ಮರಾಠಾ ಪ್ರಾಧಿಕಾರ: 'ಮರಾಠಿಗರ ಬಹು ವರ್ಷಗಳ ಬೇಡಿಕೆ ಈಡೇರಿಸಿದ ಯಡಿಯೂರಪ್ಪ'

By Suvarna NewsFirst Published Nov 19, 2020, 1:37 PM IST
Highlights

ಸಮುದಾಯಗಳ ಬೇಡಿಕೆಯಂತೆ ನಿಗಮ ರಚನೆ| ಎಲ್ಲ ಸರ್ಕಾರದಿಂದಲೂ ನಿಗಮಗಳು ರಚನೆಯಾಗುತ್ತವೆ| ವಿಜಯನಗರ ಜಿಲ್ಲೆಯನ್ನು ಶಾಸಕರಾದ ಸೋಮಶೇಖರ್ ರೆಡ್ಡಿ ಅವರೂ ಒಪ್ಪುತ್ತಾರೆಂಬ ವಿಶ್ವಾಸವಿದೆ: ಸಚಿವ ಎಸ್‌.ಟಿ. ಸೋಮಶೇಖರ್‌| 
 

ಹೊಸಪೇಟೆ(ನ.19): ಮರಾಠಿ ಗಡಿ-ಭಾಷೆ ವಿಷಯ ಬೇರೆ, ಕರ್ನಾಟಕದಲ್ಲಿ ಅನೇಕ ಜನ ಮರಾಠಿಗರು ವಾಸವಾಗಿದ್ದಾರೆ. ಇಲ್ಲಿಯೇ ಹುಟ್ಟಿ, ಬೆಳದವರಿದ್ದಾರೆ. ಅವರೂ ಸಹ ನಮ್ಮ ಕನ್ನಡಿಗರೇ ಆಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಮರಾಠಾ ಸಮುದಾಯ ನಿಗಮಕ್ಕೆ ಆದೇಶ ಹೊರಡಿಸಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಇದನ್ನು ಮಹಾರಾಷ್ಟ್ರದವರಿಗಾಗಿ ಮಾಡುತ್ತಿರುವುದಲ್ಲ. ಅವರೆಲ್ಲರೂ ನಮ್ಮೊಂದಿಗೆ ಇರುವ ಮರಾಠಿಗರು. ಹೀಗಾಗಿ ಅವರ ಅನೇಕ ವರ್ಷಗಳ ಬೇಡಿಕೆಯನ್ನು ಈಗ ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. 

ಜಾತಿಗೊಂದು ನಿಗಮ ಮಂಡಳಿಯಂತ ನಮ್ಮ ಸರ್ಕಾರ ಮಾಡುತ್ತಿಲ್ಲ. ಇದು ಎಲ್ಲ ಸರ್ಕಾರವಿದ್ದಾಗಲೂ ರಚನೆಯಾಗುವ ಸಾಮಾನ್ಯ ಪ್ರಕ್ರಿಯೆ. ಸವಿತಾ ಸಮಾಜ, ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲ ಸಮಾಜದವರೂ ಸಹ ನಿಗಮ ಮಂಡಳಿ ಕೇಳುತ್ತಲೇ ಬಂದಿದ್ದಾರೆ. ಎಲ್ಲ ಜಾತಿಯವರು ಅವರ ಸಮಾಜದ ಏಳ್ಗೆಗೆ ಕೇಳುತ್ತಾ ಇರುತ್ತಾರೆ. ಈಗ ಮುಖ್ಯಮಂತ್ರಿಗಳ ಬಳಿ ಹೋಗಿ ಮನವಿ ಸಲ್ಲಿಸಿದ್ದಾರೆ. ಅವರ ಕಾರಣಗಳು ಸರಿ ಎಂದು ಮುಖ್ಯಮಂತ್ರಿಗಳಿಗೆ ಅನ್ನಿಸಿದರೆ ಅವರು ಅನುಮತಿಯನ್ನು ಕೊಡುತ್ತಾರೆ. ಇದು ಎಲ್ಲ ಮುಖ್ಯಮಂತ್ರಿಗಳು ಇರಬೇಕಾದರೂ ಆಗುತ್ತಿದ್ದಂತಹ ಕೆಲಸವಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. 

ಮರಾಠಾ ಪ್ರಾಧಿಕಾರ ರಚನೆಗೆ ವಿರೋಧ: ಡಿಸಂಬರ್ 5 ರಂದು ಕರ್ನಾಟಕ ಬಂದ್‌ಗೆ ಕರೆ

ಸೋಮೇಶಖರ ರೆಡ್ಡಿ ಅವರ ಜೊತೆ ಮಾತನಾಡುತ್ತೇವೆ

ವಿಜಯನಗರವನ್ನು ಹೊಸ ಜಿಲ್ಲೆಯಾಗಿ ಮಾಡುವ ಬಗ್ಗೆ ಪರ-ವಿರೋಧ ಇರುವುದು ಸಹಜ. ಈಗಾಗಲೇ ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ಹಾಗೂ ಈ ಭಾಗದ ಅನೇಕ ಶಾಸಕರು ನೂತನ ಜಿಲ್ಲೆಯ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಈಗ ತಾನೆ ಸಂಪುಟದಲ್ಲಿ ಪ್ರಾಥಮಿಕವಾಗಿ ಒಪ್ಪಿಗೆ ಸಿಕ್ಕಿದೆ. ಇದಕ್ಕಾಗಿ ಸಚಿವರಾದ ಆನಂದ್ ಸಿಂಗ್ ಅವರು ಬಹಳ ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರ ಜೊತೆ ಅನೇಕ ಶಾಸಕರು ಹಾಗೂ ಸಂಘ-ಸಂಸ್ಥೆಗಳ ಬೆಂಬಲವಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು. 

ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೋಮಶೇಖರ ರೆಡ್ಡಿ ಅವರ ಜೊತೆ ನಾವೆಲ್ಲರೂ ಮಾತನಾಡುತ್ತೇವೆ. ಅವರೂ ಸಹ ನಮ್ಮ ಪಕ್ಷದವರೇ ಆಗಿರುವುದರಿಂದ ಖಂಡಿತವಾಗಿ ಮನವೊಲಿಸುತ್ತೇವೆ. ಮುಖ್ಯಮಂತ್ರಿಗಳು ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಶಾಸಕರಾದ ಸೋಮಶೇಖರ ರೆಡ್ಡಿಯವರು ಒಪ್ಪುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಸಚಿವರಾದ ಎಸ್ ಟಿ ಎಸ್ ಹೇಳಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಿಸಿದ ಸರ್ಕಾರ

ಸಂಪುಟಕ್ಕೆ ಸೇರ್ಪಡೆ ಮುಖ್ಯಮಂತ್ರಿಗಳ ಪರಮಾಧಿಕಾರ

ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಈ ಸಂಬಂಧ ಚರ್ಚಿಸಲು ಅವರು ದೆಹಲಿ ಹೋಗಿ ಬಂದಿದ್ದಾರೆ ಎಂಬ ಮಾಹಿತಿ ಇದೆ. ನಮ್ಮ ಪಕ್ಷದಲ್ಲಿ ಇಂಥ ನಿರ್ಧಾರಗಳಿಗೆಲ್ಲ ಹೈಕಮಾಂಡ್ ಅನುಮತಿ ಕೊಡುವ ಪದ್ಧತಿ ಇದೆ. ಹೀಗಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ, ಅವರಿಗೇ ಎಲ್ಲ ಅಧಿಕಾರ ಇದೆ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. 
 

click me!