
ಮೂಡುಬಿದಿರೆ (ಮಾ.16) ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ವಿರುದ್ದ ಮಹಿಳೆ ಆರೋಪ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಹಿಳೆ ಹಾಗೂ ಇನ್ಸ್ಪೆಕ್ಟರ್ ಸಂದೇಶ್ ಫೋನ್ ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ ಭಾರಿ ವೈರಲ್ ಆಗಿದೆ. 8 ವರ್ಷ ಅಕ್ರಮ ಸಂಬಂಧ ಇಟ್ಟುಕೊಂಡರೂ ಇನ್ಸ್ಪೆಕ್ಟರ್ ಅನ್ನೋ ಕಾರಣಕ್ಕೆ ಸಹಿಸಿಕೊಂಡಿದ್ದೇನೆ. ಆದರೆ ಮಗಳ ಮೇಲೆ ಕಣ್ಣು ಹಾಕಿದರೆ ಸುಮ್ಮನಿರಲ್ಲ ಅನ್ನೋ ಆಡಿಯೋ ಕೋಲಾಹಲ ಸೃಷ್ಟಿಸಿದೆ. ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಹತ್ವದ ಆದೇಶ ನೀಡಿದ್ದಾರೆ. ಉತ್ತರ ವಿಭಾಗದ ಎಸಿಪಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಕಮಿಷನರ್ ಸೂಚನೆ ನೀಡಿದ್ದಾರೆ.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪ್ರಕರಣ ಕುರಿತು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಇದುವರೆಗೆ ಯಾವುದೇ ಮಹಿಳೆ ಇನ್ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಅಧಿಕೃತ ದೂರು ನೀಡಿಲ್ಲ. ಸಂತ್ರಸ್ತ ಮಹಿಳೆ ಮತ್ತು ಅವರ ಸಹೋದರಿಯ ನಡುವೆ ಕೆಲವು ವಿವಾದಗಳಿತ್ತು. ಈ ವಿವಾದದಲ್ಲಿ ಇನ್ಸ್ಪೆಕ್ಟರ್ ಇನ್ನೊಬ್ಬರಿಗೆ ಬೆಂಬಲ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಈ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಅಪ್ರಾಪ್ತ ಮಗುವಿನ ಕಸ್ಟಡಿಯನ್ನು ತಾಯಿಗೆ ನೀಡಿರುವುದು ಕಾನೂನಿನ ಪ್ರಕಾರ ಸರಿಯಾಗಿರುವುದರಿಂದ ಆ ವಿಷಯದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಯಾರಾದರೂ ಪೀಡಿತರು ದೂರು ನೀಡಲು ಬಯಸಿದರೆ ಅವರು ಸ್ವತಂತ್ರವಾಗಿ ದೂರು ನೀಡಬಹುದು. ಅಂತಹ ಸಂದರ್ಭದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಂಬಂಧಿಸದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಮೂರನೇ ವ್ಯಕ್ತಿಯಾದ ಮಹಿಳೆಯ ವೈಯಕ್ತಿಕ ಸಂಬಂಧಗಳ ಬಗ್ಗೆ ವಿಚಾರಣೆ ನಡೆಸುವುದು ಗೌಪ್ಯತೆ ಉಲ್ಲಂಘನೆ ಬಗ್ಗೆ ಚಿಂತನೆಗಳನ್ನು ಹುಟ್ಟುಹಾಕಬಹುದು. ವಿಚಾರಣೆ ವೇಳೆ ಸತ್ಯಾಂಶಗಳು ಹೊರಬರುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಸಂತ್ರಸ್ತೆ ಕಚೇರಿಗೆ ಬಂದಾಗ ತೋರಿಸಿರುವುದು ಗೋಡೆಯನ್ನು ಹಾರಿ ದಾಟುತ್ತಿರುವ ವಿಡಿಯೋ ಮಾತ್ರ. ಆ ಮನೆಯ ಮಾಲೀಕರಿಂದ ಯಾವುದೇ ದೂರು ಇಲ್ಲದ ಕಾರಣ ಆ ವಿಷಯದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. 'ಆಡಿಯೋಗಳು ಹೊಸದಾಗಿವೆ, ACP ಅವರ ವರದಿಯಲ್ಲಿ ಯಾವ ವಿಷಯಗಳು ಹೊರಬರುತ್ತವೆ ಎಂಬುದನ್ನು ನೋಡೋಣ ಎಂದು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.