ರೈತರಿಗೆ ಸಾಲ ವಿತರಣೆ: ಸಚಿವ S T ಸೋಮಶೇಖರ್ ಪ್ರತಿಕ್ರಿಯೆ

By Kannadaprabha NewsFirst Published Jul 2, 2020, 2:06 PM IST
Highlights

ಬಡವರ ಬಂಧು ಫಲಾನುಭವಿಗಳ ಆಯ್ಕೆ ಅಧಿಕಾರ ಡಿಸಿಸಿ ಬ್ಯಾಂಕ್‌ಗೆ ನೀಡಲು ಪರಿಶೀಲನೆ: ಸಚಿವ ಸೋಮಶೇಖರ್ | ಕೊಡಗು ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆ| ಸಾಲ ವಿತರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ|
 

ಮಡಿಕೇರಿ(ಜು.02): ಬಡವರ ಬಂಧು ಯೋಜನೆಯಡಿ ಸಾಲ ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕ್ರಮವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಕೊಡಗು ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಒತ್ತಡದ ಕೆಲಸಗಳಿರುತ್ತವೆ. ಹೀಗಾಗಿ ಹೊಸ ಆದೇಶದ ಬಗ್ಗೆ ಗಮನಹರಿಸಲಾಗುತ್ತದೆ. ಜೊತೆಗೆ ಈ ಹಿಂದೆ ಇದ್ದಂತೆ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಡಿಸಿಸಿ ಬ್ಯಾಂಕಿಗೂ ಸಹ ಅಧಿಕಾರ ನೀಡುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೆ, ಆಯಾ  ಜಿಲ್ಲಾಧಿಕಾರಿಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲಿ ಅಂತಿಮವಾಗಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಕೊಡಗಿನಲ್ಲಿ ಮೂರು ತಿಂಗಳ ಮಗು ಸೇರಿ 13 ಮಂದಿಗೆ ಸೋಂಕು

ಸಾಲ ವಿತರಣೆ ಬಗ್ಗೆ ಮಾಹಿತಿ

ಇದೇ ವೇಳೆ, ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಎಷ್ಟು ಸಾಲ ವಿತರಣೆ ಮಾಡಲಾಗಿದೆ? ಎಷ್ಟು ಹೊಸ ರೈತರಿಗೆ ಸಾಲ ನೀಡಲಾಗಿದೆ? ಬಡವರ ಬಂಧು ಹಾಗೂ ಕಾಯಕ ಯೋಜನೆಯಡಿ ಎಷ್ಟು ಸಾಲ ವಿತರಣೆಯಾಗಿದೆ? ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಏನಾದರೂ ಸಮಸ್ಯೆಯಾಗಿದೆಯೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.  ಈ ಸಂದರ್ಭದಲ್ಲಿ ಶಾಸಕರಾದ ಕೆ.ಜೆ.ಬೋಪಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗಣಪತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!