ಶೀಘ್ರ ರಾಜ್ಯಕ್ಕೆ ಆಗಮಿಸುತ್ತಾರಾ ಪ್ರಧಾನಿ ಮೋದಿ?

By Kannadaprabha NewsFirst Published Mar 22, 2021, 7:59 AM IST
Highlights

ಪ್ರಧಾನಿ ನರೇಂದ್ರ ಮೋದಿ ಶೀಘ್ರ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಲು ಯೋಜನೆ ರೂಪಿಸಲಾಗುತ್ತಿದೆ. 

ಹೊಸಪೇಟೆ (ಮಾ.22):  ವಿಜಯನಗರ ಜಿಲ್ಲೆ ರಚನೆಯಾದ ಸಂಭ್ರಮದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಲ್ಲವೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಆಹ್ವಾನಿಸುವ ಚಿಂತನೆ ಇದೆ. ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಲೂಕಿನ ಗಾಳೆಮ್ಮನಗುಡಿ ದೇವಸ್ಥಾನದ ಬಳಿ ವಿಜಯನಗರ ಕ್ಷೇತ್ರದ ಸಮಸ್ತ ಜನತೆಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆ ಒಂದು ಐತಿಹಾಸಿಕ ನಿರ್ಣಯವಾಗಿದೆ. ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಿಲ್ಲೆ ರಚನೆಯಾಗಿದೆ ಎಂದರು.

ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್‌ ಮಾದರಿ ಮಿನಿ ಬಸ್‌..! ...

ಭವ್ಯ ವೇದಿಕೆ:  ನಗರದ ಮುನ್ಸಿಪಲ್‌ ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗುವುದು. ವೇದಿಕೆ ಮೂಲಕ ವಿಜಯನಗರದ ಹಿಂದೂ ಸಾಮ್ರಾಜ್ಯದ ಪರಂಪರೆಯನ್ನು ಸಾರುವ ಕಾರ್ಯ ಮಾಡಲಾಗುವುದು. ವಿಜಯನಗರದ ಇತಿಹಾಸ ಕಟ್ಟಿಕೊಡಲಾಗುವುದು. ವೇದಿಕೆ ನಿರ್ಮಾಣಕ್ಕೆ ಎರಡು ತಿಂಗಳಷ್ಟುಸಮಯ ಹಿಡಿಯಲಿದೆ. ಭವ್ಯ ವೇದಿಕೆ ನಿರ್ಮಾಣ ಕಾರ್ಯದಲ್ಲಿ ಒಂದರಿಂದ ಎರಡು ಸಾವಿರ ಕಾರ್ಮಿಕರು ಕೆಲಸ ಮಾಡಲಿದ್ದಾರೆ. ಕಾರ್ಯಕ್ರಮ ಕುರಿತು ಈಗಾಗಲೇ ಸಂಗೀತ ನಿರ್ದೇಶಕ ಹಂಸಲೇಖರ ಜೊತೆಗೂ ಚರ್ಚಿಸಲಾಗಿದೆ ಎಂದರು.

ವಿರೂಪಾಕ್ಷನೇ ಕರೆಸಿಕೊಳ್ಳಲಿದ್ದಾನೆ:

ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇಲ್ಲವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಆಹ್ವಾನಿಸಲಾಗುವುದು. ವಿಜಯನಗರ ನೆಲದ ಮಹಿಮೆ ವಿಶಿಷ್ಟವಾಗಿದೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯೇ ಅವರನ್ನು ಕರೆಸಿಕೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು.

ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯ ನಾಯಕ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಯ ಶ್ರೇಯ ಸಚಿವ ಆನಂದ್‌ ಸಿಂಗ್‌ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಲ್ಲಬೇಕು ಎಂದರು.

ಇದೇ ವೇಳೆ ಸಮಾಜ ಸೇವಕ ಧರ್ಮೇಂದ್ರ ಸಿಂಗ್‌ ಹಾಗೂ ಆನಂದ್‌ ಸಿಂಗ್‌ ಅವರ ಪುತ್ರ ಸಿದ್ಧಾರ್ಥ ಸಿಂಗ್‌ ಅವರನ್ನು ಸನ್ಮಾನಿಸಲಾಯಿತು.

ಇನ್ನೂ ದಿನಾಂಕ ನಿಗದಿ ಆಗಿಲ್ಲ

ವಿಜಯನಗರ ಸಂಭ್ರಮದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳು ಆಗಮಿಸಲಿದ್ದಾರೆ. ಇನ್ನೂ ದಿನಾಂಕ ನಿಗದಿ ಆಗಿಲ್ಲ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.


ಹೊಸಪೇಟೆಯ ಶ್ರೀಗಾಳೆಮ್ಮ ದೇವಿ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಆನಂದ್‌ ಸಿಂಗ್‌ ಅವರನ್ನು ಭಾನುವಾರ ಸನ್ಮಾನಿಸಲಾಯಿತು.

ಆರ್ಥಿಕ ಸಂಪನ್ಮೂಲ

ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಇಬ್ಭಾಗವಾಗಿದೆ. ಜಿಲ್ಲೆಗೆ ಆರ್ಥಿಕ ಸಂಪನ್ಮೂಲ ಹಂಚಿಕೆ ಕುರಿತು ಅಧಿಕೃತ ಆದೇಶವಾಗಬೇಕಿದೆ. ಕೆಇಎಂಇಆರ್‌ಸಿ ಹಾಗೂ ಡಿಎಂಎಫ್‌ ಅನುದಾನ ಸೇರಿದಂತೆ ಇತರ ಅನುದಾನದಲ್ಲಿ ಉಭಯ ಜಿಲ್ಲೆಗಳಿಗೆ ಆರ್ಥಿಕ ಸಂಪನ್ಮೂಲ ಹಂಚಿಕೆ ಕುರಿತು ಅಂತಿಮ ಆದೇಶವಾಗಬೇಕಿದೆ. ಲಿಖಿತ ಆದೇಶವಾದರೆ, ವಿಜಯನಗರ ಜಿಲ್ಲೆ ಕೂಡ ಮುಂದೆ ಆರ್ಥಿಕ ತೊಂದರೆಯಾಗದಂತೆ ಸಂಪನ್ಮೂಲ ಜಿಲ್ಲೆಯಾಗಿ ರೂಪುಗೊಳ್ಳಲಿದೆ ಎಂದರು.

ವಿಜಯನಗರ ಜಿಲ್ಲೆ ಅಭಿವೃದ್ಧಿಪಥದತ್ತ ಸಾಗಿದೆ. ಈಗಾಗಲೇ ಪಾಪಿನಾಯಕನಹಳ್ಳಿ ಭಾಗದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬರುತ್ತಿದೆ. . 250 ಕೋಟಿ ಈಗಾಗಲೇ ಮಂಜೂರಾಗಿದೆ. ಇನ್ನೂ . 250 ಕೋಟಿ ಮಂಜೂರಾಗಲಿದೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

click me!