ಮತ್ತೆ ಸುದ್ದಿಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮ, ಏನಾಯ್ತಂತೆ!

By Suvarna NewsFirst Published Jan 2, 2020, 9:57 PM IST
Highlights

ಮತ್ತೆ ಸುದ್ದಿಮಾಡಿದ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ| ಎಂಬಿ ಪಾಟೀಲ್ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿತ್ತು| ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಶಾರದಾ ಡೈಮಂಡ್ ಅವರ ಮೇಲೆ ಎಫ್ ಐ ಆರ್ ದಾಖಲಾಗಿತ್ತು

ಬೆಂಗಳೂರು(ಜ. 02) ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದ ಸುದ್ದಿ ಮತ್ತೆ ಬಂದಿದೆ.  ವೀರಶೈವ-ಲಿಂಗಾಯತ ಧರ್ಮ ವಿಚಾರ ಕುರಿತು ಮಾಜಿ ಸಚಿವ ಎಂಬಿ ಪಾಟೀಲ್ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರಕ್ಕೆ ಸಂಬಂಧಿಸಿದ ಸುದ್ದಿ ಇದೆ.

ನಕಲಿ ಎನ್ನಲಾದ ಪತ್ರವನ್ನು ಫೇಸ್​ಬುಕ್ ಪೇಜ್​ನಲ್ಲಿ ಹಾಕಿಕೊಂಡ ಆರೋಪದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಶಾರದಾ ಡೈಮಂಡ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.  ಪ್ರಕರಣ ರದ್ದು ಕೋರಿ ಡಿ.ಆರ್. ಶಾರದಾ (ಶಾರದಾ ಡೈಮಂಡ್) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಿದ್ದರಾಮಯ್ಯ ಖಳನಾಯಕರಾದ್ರಾ?

ಇದೀಗ ಶಾರದ‌ ಡೈಮಂಡ್‌ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ.  ನ್ಯಾ. ದಿನೇಶ್ ಕುಮಾರ್‌ರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.  ಪ್ರಕರಣ ಮೊದಲು ನಾನ್ ಕಾಗ್ನಿಜೆಬಲ್ ಎಂದು ದಾಖಲಾಗಿತ್ತು. ನಂತರ ಮ್ಯಾಜಿಸ್ಟ್ರೇಟ್ ಪರ್ಮೀಶನ್ ತೆಗೆದುಕೊಂಡಿಲ್ಲ. ಇನ್‌ಫರ್ಮೇಶನ್ ಟೆಕ್ನಾಲಜಿ ಕಾಯ್ದೆ ಸೆಕ್ಷನ್ 66(ಎಎನ್)ಆಧಾರದಲ್ಲಿ ಪ್ರಕರಣ‌ ದಾಖಲಿಸಲಾಯ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಈ ರೀತ್ಯಾ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಕಾಯ್ದೆ ಹಾಗು ಕಾನೂನು ಇನ್ನೂ ಊರ್ಜಿತವಾಗಿಲ್ಲ. ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು 2014ರಲ್ಲಿ ಘೋಷಿಸಿದೆ ಎಂದು ವಿವರಣೆ ನೀಡಲಾಗಿದೆ. ಶಾರದಾ ಡೈಮಂಡ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. 

ಪ್ರಕರಣವೇನು?

ವೀರಶೈವ-ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿದ್ದಾರೆಂದು ಹೇಳಲಾಗುವ ನಕಲಿ ಪತ್ರ ಶಾರದಾ ಫೇಸ್​ಬುಕ್​ನಲ್ಲಿ ಏ.16ರಂದು ಪೋಸ್ಟ್ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್  ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದರು ಎನ್ನಲಾಗಿತ್ತು. ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್‌ನಲ್ಲಿ ಬರೆದಿದ್ದರು ಎನ್ನಲಾದ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಈ‌ ಹಿನ್ನೆಲೆ ಸಾಫ್ಟ್‌ವೇರ್ ಎಂಜಿನಿಯರ್ ಶಾರದಾ ಡೈಮಂಡ್ ವಿರುದ್ಧ  ಶ್ರೀರಾಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆಯದೆ ಹಾಗೂ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದ ಐಟಿ ಕಾಯ್ದೆ ಸೆಕ್ಷನ್ 66(ಎ) ಅಡಿಯಲ್ಲಿ‌ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಶ್ರೀರಾಂಪುರ ಠಾಣಾ ಇನ್ಸ್‌ಪೆಕ್ಟರ್ ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

click me!