Mandya : ನರೇಗಾ ಹಿನ್ನೆಡೆಗೆ ಜನಪ್ರತಿನಿಧಿ, ಅಧಿಕಾರಿಗಳ ತಾತ್ಸಾರವೇ ಕಾರಣ

Published : Nov 20, 2022, 05:49 AM IST
Mandya :  ನರೇಗಾ ಹಿನ್ನೆಡೆಗೆ ಜನಪ್ರತಿನಿಧಿ, ಅಧಿಕಾರಿಗಳ ತಾತ್ಸಾರವೇ ಕಾರಣ

ಸಾರಾಂಶ

ಜಿಲ್ಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿನ್ನೆಡೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಾತ್ಸಾರ ಮನೋಭಾವ ಕಾರಣ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಗಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.

 ಮಂಡ್ಯ (ನ.20):  ಜಿಲ್ಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿನ್ನೆಡೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಾತ್ಸಾರ ಮನೋಭಾವ ಕಾರಣ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಗಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್‌ (Sumlatha)  ಅವರಿಗೆ ನರೇಗಾ ಯೋಜನೆ ಬಗ್ಗೆ ಜ್ಞಾನದ ಕೊರತೆ ಇದೆ. ಅಲ್ಲದೇ, ಅಧಿಕಾರಿಗಳು ಕೂಡ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಗೆ ಶ್ರಮಿಸಿಲ್ಲ ಎಂದು ದೂರಿದರು.

ಮಂಡ್ಯ (Mandya)  ಕೃಷಿ ಪ್ರಧಾನ ಜಿಲ್ಲೆ. ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕವಾಗಿ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಕಾರ್ಯತಂತ್ರ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ಕೂಲಿಕಾರರ ಸಭೆ ಆಯೋಜಿಸಿ ವ್ಯಾಪಕ ಚರ್ಚೆ ನಡೆಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಸದೆ ಸುಮಲತಾ ಅವರು ಲೋಕಸಭೆ ಅಧಿವೇಶನದಲ್ಲಿ ಚರ್ಚಿಸಿ ಒಂದು ಮಾನವ ದಿನಕ್ಕೆ 600 ರು. ಕೂಲಿ ಹಾಗೂ ಕಡಿತಗೊಂಡಿರುವ 10 ರು. ಸಾಮಗ್ರಿ ವೆಚ್ಚ ಭರಿಸಲು ಒತ್ತಾಯಿಸಬೇಕು. ನಗರ ಪ್ರದೇಶಕ್ಕೂ ನರೇಗಾ ಯೋಜನೆ ವಿಸ್ತರಿಸಿ ಅನುಕೂಲ ಕಲ್ಪಿಸಬೇಕು. ಕೃಷಿ ಚಟುವಟಿಕೆಗಳಾದ ಭತ್ತ, ಕಬ್ಬು ಹಾಗೂ ಇತರೆ ಬೆಳೆ ಪದ್ಧತಿಗೆ ನರೇಗಾ ಯೋಜನೆ ವಿಸ್ತರಿಸುವಂತೆ ಸಂಸದರು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ನಿರ್ಣಯ ಜಾರಿ ಮಾಡಲಿ:

ನವೆಂಬರ್‌ 12 ಹಾಗೂ 13ರಂದು ಜಿಲ್ಲಾ ಕೇಂದ್ರದಲ್ಲಿ ನಡೆದ ಕೃಷಿ ಕೂಲಿಕಾರರ 5ನೇ ಜಿಲ್ಲಾ ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿಯಲ್ಲಿ ಕಾರ್ಯ ನಿರ್ವಹಿಸುವ ಮಾನವ ದಿನದ ಕೂಲಿ 600 ರು.ಗೆ ಹೆಚ್ಚಳ, 200 ದಿನಗಳ ಕೆಲಸ ಖಾತ್ರಿ, ಕಡಿತಗೊಂಡಿರುವ ಸಲಕರಣೆ ವೆಚ್ಚ ಭರಿಸುವುದು, ಆನ್‌ಲೈನ್‌ ಹಾಜರಾತಿ ಸ್ಥಗಿತ ಹಾಗೂ ನಗರ ಪ್ರದೇಶಕ್ಕೂ ನರೇಗಾ ಯೋಜನೆ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.

ಕಬ್ಬಿಗೆ ಬೆಂಬಲ ಬೆಲೆ ನಿಗದಿಗಾಗಿ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕೂಡಲೇ ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ 4.500 ರು. ನಿಗದಿ ಸೇರಿದಂತೆ ಹಲವು ನಿರ್ಣಯಗಳ ಜಾರಿಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌, ಪದಾಧಿಕಾರಿಗಳಾದ ಬಿ.ಎಂ.ಶಿವಮಲ್ಲಯ್ಯ, ಅರುಣ್‌ಕುಮಾರ್‌, ಸುರೇಂದ್ರ, ರಾಜು, ಆನಂದ್‌ ಇದ್ದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ 8ನೇ ರಾಜ್ಯ ಸಮ್ಮೇಳನ ನವೆಂಬರ್‌ ಅಂತ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆಯಲಿದೆ. ಸಮ್ಮೇಳನಕ್ಕೆ ಜಿಲ್ಲೆಯ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಮಂಡ್ಯ ಜಿಲ್ಲಾ ಕೃಷಿ ಕೂಲಿಕಾರರ ಸಂಘಕ್ಕೆ ನೂತನವಾಗಿ 18 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

- ಎಂ.ಪುಟ್ಟಮಾದು, ಪ್ರಾಂತ ಕೃಷಿ ಕೂಲಿಗಾರರ ಸಂಘದ ಜಿಲ್ಲಾಧ್ಯಕ್ಷ

ನರೇಗಾದಲ್ಲಿ ಕೂಲಿ ಹಣ

ಪಾವಗಡ (ಅ.24): ವಾಣಿಜ್ಯ ಬೆಳೆಗಳ ಮಾದರಿಯಲ್ಲಿಯೇ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾ ಯೋಜನೆ ಅಡಿ, ಕೂಲಿ ಹಣ ಬಿಡುಗಡೆಗೊಳಿಸಿ, ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಗತಿಗೆ ಸಹಕರಿಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ ಹಾಗೂ ರಾಷ್ಟ್ರೀಯ ಕಿಸಾನ್‌ ಸಂಘದ ರಾಜ್ಯಾಧ್ಯಕ್ಷ ಪಾವಗಡ ವಿ.ನಾಗಭೂಷಣರೆಡ್ಡಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿನ ಅನೇಕ ಮಂದಿ ರೈತ (Farmers)  ಮುಖಂಡರೊಂದಿಗೆ ಭಾನುವಾರ ಬೆಂಗಳೂರಿನ (Bengaluru)  ಅವರ ನಿವಾಸಕ್ಕೆ ನಿಯೋಗ ತೆರಳಿ, ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಅವರನ್ನು ಭೇಟಿ ಮಾಡಿ, ಗ್ರಾಮೀಣ ರೈತರ ಸಮಸ್ಯೆ ಕುರಿತು ಚರ್ಚಿಸಿದರು.

ಈ ವೇಳೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊತ್ತೂರು ಎಸ್‌.ಹನುಮಂತರಾಯಪ್ಪ ಮಾತನಾಡಿ, ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಣಾಮ ನೀರಾವರಿ ಬೆಳೆಗಳ ಹಾನಿಯಿಂದ ಗ್ರಾಮೀಣ ಭಾಗದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವ್ಯವಸಾಯವನ್ನೆ ನಂಬಿದ್ದ ರೈತರು ಪದೇ ಪದೇ ಬೆಳೆನಷ್ಟದಿಂದ ಜೀವನೋಪಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಜನತೆಗೆ ಉಪಯುಕ್ತ ಯೋಜನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಇದರಿಂದ ಗ್ರಾಮೀಣ ಪ್ರಗತಿಗೆ ಸಹಕಾರಿಯಾಗುತ್ತಿದೆ. ಹೀಗಾಗಿ ತಾವು ಪರಿಶೀಲನೆ ನಡೆಸಿ, ಅಡಕೆ, ತೆಂಗು, ದಾಳಿಂಬೆ, ಪಪ್ಪಾಯಿ ಇತರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳ ಮಾದರಿಯಲ್ಲಿಯೇ ಭತ್ತ, ರಾಗಿ, ಗೋದಿ, ಸಜ್ಜೆ, ಸವಣೆ, ತೊಗರಿ, ಹಲಸಂದಿ ಇತರೆ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾದಲ್ಲಿ ಕೂಲಿ ಹಣ ಕಲ್ಪಿಸುವಂತೆ ಒತ್ತಾಯಿಸಿ, ಗ್ರಾಮೀಣ ಪ್ರದೇಶಗಳ ರೈತರಲ್ಲಿ ಈ ಬಗ್ಗೆ ಸಾಕಷ್ಟುಒತ್ತಡವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ರಾಷ್ಟೀಯ ಕಿಸಾನ್‌ ರೈತ ಸಂಘದ ರಾಜ್ಯಾಧ್ಯಕ್ಷರಾದ ಪಾವಗಡ ವಿ.ನಾಗಭೂಷಣರೆಡ್ಡಿ ಮಾತನಾಡಿ, ಭತ್ತ, ರಾಗಿ, ಸಜ್ಜೆ, ತೊಗರಿ ಇತರೆ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾದಲ್ಲಿ ಕೂಲಿ ಹಣ ನೀಡಿದರೆ ರೈತರ ಸಂಕಷ್ಟದಲ್ಲಿ ನೆರವಾದಂತಾಗಲಿದ್ದು, ರೈತರಿಗೆ ಸಮಸ್ಯೆ ಆಗುವುದಿಲ್ಲ. ಬೆಳೆನಷ್ಟದಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಕಡಿಮೆ ಆಗಲು ಸಾಧ್ಯವಾಗಲಿದೆ ಎಂದರು.

ಇದೇ ವೇಳೆ ಜಿಲ್ಲಾ ಬಿಜೆಪಿ ಮುಖಂಡರಾದ ಕೃಷ್ಣಗಿರಿ ತಿಪ್ಪೇಸ್ವಾಮಿ, ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಕ್ಯಾತಗಾನಬರ್ಲು ಶ್ರೀನಿವಾಸ್‌, ಪಾವಗಡದ ಸ್ವಾಮಿ ರಾಮಾಂಜಿನಪ್ಪ, ರೈತ ಮುಖಂಡರಿದ್ದರು.

PREV
Read more Articles on
click me!

Recommended Stories

ಪಾರಿವಾಳ ಪ್ರಿಯರಿಗೆ ಶಾಕ್: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ನಿಷೇಧ
ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು