ಗಣಿನಾಡಲ್ಲಿ ರಸ್ತೆ ತುಂಬಾ ಗುಂಡಿ; ಊರು ತುಂಬಾ ಧೂಳು!

By Kannadaprabha NewsFirst Published Oct 31, 2022, 12:18 PM IST
Highlights
  • ಗಣಿನಾಡಿನಲ್ಲಿ ರಸ್ತೆ ತುಂಬಾ ಗುಂಡಿಗಳು; ಊರು ತುಂಬಾ ಧೂಳು
  • ಅಧ್ವಾನಗೊಂಡ ಪ್ರಮುಖ ರಸ್ತೆಗಳು
  • ಆಡಳಿತ ವ್ಯವಸ್ಥೆಗೆ ಜನರ ಹಿಡಿಶಾಪ
  • ಮಳೆಯ ನೆಪದಲ್ಲಿ ಅಧಿಕಾರಿ ವರ್ಗದ ನಿರ್ಲಕ್ಷ್ಯ
  • ಧೂಳು ಮೆತ್ತಿಕೊಂಡು ಮನೆಗೆ ಹೋಗುವ ದುರ್ಗತಿ

ಬಳ್ಳಾರಿ (ಅ.31) : ಗಣಿನಾಡು ಎಂದೇ ಹೆಸರಾಗಿರುವ ಬಳ್ಳಾರಿ ನಗರದ ರಸ್ತೆಗಳು ಅಕ್ಷರಶಃ ನರಕದ ದರ್ಶನ ಮಾಡಿಸುತ್ತವೆ. ಈ ರಸ್ತೆಯಿಂದ ಎದ್ದ ಧೂಳು ಜನರ ಆರೋಗ್ಯ ಹಾಳು ಮಾಡಿ ಆಸ್ಪತ್ರೆ ದಾರಿ ತೋರಿಸುತ್ತದೆ!

ಏರ್‌ಪೋರ್ಟ್ ರಸ್ತೆ ವಿಸ್ತರಿಸಲು ಏನು ಮಾಡಿದ್ದೀರಿ, ವರದಿ ನೀಡಿ: ಹೈಕೋರ್ಟ್

ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಒಳ ದಾರಿಗಳು, ರಾಜ್ಯ ಹೆದ್ದಾರಿಗಳಲ್ಲಿ ಅಪಾಯಕ್ಕೆ ಆಹ್ವಾನವೊಡ್ಡುವ ಗುಂಡಿಗಳಿಂದ ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ಒಂದೆಡೆ ನಿಗಿನಿಗಿ ಬಿಸಿಲು, ಮತ್ತೊಂದೆಡೆ ರಸ್ತೆಯ ಗುಂಡಿಗಳು, ಜತೆಗೆ ಉಸಿರಾಡಿಸಲು ಕಷ್ಟಎನಿಸುವಷ್ಟುಮೆತ್ತಿಕೊಳ್ಳುವ ಮಣ್ಣಿನ ಧೂಳು ನಗರದ ಜನರಿಗೆ ನರಕ ಯಾತನೆಯ ಅನುಭವ ನೀಡುತ್ತಿದೆ. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆ ಮಳೆಗಾಲದ ನೆಪವೊಡ್ಡಿ ರಸ್ತೆ ಅಭಿವೃದ್ಧಿ ಕೆಲಸದಿಂದ ದೂರ ಉಳಿದಿದೆ.

ಗುಣಮಟ್ಟದ ರಸ್ತೆ ಹುಡುಕಾಡಬೇಕು:

ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳಿವೆ. ಕೆಲವೆಡೆ ತೀರಾ ಅಪಾಯ ತರುವಷ್ಟುಆಳದ ಗುಂಡಿಗಳು ಕಂಡು ಬರುತ್ತವೆ. ಬಳ್ಳಾರಿಯ ಯಾವುದೇ ರಸ್ತೆಯ ಕಡೆಗೆ ಮುಖವೊಡ್ಡಿದರೂ ಹಾಳಾದ ರಸ್ತೆಗಳು ಕಂಡು ಬರುತ್ತವೆ. ಗಮನಾರ್ಹ ಸಂಗತಿ ಎಂದರೆ ಜಿಲ್ಲಾ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ನಿತ್ಯ ತಮ್ಮ ಮನೆಯಿಂದ ನಗರದ ಕಡೆ ಬರುವಾಗ ರಸ್ತೆಯಲ್ಲಿರುವ ಗುಂಡಿಗಳ ದರ್ಶನ ಮಾಡಲೇಬೇಕು. ಈ ಗಣ್ಯರು ಕಾರ್‌ನಲ್ಲಿ ಓಡಾಡುವುದರಿಂದ ಧೂಳು ಮೆತ್ತಿಕೊಳ್ಳುವುದಿಲ್ಲವಾದರೂ ಹಾಳಾಗಿರುವ ರಸ್ತೆಗಳ ಅವ್ಯವಸ್ಥೆಯಂತೂ ಖಂಡಿತ ಕಣ್ಣಿಗೆ ರಾಚುತ್ತದೆ. ಆದಾಗ್ಯೂ ಇವರೇಕೆ ರಸ್ತೆ ಅಭಿವೃದ್ಧಿಯ ಕಡೆ ಮನಸ್ಸು ಹಾಯಿಸುತ್ತಿಲ್ಲ ಎಂಬುದೇ ಸಾರ್ವಜನಿಕರಿಗೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ಅಪಾಯದಲ್ಲಿ ಓಡಾಡುವ ವಾಹನ ಸವಾರರು:

ನಿತ್ಯ ನಗರದಲ್ಲಿ ಓಡಾಡುವ ವಾಹನ ಸವಾರರಿಗೆ ಗುಂಡಿಯಿಂದ ಅಪಾಯ ತಪ್ಪಿದ್ದಲ್ಲ. ರಾತ್ರಿ ವೇಳೆಯಲ್ಲಂತೂ ಗುಂಡಿಗಳು ಕಾಣದೆ ಬಿದ್ದು ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜತೆಗೆ ಧೂಳಿನ ಅಭಿಷೇಕ ಮಾಡಿಸಿಕೊಂಡೇ ಮನೆಗೆ ತಲುಪಬೇಕಾದ ಕರ್ಮ ಬಳ್ಳಾರಿ ಜನರದ್ದು. ನಗರದ ಶ್ರೀ ಕನಕ ದುರ್ಗಮ್ಮ ವೃತ್ತ, ಶ್ರೀ ವಾಲ್ಮೀಕಿ ವೃತ್ತ (ಎಸ್ಪಿ ಸರ್ಕಲ್‌), ಮೋತಿ ವೃತ್ತ, ಸಂಗನಕಲ್ಲು ರಸ್ತೆ, ರೂಪನಗುಡಿ ರಸ್ತೆ, ಅನಂತಪುರ ರಸ್ತೆ, ಬೆಂಗಳೂರು ರಸ್ತೆ ಸೇರಿದಂತೆ ವಿವಿಧ ಕಾಲನಿಗಳ ಒಳ ರಸ್ತೆಗಳ ತುಂಬೆಲ್ಲಾ ಗುಂಡಿಗಳು ಬಿದ್ದಿವೆ. ನಗರದ ಬೆರಳೆಣಿಕೆಯ ಜಾಗ ಹೊರತುಪಡಿಸಿದರೆ ಯಾವುದೇ ರಸ್ತೆಯೂ ಓಡಾಡಲು ಯೋಗ್ಯವಾಗಿಲ್ಲ. ನಗರದ ರಸ್ತೆಗಳ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಸಚಿವರು ಈಚೆಗೆ ಮಾಧ್ಯಮಗಳ ಮುಂದೆ ಹೇಳಿದ್ದರು. ಮಳೆಗಾಲವಾದ್ದರಿಂದ ತಡವಾಗಿದೆ ಎಂದಿದ್ದರು. ಇನ್ನಾದರೂ ರಸ್ತೆ ಅಭಿವೃದ್ಧಿ ಕೆಲಸ ಶುರು ಮಾಡಲಿ ಎಂಬುದು ನಗರದ ಸಾರ್ವಜನಿಕರ ಆಗ್ರಹವಾಗಿದೆ.

ಹೆಸರಿಗಷ್ಟೇ ಶ್ರೀಮಂತ ಜಿಲ್ಲೆ:

ಬಳ್ಳಾರಿ ಹೆಸರಿಗಷ್ಟೇ ಶ್ರೀಮಂತ ಜಿಲ್ಲೆ. ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಈ ಸರ್ಕಾರದಿಂದ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಖನಿಜ ನಿಧಿಯಿಂದ ಸಾವಿರಾರು ಕೋಟಿ ಸಂಗ್ರಹವಾಗಿದೆ. ಕೆಎಂಇಆರ್‌ಸಿಯಲ್ಲಿ ಸಾವಿರಾರು ಕೊಟಿ ಹಣವಿದೆ ಎಂದು ಜಿಲ್ಲೆಯ ಜನಪ್ರತಿನಿಧಿಗಳೇ ಹೇಳುತ್ತಾರೆ. ಹಾಗೆ ನೋಡಿದರೆ ಈ ಜಿಲ್ಲೆಯಲ್ಲಿರುವಷ್ಟುಅಭಿವೃದ್ಧಿಯ ಹಣ ರಾಜ್ಯದ ಯಾವುದೇ ಜಿಲ್ಲೆಗೂ ಇಲ್ಲ. ಹೀಗಿದ್ದರೂ ಕನಿಷ್ಠ ಸೌಕರ್ಯಗಳಿಗೆ ಜನರು ಒದ್ದಾಡುವಂತಾಗಿದೆ ಎಂಬುದು ನಗರ ನಿವಾಸಿಗಳ ಅಳಲು.

ಹೋರಾಟಗಳು ಇಳಿಮುಖ:

ನಗರದ ನಿವಾಸಿಗಳು ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೆ ಒದ್ದಾಡುತ್ತಿದ್ದಾರಾದರೂ ಜನರ ಕೂಗು ಹೊರ ಬೀಳುತ್ತಿಲ್ಲ. ಹೋರಾಟಗಳು ಕಂಡು ಬರುತ್ತಿಲ್ಲ. ಎಸ್‌ಯುಸಿಐ-ಎಐಎಂಎಸ್‌ಎಸ್‌ನಂತಹ ಸಂಘಟನೆಗಳು ಆಗಾಗ್ಗೆ ಜನರ ಸಮಸ್ಯೆಗಳ ಆಧಾರಿಸಿ ಚಳವಳಿ ಮಾಡುತ್ತಿರುವುದು ಬಿಟ್ಟರೆ, ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಮೌನವಹಿಸಿವೆ. ಹೀಗಾಗಿ ಬಳ್ಳಾರಿ ಜನ ಸುಖವಾಗಿದ್ದಾರೆ ಎಂದು ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾವಿಸಿದಂತಿದೆ ಎಂದು ನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಧೂಳು ಹೆಚ್ಚಾಗಿ ಆರೋಗ್ಯ ಸಮಸ್ಯೆ ಆಗಿದೆ ಹೀಗಾಗಿ ಧ್ವನಿ ಹಾಳಾಗಿದೆ: ಶಿವರಾಜ್‌ಕುಮಾರ್

ನಗರದ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಮ ವಹಿಸುತ್ತಿದ್ದೇವೆ. ಒಂದು ತಿಂಗಳೊಳಗೆ ರಸ್ತೆಗಳ ಕೆಲಸ ಶುರುವಾಗಲಿದೆ.

ಪವನಕುಮಾರ ಮಾಲಪಾಟಿ, ಜಿಲ್ಲಾಧಿಕಾರಿ, ಬಳ್ಳಾರಿ

click me!