ರದಲ್ಲಿ ಗೆದ್ದು ಶಾಸಕನಾದ ಮೇಲೆ ಕೇವಲ ಶಾಸಕನಾದರೇ ಕೆರೆಗಳನ್ನು ಪುನರ್‌ನಿರ್ಮಾಣ ಮಾಡುವುದರ ಜೊತೆಗೆ ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಾರಂಭಿಸಿ ಇಂದು ಅಂತರ್ಜಲ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ಹೇಳಿದ್ದಾರೆ. 

ಹಲವು ವರ್ಷಗಳಿಂದ ಮಲಗಲದಿನ್ನಿ ಕೆರೆ ತುಂಬದೆ ಇರುವುದರಿಂದ ಈ ಭಾಗದ ಸುಮಾರು ಏಳೆಂಟು ಗ್ರಾಮಗಳ ರೈತರಿಗೆ ತೊಂದರೆಯಾಗಿತ್ತು. ಸದ್ಯ ಎ.ಎಸ್‌. ಪಾಟೀಲ(ನಡಹಳ್ಳಿ)ಯವ ವಿಶೇಷ ಕಾಳಜಿಯಿಂದ ಸಂಪೂರ್ಣ ಬರಿದಾಗಿದ್ದ ಕೆರೆಯನ್ನು ಚಿಮ್ಮಲಗಿ ಏತ ನಿರಾವರಿ ಮುಖ್ಯ ಕಾಲುವೆ ಮೂಲಕ ತುಂಬಿಸಿದ್ದು ಕುರಿಗಾರರಿಗೆ, ದನ ಕರುಗಳಿಗೆ ಮಾತ್ರವಲ್ಲ ಸುತ್ತಲಿನ ಬಹುತೇಕ ಎಲ್ಲ ಗ್ರಾಮಗಳಲ್ಲಿನ ಬತ್ತಿಹೋಗಿದ್ದ ಕೊಳವೆ ಬಾವಿಗಳು ಈ ಕೆರೆ ತುಂಬಿದ್ದರಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ತುಂಬಿಕೊಂಡು ರೈತರ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದಂತಾಗಿದೆ ಎಂದು ಪ್ರಗತಿಪರ ರೈತ ಬೂದಿಹಾಳ ಕಾಂತು ಮಣ್ಣೂರ ಹೇಳಿದ್ದಾರೆ.

ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ)ಯವರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಕೆರೆ ವಾಸ್ತವ ಸಂಗತಿ ತಿಳಿದು ಕೆಬಿಜೆಎನ್‌ಎಲ್‌ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಲುವೆಗಳ ಮೂಲಕ ಸದ್ಯ ಮಲಗಲದಿನ್ನಿ ಕೆರೆ ತುಂಬಿಸಿದ ಕಾರ್ಯ ಜನಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಗೋನಾಳ ಎಸ್‌ ಎಚ್‌ ಗ್ರಾಮದ ಸಮಾಜ ಸೇವಕ ಬಸವರಾಜ ಗುಳಬಾಳ ತಿಳಿಸಿದ್ದಾರೆ. 

ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ನಡಹಳ್ಳಿ

ಸುಮಾರು 70 ಲಕ್ಷ ವಿಶೇಷ ಅನುದಾನದಲ್ಲಿ ಕೆರೆ ಮರು ನಿರ್ಮಾಣಗೊಳಿಸಿದ ಮಲಗಲದಿನ್ನಿ ದೊಡ್ಡ ಕೆರೆಗೆ ಗುರುವಾರ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಬಾಗಿನ ಅರ್ಪಿಸಿದರು. ಈ ವೇಳೆ ತಹಸೀಲ್ದಾರ್‌ ಜಿ.ಎಸ್‌.ಮಳಗಿ, ಸಿಪಿಐ ಆನಂದ ವಾಗ್ಮೋರೆ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಮನಗೌಡ ಬಿರಾದಾರ, ಗಣ್ಯರಾದ ಬಸವರಾಜ ಗುಳಬಾಳ, ಮುತ್ತಣ್ಣ ಹುಂಡೇಕಾರ, ಕಾಂತು ಮಣ್ಣೂರ, ಹಂನಂಮಂತ ಮಾರನಳ್ಳಿ ಸೇರಿದಂತೆ ಹಲವುರು ಇದ್ದರು.
 

click me!