
ಮಂಡ್ಯ (ಆ.17): ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಕುಡುಕ ಚಾಲಕನೊಬ್ಬ ಭೀಕರ ಅವಾಂತರ ಸೃಷ್ಟಿಸಿದ್ದಾನೆ. ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಎಸಗಿದ್ದು, ಕೊನೆಗೆ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಕಾರು ಪಲ್ಟಿಯಾಗಿದೆ. ಅಪಘಾತದ ಬಳಿಕ ಸಾರ್ವಜನಿಕರ ಮೇಲೆಯೇ ದರ್ಪ ತೋರಲು ಬಂದ ಚಾಲಕನಿಗೆ ರೊಚ್ಚಿಗೆದ್ದ ಸ್ಥಳೀಯರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿ ಹರೀಶ್ ಎಂಬಾತನೇ ಈ ಅವಾಂತರ ಸೃಷ್ಟಿಸಿದ ಕಾರು ಚಾಲಕ.
ಚನ್ನಪಟ್ಟಣದಿಂದ ಮದ್ದೂರಿಗೆ ಬಂದಿದ್ದ ಹರೀಶ್, ಪೂರ್ಣ ಪ್ರಮಾಣದಲ್ಲಿ ಮದ್ಯದ ಅಮಲಿನಲ್ಲಿದ್ದನು. ಮದ್ದೂರಿನ ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದ ಬಳಿ ಹಾಗೂ ಟಿ.ಬಿ. ವೃತ್ತದ (TB Circle) ಸುತ್ತಮುತ್ತ ಸಿಕ್ಕ ಸಿಕ್ಕ ವಾಹನಗಳಿಗೆ ಕಾರಿನಿಂದ ಡಿಕ್ಕಿ ಹೊಡೆದುಕೊಂಡು ಅಡ್ಡಾದಿಡ್ಡಿಯಾಗಿ ಸಾಗಿದ್ದಾನೆ. ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಕೊನೆಗೆ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯಲ್ಲೇ ಉರುಳಿಬಿದ್ದಿದೆ (ಪಲ್ಟಿಯಾಗಿದೆ).
ಕಾರು ಪಲ್ಟಿಯಾದ ಬಳಿಕ ಸ್ಥಳೀಯರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ, ಕಾರಿನಿಂದ ಇಳಿದ ಹರೀಶ್ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಸಾರ್ವಜನಿಕರ ಮೇಲೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಗ್ವಾದಕ್ಕೆ ಇಳಿದಿದ್ದಾನೆ. ಇದರಿಂದ ತೀವ್ರ ಕೆರಳಿದ ಸ್ಥಳೀಯರು ಮತ್ತು ವಾಹನ ಸವಾರರು ಆತನಿಗೆ ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿ ಧರ್ಮದೇಟು ನೀಡಿದ್ದಾರೆ.
ವಿಚಾರಣೆ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹರೀಶ್ ಅತಿಯಾದ ಕುಡಿತದ ಚಟಕ್ಕೆ ದಾಸನಾಗಿದ್ದರಿಂದ, ಆತನ ಮದ್ಯಪಾನ ಬಿಡಿಸಲು ಕುಟುಂಬಸ್ಥರು ಇತ್ತೀಚೆಗಷ್ಟೇ ‘ಕುಡಿತ ಬಿಡಿಸುವ ಕೇಂದ್ರ’ಕ್ಕೆ (Rehabilitation Centre) ಸೇರಿಸಿದ್ದರು. ಆದರೆ ಮನೆಯಲ್ಲಿ ಯಾರಿಗೂ ಹೇಳದೆ ಗುಟ್ಟಾಗಿ ಕಾರು ತೆಗೆದುಕೊಂಡು ಬಂದು ಮದ್ದೂರಿನಲ್ಲಿ ಈ ರಂಪಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮದ್ದೂರು ಸಂಚಾರ ಪೊಲೀಸರು, ಗಾಯಗೊಂಡಿದ್ದ ಚಾಲಕ ಹರೀಶ್ನನ್ನು ವಶಕ್ಕೆ ಪಡೆದು ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮದ್ಯದ ಅಮಲು ಇಳಿಯದ ಕಾರಣ ಆತ ಆಸ್ಪತ್ರೆಯಲ್ಲೂ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ಅಸಭ್ಯವಾಗಿ ವರ್ತಿಸಿ ರಂಪಾಟ ಮುಂದುವರಿಸಿದ್ದಾನೆ.
ಸದ್ಯ ಘಟನೆ ಸಂಬಂಧ ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನವನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.