ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಎಐ ಬಳಕೆ: ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌

Published : Apr 12, 2026, 08:33 PM IST
Sharan Prakash Patil

ಸಾರಾಂಶ

ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ವೈದ್ಯಕೀಯ ವೃತ್ತಿಪರರು ಸಹಾನುಭೂತಿ, ನೈತಿಕ ಮೌಲ್ಯಗಳು ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನು ಮರೆಯಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಹೇಳಿದ್ದಾರೆ.

ಮಂಗಳೂರು (ಏ.12): ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ (ಎಐ), ದತ್ತಾಂಶ ವಿಶ್ಲೇಷಣೆ ಮತ್ತು ನಿಖರ ವೈದ್ಯಕೀಯ ತಂತ್ರಜ್ಞಾನಗಳೊಂದಿಗೆ ವೇಗವಾಗಿ ಬದಲಾಗುತ್ತಿದೆ. ಆದರೆ ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ವೈದ್ಯಕೀಯ ವೃತ್ತಿಪರರು ಸಹಾನುಭೂತಿ, ನೈತಿಕ ಮೌಲ್ಯಗಳು ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನು ಮರೆಯಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಹೇಳಿದ್ದಾರೆ.

ನಗರದ ಸೌತ್ ಕೆನರಾ ಫಿಸಿಯೋಥೆರಫಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್ 2026’ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ರಕ್ಷಣೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಹಾಗೂ ಸಂಶೋಧನಾ ಉಪಕ್ರಮಗಳನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ.

ಮಾನವೀಯತೆಯಿಲ್ಲದ ವಿಜ್ಞಾನ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಸಹಾನುಭೂತಿ ಇಲ್ಲದ ಆರೋಗ್ಯ ಸೇವೆಯು ತನ್ನ ನೈಜ ಉದ್ದೇಶವನ್ನು ಕಳೆದುಕೊಳ್ಳುತ್ತದೆ. ಫಿಸಿಯೋಥೆರಪಿಯು ವೈಜ್ಞಾನಿಕ ಜ್ಞಾನ ಮತ್ತು ಮಾನವ ಅಗತ್ಯಗಳ ನಡುವಿನ ಕೊಂಡಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾಗಿದ್ದು, ಈ ವಿಶಿಷ್ಟತೆಯನ್ನು ಗುರುತಿಸುವುದು ಪರಿಣಾಮಕಾರಿ ಚಿಕಿತ್ಸೆ ನೀಡಲು ಅತ್ಯಗತ್ಯ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಫಿಸಿಯೋಥೆರಪಿ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ವಿಶ್ವದ ಹಲವು ದೇಶಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಫಿಸಿಯೋಥೆರಪಿಸ್ಟ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಲಿದೆ. ಅಲ್ಲದೆ ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳದಿಂದಲೂ ಫಿಸಿಯೋತೆರಪಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಶೈಕ್ಷಣಿಕ ವರ್ಷದಿಂದ ಕಡ್ಡಾಯ

ಅಲೈಡ್ ಮತ್ತು ಹೆಲ್ತ್ ಕೇರ್ ಪ್ರೊಫೆಷನ್ ನ ರಾಷ್ಟ್ರೀಯ ಆಯೋಗದ (ಎನ್‌ಸಿಎಎಚ್‌ಪಿ) ಅಧ್ಯಕ್ಷೆ ಡಾ. ಯಜ್ಞ ಉನ್ಮೇಶ್ ಶುಕ್ಲಾ ಮಾತನಾಡಿ, ಆಯೋಗ 17 ಪಠ್ಯಕ್ರಮಗಳನ್ನು ಪರಿಚಯಿಸಿದ್ದು, ಇವು 2026ರ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಲಿವೆ. ಸಂಯೋಜಿತ ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರ ನೋಂದಣಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸಾಂಕ್ರಾಮಿಕವಲ್ಲದ ರೋಗಗಳು, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಸ್ನಾಯುಸಂಬಂಧಿ ಅಸ್ವಸ್ಥತೆಗಳ ಹೆಚ್ಚಳ ಹಾಗೂ ವೃದ್ಧರ ಸಂಖ್ಯೆ ಬೆಳೆಯುತ್ತಿರುವುದು ವೃದ್ಧಾಪ್ಯದ ಆರೈಕೆಯ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕುಲಪತಿ ಡಾ. ದಿಲೀಪ್ ನಾಯಕ್, ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಫಿಸ್ಟ್ ಅಂತಾರಾಷ್ಟ್ರೀಯ ವ್ಯವಹಾರಗಳ ಚೇರ್ ಮೆನ್ ಡಾ. ಅಲಿ ಇರಾನಿ, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ಸ್ ಅಧ್ಯಕ್ಷ ಡಾ. ಸಂಜೀವ್ ಕೆ. ಝಾ, ದಿ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೇಥೆರಪಿಸ್ಟ್ಸ್ ರಾಷ್ಟ್ರೀಯ ಮಹಿಳಾ ವಿಭಾಗದ ಮುಖ್ಯಸ್ಥೆ ಡಾ. ರುಚಿ ವರ್ಸ್ನೇಯಿ, ಯೇನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಯೇನೆಪೋಯ ಅಬ್ದುಲ್ಲಾ ಕುಂಞ ಮತ್ತಿತರರಿದ್ದರು.

PREV
Read more Articles on
click me!

Recommended Stories

ಸಚಿವ ಸಂಪುಟ ಪುನರ್ ರಚಿಸಿ ಹೊಸಬರಿಗೆ ಅವಕಾಶ ಕೇಳುವುದು ತಪ್ಪಲ್ಲ: ಶಾಸಕ ಎ.ಎಸ್. ಪೊನ್ನಣ್ಣ
ಗಮನಿಸಿ, ಮಂಗಳೂರು-ಚೆನ್ನೈ ಎಗ್ಮೋರ್ ವಿಶೇಷ ರೈಲು ಓಡಾಟ ವಿಸ್ತರಣೆ, ಈ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಇದೆ