ಕುಡಿಯುವ ನೀರಿನ ಸಮಸ್ಯೆಯಾಗದಂತೆ ವರ್ಷ​ದಲ್ಲಿ 3 ಸಲ ಕೆರೆ ಭರ್ತಿಗೆ ಕ್ರಮ: ಸಚಿವ ಜಾರಕಿಹೊಳಿ

By Kannadaprabha NewsFirst Published Apr 29, 2020, 12:08 PM IST
Highlights

ಜಲಾಶಯಗಳಿಗೆ ಒಳಹರಿವು ಆಧಾರದ ಮೇಲೆ ಈಗಾಗಲೆ ನೀರು ಬಿಡುವ ವ್ಯವಸ್ಥೆ ಜಾರಿಯಲ್ಲಿದೆ| ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ವಿಶೇಷವಾಗಿ ಜೂನ್‌ ಮತ್ತು ನವೆಂಬರ್‌ ತಿಂಗಳಲ್ಲಿ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದರಿಂದ ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ|ಶಾಸ​ಕ​ರು-ಅಧಿ​ಕಾ​ರಿ​ಗಳ ಸಭೆ​ಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ|

ವಿಜಯಪುರ(ಏ.29):  ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಲಾಶಯಗಳ ಮೂಲಕ ವಾರ್ಷಿಕ 2-3 ಬಾರಿ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇ​ಳಿ​ದ್ದಾರೆ. 

ಮಂಗಳವಾರ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಲಾಶಯಗಳಿಗೆ ಒಳಹರಿವು ಆಧಾರದ ಮೇಲೆ ಈಗಾಗಲೆ ನೀರು ಬಿಡುವ ವ್ಯವಸ್ಥೆ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ವಿಶೇಷವಾಗಿ ಜೂನ್‌ ಮತ್ತು ನವೆಂಬರ್‌ ತಿಂಗಳಲ್ಲಿ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದರಿಂದ ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂಬ ಶಾಸಕರ ಬೇಡಿಕೆಯಾಗಿದ್ದು, ರಾಜ್ಯಮಟ್ಟದಲ್ಲಿ ಎಲ್ಲ ಜಲಾಶಯಗಳ ಮೂಲಕ ವಾರ್ಷಿಕವಾಗಿ 2-3 ಬಾರಿ ನೀರನ್ನು ಹರಿಸಿ ಕೆರೆ ಭರ್ತಿ ಮಾಡುವ ಕುರಿತಂತೆ ಅವಶ್ಯಕ ಕ್ರಮ ಕೈಗೊಳ್ಳುವುದಾಗಿ ತಿಳಿ​ಸಿದರು.

ಕೊರೋನಾ ಭೀತಿ: 'ಕೆಮ್ಮು, ಜ್ವರ ಲಕ್ಷಣದವರ ಸಮೀಕ್ಷೆ ಕೈಗೊಳ್ಳಿ'

ಆಲಮಟ್ಟಿ ಜಲಾಶಯದ ಎಫ್‌ಆರ್‌ಎಲ್‌ 519.60 ಮೀಟರ್‌ದಿಂದ ಆರ್‌.ಎಲ್‌ 524.256 ಗೆ ಎತ್ತರಿಸಿದ ಹಿನ್ನಲೆಯಲ್ಲಿ ಈಗಿರುವ ಗೇಟ್‌ಗಳನ್ನು ಜೋಡಿಸಿ ಎತ್ತರಿಸುವ ಕುರಿತಂತೆ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದ್ದು ಇದರಿಂದ ಸುಮಾರು 20 ಗ್ರಾಮಗಳ ಪುನರ್‌ಸ್ಥಾಪನೆ ಮತ್ತು ಪುನರ್‌ವಸತಿಗೆ ಸಹಕಾರಿಯಾಗಲಿದೆ. ಅದರಂತೆ ಹಂತ-ಹಂತವಾಗಿ ಈ ಯೋಜನೆ ಜಾರಿಗೊಳಿಸುವ ಅಗತ್ಯವಿದ್ದು ಸರ್ವೋಚ್ಚ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಕ್ಲಿಯರೆನ್ಸ್‌ ದೊರೆತು ಗೆಜೆಟ್‌ ನೋಟಿಫಿಕೇಶನ್‌ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ತಾವೂ ಖುದ್ದು ಮುತುವರ್ಜಿವಹಿಸಿ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಎಲ್ಲ ಶಾಸಕರು ಜನಪ್ರತಿನಿಧಿಗಳ ಸಹಕಾರದೊಂದಿಗೆ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸೋಣ ಎಂದರು.

ಇತ್ತೀಚೆಗೆ ನೆರೆಹಾವಳಿ ಸಂದರ್ಭದಲ್ಲಿ ಮುಳುಗಡೆಯಾದ ಗ್ರಾಮಗಳ, ಪ್ರದೇಶಗಳಿಗೆ ಸಂಬಂಧಪಟ್ಟಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾಡಳಿತಗಳ ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಬಾಗಲಕೋಟೆ ಜಿಲ್ಲೆಯ ರಾಮಥಾಳ ಯೋಜನೆಯಡಿ ಕಳಪೆ ಗುಣಮಟ್ಟದ ಪೈಪ್‌ ಬಳಸಿರುವ ಹಿನ್ನಲೆಯಲ್ಲಿ ಮತ್ತು ಈ ಹಿಂದೆ ಬಳೂತಿ ಮತ್ತು ಹನಮಾಪೂರ ಜಾಕ್‌ವೆಲ್‌ಗಳಲ್ಲಿ ಅಗ್ನಿ ಅವಘಡಗಳು ನಡೆದ ಹಿನ್ನೆಲೆ ಹಾಗೂ ಎರಡೂ ಜಿಲ್ಲೆಗಳ ಶಾಸಕರ ದೂರಿನ ಹಿನ್ನಲೆಯಲ್ಲಿ ಮೇಘಾ, ನೆಟಾಫಿನ್‌ ಮತ್ತು ಜೈನ್‌ ಕಂಪನಿಗಳಿಗೆ ಮುಂದಿನ ದಿನಗಳಲ್ಲಿ ಯೋಜನೆಗಳಡಿ ಕೆಲಸ ನೀಡುವ ಮುಂಚೆ ಕೂಲಂಕಷವಾಗಿ ಪರಿಶೀಲಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ದೇವಾನಂದ ಚವ್ಹಾಣ, ಎಂ.ಸಿ. ಮನಗೂಳಿ, ಅರುಣ ಶಹಪು​ರ, ಎ.ಎಸ್‌. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ, ಹುನಗುಂದ ಶಾಸಕ ದೊಡ್ಡಣ್ಣಗೌಡ, ವಿಧಾನ ಪರಿಷತ್‌ ಸದಸ್ಯ ಹÜನುಮಂತ ನಿರಾಣಿ, ಲೋಕಸಭಾ ಸದಸ್ಯ ಬಿ.ವಿ ನಾಯಕ, ಮುಖ್ಯ ಅಭಿಯಂತರ ಕುಲಕರ್ಣಿ, ಕಾರ್ಯನಿರ್ವಾಹಕ ಅಭಿಯಂತರ ಬಸವರಾಜು ಹಾಗೂ ಇತರರು ​ಇ​ದ್ದರು.
 

click me!