
ಮಂಗಳೂರು (ಜು.27): ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ ಆಯಿಷಾ ಪಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ವೃತ್ತಿಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಲೇಖಕಿಯಾಗಿ ಗುರುತಿಸಿಕೊಂಡಿರುವ ಆಯಿಷಾ ಪಿ. ಅವರು, ಪತ್ರಕರ್ತ ಮತ್ತು ಟಿವಿ ನಿರೂಪಕ ಶಂಶೀರ್ ಬುಡೋಳಿ ಅವರ ಪತ್ನಿಯಾಗಿದ್ದಾರೆ. ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರ ಸೇವೆಯನ್ನು ಗುರುತಿಸಿ ಯುವ ಕಾಂಗ್ರೆಸ್ನಲ್ಲಿ ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ.
ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಇವರ ನಿರ್ದೇಶನದ ಮೇರೆಗೆ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಅವರ ಅನುಮೋದನೆಯೊಂದಿಗೆ, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಕಮಿಟಿಯ (KPYCC) ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.
ಆಯಿಷಾ ಅವರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಶುಭ ಹಾರೈಸಿದ್ದಾರೆ.