
ಕಾರವಾರ(ನ.02): ರೆಸಾರ್ಟ್ ರಾಜಕೀಯ ಹೊಸದಲ್ಲ. ಅದು ಈಗ ಸಾಮಾನ್ಯವಾಗಿದೆ. ಹಿಂದೆ ನನ್ನನ್ನೂ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು.... ಇದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹೀಗೆ ಸಮರ್ಥಿಸಿಕೊಂಡರು.
ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳು ಕಾರವಾರ, ಅಂಕೋಲಾ ನಗರ ಸ್ಥಳೀಯ ಸಂಸ್ಥೆಯ ಸದಸ್ಯರನ್ನು ರೆಸಾರ್ಟ್ಗೆ ಕರೆದೊಯ್ದ ಬಗ್ಗೆ ಕೇಳಿದಾಗ, ರೆಸಾರ್ಟ್ಗೆ ಕರೆದೊಯ್ಯುವುದು ಈಗ ಯಾವುದೆ ಒಂದು ಪಕ್ಷಕ್ಕೆ ಸೀಮಿತವಾಗಿ ಉಳಿದಿಲ್ಲ. ಕಾಂಗ್ರೆಸ್ನವರು ಹತಾಶ ಪರಿಸ್ಥಿತಿಯಲ್ಲಿದ್ದು, ಈ ಸಂದರ್ಭದಲ್ಲಿ ನಮ್ಮ ಸದಸ್ಯರನ್ನು ಉಳಿಸಿಕೊಳ್ಳುವುದು ನಮಗೆ ಅನಿವಾರ್ಯ ಎಂದು ಹೇಳಿದರು.
ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್ನವರು ಆಗಾಗ ತಗಾದೆ ತೆಗೆಯುತ್ತಿರುತ್ತಾರೆ. ರಾಜ್ಯೋತ್ಸವದಂತಹ ಸಂದರ್ಭದಲ್ಲಿ ಅನಗತ್ಯವಾಗಿ ವಿವಾದ ಹುಟ್ಟಿಸಲು ನೋಡುತ್ತಾರೆ ಎಂದು ಕಿಡಿಕಾರಿದರು.
ಈಗ ಉಪಚುನಾವಣೆ ನಡೆಯಲಿರುವ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಜಯಗಳಿಸುವುದು ನಿಶ್ಚಿತ. ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನೌಕಾನೆಲೆಗಾಗಿ ಭೂಸ್ವಾಧೀನ ಕುರಿತು ಮಾಹಿತಿ ಇಲ್ಲ:
ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಮೂರನೇ ಹಂತದ ವಿಸ್ತರಣೆ ಬಗ್ಗೆ ಅಂಕೋಲಾದ ಆರು ಹಳ್ಳಿಗಳ ಭೂಸ್ವಾಧೀನದ ಬಗ್ಗೆ ತಮಗೆ ಯಾವುದೆ ಮಾಹಿತಿ ಇಲ್ಲ. ಸರ್ಕಾರಕ್ಕೆ ಈ ಬಗ್ಗೆ ಅರಿವಿಲ್ಲ ಎಂದು ಸಚಿವ ಶಿವರಾಮ ಹೆಬ್ಬಾರ್ ಜಾರಿಕೊಂಡರು.