ಸೋಶಿಯಲ್ ಮೀಡಿಯಾದಲ್ಲಿ ಏಕಪತ್ನಿ ಪ್ರತಿಧ್ವನಿ,  ರೈಲೋ, ವಿಮಾನವೋ, ಬಸ್ಸೋ ಎಲ್ಲಾದರೂ ಸರಿ!

By Suvarna NewsFirst Published Mar 24, 2021, 5:09 PM IST
Highlights

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿಸಿದ ಸುಧಾಕರ್ ಹೇಳಿಕೆ/ ಸಿಡಿ ಸಿಡಿ ಜಾಗದಲ್ಲೀಗ ಏಕ ಪತ್ನಿ ವ್ರತಸ್ಥ/  ಕಠೋರ ಅನುಭವ ಹಂಚಿಕೊಂಡ ಫೇಸ್ ಬುಕ್ ಬರಹಗಾರ/ ರಾಜಕಾರಣಿಗಳೆಲ್ಲ ಹೀಗೇನಾ?

ಬೆಂಗಳೂರು(ಮಾ.  24)   ಸಚಿವ ಸುಧಾಕರ್ ನೀಡಿರುವ ಹೇಳಿಕೆ ನಂತರ ಸಿಡಿ ಸಿಡಿ ಅಂಥ ಇದ್ದವರೆಲ್ಲ ಏಕಪತ್ನಿ ಅನ್ನೋಕೆ ಶುರು ಮಾಡಿದ್ದಾರೆ.  ವಿಧಾನಸಭೆ ಕಲಾಪವನ್ನು ಸಿಡಿ ನುಂಗಿ  ಹಾಕಿತ್ತು. ಈಗ ಹೊರಗೂ  ಜೋರು ಚರ್ಚೆ. 

ಇಷ್ಟೆಲ್ಲ ಆಗುತ್ತಿರಬೇಕಿದ್ದರೆ ಸೋಶಿಯಲ್ ಮೀಡಿಯಾ ಸುಮ್ಮನೆ ಇರುತ್ತದೆಯೇ.. ಎಲ್ಲೆಲ್ಲೂ 'ಏಕಪತ್ನಿ' ಪ್ರತಿಧ್ವನಿ. ಅನೇಕರು ರಾಜಕಾರಣಿಗಳಿಗೆ  ಸರಿಯದ ತಿರುಗೇಟು ನೀಡಿದ್ದಾರೆ. ಕೆಲವರು ಕಠೋರ ಅನುಭವ ಹಂಚಿಕೊಂಡಿದ್ದಾರೆ.

ಸಂಗಮೇಶ್ ಮೆಣಸಿನಕಾಯಿ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಗೆಳೆಯನಿಗಾದ ಕೆಟ್ಟ ಘಟನೆಯ ಅನುಭವ ತಿಳಿಸಿದ್ದಾರೆ. ಅವರು ಏನು ಹೇಳಿದ್ದಾರೆ ಅವರ ಮಾತುಗಳಲ್ಲೇ ಕೇಳಿ...]
ಏಕಪತ್ನಿ ವ್ರತ ಚರ್ಚೆಗೇ ನಾವೆಲ್ಲ ಇವರನ್ನ ಆರಿಸಿ ಕಳಿಸಿದ್ದೇವಾ?

ಅದೊಂದು ಫಸ್ಟ್ ಕ್ಲಾಸ್ ಎ.ಸಿ. ರೈಲ್ವೆ ಬೋಗಿ. ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್. ಬಹಳ ಹಿಂದೆ ಏನಲ್ಲ, 10-12 ವರ್ಷ ಕಳೆದಿರಬೇಕು. ಉತ್ತರ ಕರ್ನಾಟಕ ಮೂಲದ ನನ್ನ ಟೆಕಿ ಮಿತ್ರನೊಬ್ಬ ತನ್ನ ಗರ್ಭಿಣಿ ಪತ್ನಿಯೊಂದಿಗೆ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ. ಕೆಲ ನಿಮಿಷಗಳಲ್ಲಿ ಅಧಿಕಾರಿಗಳ-ಪೊಲೀಸ ಪಟಾಲಂ ಬಂತು. "ಬೇಗ ಬೇಗ ಊಟ ಮಾಡಿ ಬಾಗಿಲು ಹಾಕ್ಕೊಳ್ಳಿ" ಎಂದು ಗದರುವ ದನಿಯಲ್ಲೇ ನನ್ನ ಮಿತ್ರನಿಗೆ ಹೇಳಿದವನು ಒಬ್ಬ ಐ.ಎ.ಎಸ್. ಅಧಿಕಾರಿ! ಪತ್ನಿಗೆ ಪ್ರೀತಿಯಿಂದ ತಿನ್ನಿಸುತ್ತಿದ್ದ ಮಿತ್ರನಿಗೆ ಅಧಿಕಾರಿಯ ದರ್ಪ ಅಸಹನೀಯ ಎನ್ನಿಸಿತು. ಗರ್ಭಿಣಿ ಪತ್ನಿಗೆ ಒಂಚೂರೂ ಡಿಸ್ಟರ್ಬ್ ಆಗಬಾರದು ಎಂಬ ಉದ್ದೇಶದಿಂದ ಫಸ್ಟ್ ಕ್ಲಾಸ್ ಎ.ಸಿ.ಯಲ್ಲಿ ತಿಂಗಳ ಮೊದಲೇ ಸೀಟ್ ಬುಕ್ ಮಾಡಿಸಿದ್ದ ನನ್ನ ಮಿತ್ರ. ಇವನ ಕೆಂಗಣ್ಣಿನ ನೋಟವನ್ನು ಅರ್ಥೈಸಿಕೊಂಡ ಅಧಿಕಾರಿ ಈಗ ಕೊಂಚ ಮೃದುವಾಗಿ ಹೇಳಿದ- "ನಮ್ಮ ಮಿನಿಸ್ಟರ್ ಸಾಹೇಬರಿಗೆ ಡಿಸ್ಟರ್ಬ್ ಆಗಬಾರದು. ಹಾಗಾಗಿ ಬೇಗ ಬಾಗಿಲು ಹಾಕಿಕೊಂಡು ಮಲಗಿಬಿಡಿ".

ಅಷ್ಟಕ್ಕೂ ಸುಧಾಕರ್ ಎಲ್ಲ ಶಾಸಕರ ಮೇಲೆ ಎಸೆದ ಸವಾಲು ಏನು? 

ಏನೊಂದೂ ಅರ್ಥವಾಗದ ನನ್ನ ಮಿತ್ರ ಸುಮ್ಮನೆ ಊಟ ಮುಗಿಸಿ, ಪತ್ನಿಯನ್ನು ಮಲಗಿಸಿ, ತಾನೂ ಮಲಗಿದ. ರೈಲು ಹೊರಟು ಯಶವಂತಪುರ ತಲುಪಿರಬೇಕು. " ಸಾಹೇಬರಿಗೆ ಒಂದು ರಮ್ ತೊಗೊಂಡು ಬಾರೊ..." ಯಾವನೋ ಯಾರಿಗೋ ಫೋನಿನಲ್ಲಿ ಹೇಳುತ್ತಿದ್ದ. ಆ ರಮ್ ಬರುವವರೆಗೆ ರೈಲು ಯಶವಂತಪುರದಲ್ಲೇ ನಿಂತಿತ್ತು!

ಮುಂದೆ ತುಮಕೂರು ನಿಲ್ದಾಣದಲ್ಲಿ ಅದೇ ರೈಲು ಅರ್ಧ ತಾಸು ನಿಂತಿತ್ತು. ಸಾಹೇಬರಿಗೆ ಸ್ಕಾಚ್ ವಿಸ್ಕಿ ಬೇಕಿತ್ತಂತೆ! ಅರಸಿಕೆರೆಯಲ್ಲಿ ಚಿಕನ್ ಕಬಾಬ್ ಸ್ಪೇಶಲ್ ಬರೋದು ತಡವಾಯಿತು. ಮಿನಿಸ್ಟರ್ ಚೀರಾಡುತ್ತಿದ್ದನಂತೆ! ನಂಬಿ, ರೈಲು ಅವನಿಗೆ ಬೇಕಾದದ್ದು ಬಂದ ನಂತರವೇ ಚಲಿಸುತ್ತಿತ್ತು! ಕೂಗಾಟ-ಓಡಾಟವನ್ನು ಆಲಿಸುತ್ತಿದ್ದ ನನ್ನ ಮಿತ್ರ ಒಮ್ಮೆ ತನ್ನ ಸೀಟ್ ಬಳಿಯ ಬಾಗಿಲು ತೆರೆದು ಇಣುಕಲು ಯತ್ನಿಸಿದ. ಕೂಡಲೇ ಅದೇ ಅಧಿಕಾರಿ ಬಾಗಿಲು ತೆರೆಯದಂತೆ ಸಂಜ್ಞೆ ಮಾಡಿದ.

ಅಂತೂ ಇಂತೂ ರೈಲು ಹುಬ್ಬಳ್ಳಿಗೆ ಹತ್ತಿರದಲ್ಲಿ ಓಡುವಾಗ ಸೂರ್ಯ ರಂಗೇರಿದ್ದ. ಈಗ ಎ.ಸಿ. ಬೋಗಿಯಲ್ಲಿ ಶಾಂತತೆ ನೆಲೆಸಿತ್ತು. ಆ ಮಿನಿಸ್ಟರ್ ಹಾವೇರಿಯಲ್ಲೋ ದಾವಣಗೆರೆಯಲ್ಲೋ ಇಳಿದಿರಬೇಕು ಎಂದು ಭಾವಿಸಿದ ನನ್ನ ಮಿತ್ರ ಈಗ ತನ್ನ ಬಾಗಿಲು ತೆರೆದು ಹೊರಬಂದಾಗ ಆ ಅಧಿಕಾರಿ ಮಾತಿಗೆ ಸಿಕ್ಕಿದ.

ಅಧಿಕಾರಿ ಹೇಳಿದ್ದಿಷ್ಟು-"ಈ ಮಿನಿಸ್ಟರ್‌ಗೆ ಪ್ರತಿ ರಾತ್ರಿ ಇಷ್ಟೆಲ್ಲ ವ್ಯವಸ್ಥೆ ಆಗಲೇಬೇಕು. ಆ ವೇಳೆಯಲ್ಲಿ ಒಂದು ಹೆಣ್ಣು ನಾಯಿ ಸಿಕ್ಕಿದರೂ ಅದು ಇವನ ಮಂಚಕ್ಕೆ ಬರಲೇಬೇಕು. ಅದು ರೈಲೋ, ವಿಮಾನವೋ, ಬಸ್ಸೋ ಎಲ್ಲಾದರೂ ಸರಿ. ನಿಮ್ಮ ಗರ್ಭಿಣಿ ಪತ್ನಿಯ ಮೇಲೆ ಈ ಬಾ....ರ್ಡ್‌ನ ಕಣ್ಣು ಬಿದ್ದೀತೆಂಬ ಕಳಕಳಿಯಿಂದ ನಿಮಗೆ ಬಾಗಿಲು ಹಾಕಿಕೊಳ್ಳಲು ಜೋರು ಮಾಡಿದೆ. ಈಗ ಮಲಗಿದ್ದಾರೆ...ರೈಲು ಹುಬ್ಬಳ್ಳಿಗೆ ತಲುಪಿದ ನಂತರವೇ ಈ ಸಾಹೇಬನನ್ನ ಎಬ್ಬಿಸಬೇಕು. ಇವನು ಬೇಗ ಏಳದಿದ್ದರೆ ಇವನು ಏಳುವವರೆಗೂ ರೈಲು ನಿಲ್ಲುತ್ತೆ. ಹೀಗಿದೆ ನೋಡಿ ನಮ್ಮ ಪ್ರಜಾಪ್ರಭುತ್ವ. ಮುಂದೆ ಇವನೇ ಚೀಫ್ ಮಿನಿಸ್ಟರ್ ಕೂಡ ಆಗಬಹುದು. ನಾನೋ ಐ.ಎ.ಎಸ್ಸು., ಇವನ ಎಸ್.ಡಿ.ಒ., ಇವನ ಅಧಿಕೃತ ಪ್ರವಾಸಗಳಲ್ಲಿ ಜೊತೆಗಿರಲೇಬೇಕು. ರಾತ್ರಿ ಹೊತ್ತು ನಶೆಯಲ್ಲಿ ಯಾವ ಹೆಣ್ಣು ಕಣ್ಣಿಗೆ ಬಿದ್ದರೂ ಹುರಿದು ಮುಕ್ಕುತ್ತಾನೆ...ಇವನೊಬ್ಬನೇ ಅಲ್ಲ...ಶೇ.90ರಷ್ಟು ರಾಜಕಾರಣಿಗಳು ಹೀಗೆಯೇ ಇದ್ದಾರೆ, ಎಲ್ಲ ಪಕ್ಷಗಳಲ್ಲೂ ಇದ್ದಾರೆ...ಇಂಥವರನ್ನು ಆರಿಸುವ ಜನರಿಗೂ ಬುದ್ಧಿ ಇಲ್ಲ, ಅಲ್ಲವೇ?"

ಅಧಿಕಾರಿಯ ಮಾತುಗಳಿಗೆ ಕಿವಿಯಾಗಿದ್ದ ನನ್ನ ಮಿತ್ರನ ಇತರ ಇಂದ್ರಿಯಗಳೆಲ್ಲ ನಿಷ್ಕ್ರಿಯಗೊಂಡಂತಾಗಿದ್ದವು! ಮಿತ್ರ, ನನ್ನ ಬಳಿ ಇದನ್ನು ಹೇಳುವಾಗ ನಾನೂ ಹಾಗೇ ಆಗಿದ್ದೆ!

 

ಏಕಪತ್ನಿ ವ್ರತ ಚರ್ಚೆಗೇ ನಾವೆಲ್ಲ ಇವರನ್ನ ಆರಿಸಿ ಕಳಿಸಿದ್ದೇವಾ? ಅದೊಂದು ಫಸ್ಟ್ ಕ್ಲಾಸ್ ಎ.ಸಿ. ರೈಲ್ವೆ ಬೋಗಿ. ರಾಣಿ ಚೆನ್ನಮ್ಮ...

Posted by Sangamesh Menasinakai on Wednesday, 24 March 2021
click me!