
ಮಂಡ್ಯ (ಜೂ.19): ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೆ.ಆರ್. ನಂದಿನಿ ಅವರು ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಕಾರು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸಿಇಓ ಅವರ ಸರ್ಕಾರಿ ನಿವಾಸದ ಮುಂಭಾಗದಲ್ಲೇ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಮಂಡ್ಯ ನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಊಟಕ್ಕೆ ಬಂದಿದ್ದ ಸಿಇಓ ಕೆ.ಆರ್. ನಂದಿನಿ ಅವರು, ಮಧ್ಯಾಹ್ನ ಊಟ ಮುಗಿಸಿ ಪುನಃ ಕಚೇರಿಗೆ ತೆರಳಲು ಸಜ್ಜಾಗಿದ್ದರು. ಅವರು ತಮ್ಮ ಸರ್ಕಾರಿ ಕಾರಿನಲ್ಲಿ ನಿವಾಸದ ಆವರಣದಿಂದ ಹೊರಬಂದು ಕಚೇರಿಯತ್ತ ಮುಖ ಮಾಡಿದ ಸಂದರ್ಭದಲ್ಲಿ, ವೇಗವಾಗಿ ಬಂದ ಮತ್ತೊಂದು ಕಾರು ಸಿಇಓ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸ ಎಷ್ಟಿತ್ತೆಂದರೆ, ಡಿಕ್ಕಿಯಾದ ತಕ್ಷಣವೇ ಸಿಇಓ ಅವರ ಸರ್ಕಾರಿ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಂದಿನಿ ಅವರಿಗೆ ಸಣ್ಣಪುಟ್ಟ ಅಘಾತವಾಗಿದೆ. ಆದರೆ, ಕಾರಿನ ಏರ್ಬ್ಯಾಗ್ ಅಥವಾ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಅವರು ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ನೆರವಿಗೆ ಧಾವಿಸಿದರು.
ಭೀಕರ ಅಪಘಾತದಿಂದ ಸ್ವಲ್ಪ ಕಾಲ ಆಘಾತಕ್ಕೊಳಗಾದ ಸಿಇಓ ಕೆ.ಆರ್. ನಂದಿನಿ ಅವರು, ನಂತರ ಸುಧಾರಿಸಿಕೊಂಡು ಮತ್ತೊಂದು ಕಾರಿನ ವ್ಯವಸ್ಥೆ ಮಾಡಿಕೊಂಡು ಕಚೇರಿ ಕೆಲಸಕ್ಕೆ ತೆರಳಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿಇಓ ಕಾರಿಗೆ ಡಿಕ್ಕಿ ಹೊಡೆದ ಕಾರಿನ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.