ಮೈಸೂರು (ಜೂ.02): ಕಳೆದ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ನನ್ನ ಕೆಲ ಸ್ನೇಹಿತರು ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದಾರೆ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯೊಂದಿಗೆ ಮಾತುಕತೆಯ ಬಳಿಕ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಮುಂದೆ ನೋವನ್ನು ಹೇಳಿಕೊಂಡರೆ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ. ಸಿನಿಮಾದಲ್ಲೂ ನಾನು ನಾಯಕ, ರಾಜಕೀಯದಲ್ಲೂ ನಾಯಕ. ಆದರೆ, ನನ್ನನ್ನು ಖಳನಾಯಕನನ್ನಾಗಿ ಮಾಡಲು ಯತ್ನ ನಡೆದಿದೆ ಎಂದು ಹೇಳಿದರು.
ಸಚಿವರೊಬ್ಬರು ಸಿಎಂ ಬದಲಾವಣೆಗೆ ಒತ್ತಾಯಿಸಿದ್ದಾರೆ : ರೆಣುಕಾಚಾರ್ಯ ಬಾಂಬ್ .
ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು. ವೈಯಕ್ತಿಕವಾಗಿ ನಾನು ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ ಎಂದರು. ಬೆಂಗಾವಲು ವಾಹನ ಇಲ್ಲದೆ ಮಠಕ್ಕೆ ಬಂದಿರುವುದರಲ್ಲಿ ವಿಶೇಷವಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದರೂ ನಾನು ಸಚಿವನೇ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.