Uttara Kannada News: ನಿರ್ವಹಣೆ ವೈಫಲ್ಯ; ದೋಣಿ ವಿಹಾರ, ಉದ್ಯಾನಕ್ಕೆ ಬೀಗ

By Kannadaprabha NewsFirst Published Dec 11, 2022, 12:42 PM IST
Highlights

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಲೂಕಿನ ಸನವಳ್ಳಿ ದೋಣಿ ವಿಹಾರ ಮತ್ತು ಉದ್ಯಾನ ನಿರ್ವಹಣೆ ಮಾಡಲಾಗದೇ ಬೀಗ ಜಡಿಯಲಾಗಿದೆ. ಉದ್ಯಾನವು ಕಸ, ಗಿಡಗಂಟಿಗಳ ತಾಣವಾಗಿದೆ. ಇದರಿಂದ ಪ್ರವಾಸಿಗರಿಗೆ ನಿರಾಶೆಯಾಗಿದೆ

ಸಂತೋಷ ದೈವಜ್ಞ

ಮುಂಡಗೋಡ (ಡಿ.11) : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಲೂಕಿನ ಸನವಳ್ಳಿ ದೋಣಿ ವಿಹಾರ ಮತ್ತು ಉದ್ಯಾನ ನಿರ್ವಹಣೆ ಮಾಡಲಾಗದೇ ಬೀಗ ಜಡಿಯಲಾಗಿದೆ. ಉದ್ಯಾನವು ಕಸ, ಗಿಡಗಂಟಿಗಳ ತಾಣವಾಗಿದೆ. ಇದರಿಂದ ಪ್ರವಾಸಿಗರಿಗೆ ನಿರಾಶೆಯಾಗಿದೆ. ತಾಲೂಕಿನ ಸನವಳ್ಳಿ ಜಲಾಶಯಕ್ಕೆ ಹೊಂದಿಕೊಂಡು ತಲೆ ಎತ್ತಿರುವ ದೋಣಿ ವಿಹಾರ ಹಾಗೂ ಉದ್ಯಾನ ಅಗತ್ಯ ಸೌಲಭ್ಯ ಒದಗಿಸಲಾಗದೆ ಮುಚ್ಚಲಾಗಿದೆ. ಅಕ್ಷರಶಃ ಕಾಡಿನಂತೆ ಭಾಸವಾಗುತ್ತಿದೆ.

ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಿ ಜನತೆಯ ದಾಹ ತಣಿಸುತ್ತಾ ಬಂದಿರುವ ಚಿಕ್ಕ ನೀರಾವರಿ ಇಲಾಖೆ ಸುಪರ್ದಿಗೆ ಬರುವ ಈ ಜಲಾಶಯವನ್ನು ಪ್ರವಾಸಿ ತಾಣ ಮಾಡಲು ಉತ್ತಮ ವಾತಾವರಣವಿತ್ತು. ಅರಣ್ಯ ಇಲಾಖೆಯ ಪ್ರಸ್ತಾವದಂತೆ 2008ರ ಬಿಜೆಪಿ ಸರ್ಕಾರದಿಂದ ಅನುಮೋದನೆಗೊಂಡಿತ್ತು. ಉದ್ಯಾನ ನಿರ್ಮಾಣಗೊಂಡು ಪ್ರವಾಸಿಗರಿಗೂ ಪ್ರಿಯವಾಗಿತ್ತು. ಸುಮಾರು .30 ಲಕ್ಷ ವೆಚ್ಚದಲ್ಲಿ ಸುತ್ತ ಹೂವು ಹಾಗೂ ಬಗೆ ಬಗೆಯ ಸಸಿಗಳಿಂದ ಕಂಗೊಳಿಸುವ ಉದ್ಯಾನ ನಿರ್ಮಾಣ ಮಾಡಲಾಗಿತ್ತು.

ಎರಡು ಕೋಟಿ ಮೌಲ್ಯದ ಪಾರ್ಕ್ ಜಾಗ ನುಂಗಿದ ಕುಡ ಅಧ್ಯಕ್ಷ

ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಕುಟೀರಗಳು, ಮಕ್ಕಳಿಗೆ ಆಟವಾಡಲು ಜೋಕಾಲಿ, ಜೀಕು ಬಂಡಿ, ತಿರುಗುಣಿ ಸೇರಿದಂತೆ ವಿವಿಧ ಆಟಾಟಿಕೆಗಳ ಸಾಮಾನುಗಳು ಹಾಗೂ ಅತಿ ಮುಖ್ಯವಾಗಿ ಸುತ್ತಮುತ್ತ ಎಲ್ಲೂ ಇಲ್ಲದಂತಹ ವಿಶಿಷ್ಟರೀತಿಯ ದೋಣಿ ವಿಹಾರ ವ್ಯವಸ್ಥೆ ಮಾಡಲಾಗಿತ್ತು. ನಿರ್ವಹಣೆಗಾಗಿ ಅರಣ್ಯ ಇಲಾಖೆ ಸಾಕಷ್ಟುಸಿಬ್ಬಂದಿ ನೇಮಿಸಿತ್ತು.

ಪಟ್ಟಣದಿಂದ ಸುಮಾರು 4 ಕಿ.ಮೀ. ದೂರ ಇಳಕಲ್‌-ಕೈಗಾ ಹೆದ್ದಾರಿಯಲ್ಲಿ ಇರುವ ಈ ಉದ್ಯಾನಕ್ಕೆ ನಿತ್ಯ ನೂರಾರು ಪ್ರವಾಸಿಗರು ಬಂದು ಇಲ್ಲಿಯ ವಾತಾವರಣ ಸವಿಯುತ್ತಿದ್ದರು. ಆದರೆ ಪ್ರವಾಸಿ ತಾಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗದೆ ನಿರ್ವಹಣೆ ಇಲ್ಲದೆ ಉದ್ಯಾನ ಬಂದ್‌ ಆಗಿದೆ. ದೋಣಿಗಳೆಲ್ಲ ಅಲ್ಲಲ್ಲಿಯೇ ತುಕ್ಕು ಹಿಡಿದು ಹೋಗಿದ್ದು, ಆಟಿಕೆಗಳೆಲ್ಲ ನಿಷ್ೊ್ರಯೋಜಕವಾಗಿವೆ.

ಸುತ್ತಮುತ್ತ ಅರಣ್ಯ ಪ್ರದೇಶವಿದ್ದು, ಮತ್ತಷ್ಟುಭೂಮಿಯಲ್ಲಿ ಉದ್ಯಾನ ವಿಸ್ತರಿಸಿ ಅಭಿವೃದ್ಧಿಪಡಿಸುವ ಬದಲು ಅರಣ್ಯ ಇಲಾಖೆಯವರಿಂದ ನಿರ್ವಹಣೆ ಮಾಡಲಾಗದೇ ಕೈಚೆಲ್ಲಿ ಉದ್ಯಾನÜವನ್ನೇ ಮುಚ್ಚಿರುವುದು ವಿಪರ್ಯಾಸವೇ ಸರಿ. ಇದು ಪ್ರವಾಸಿಗರಿಗೆ ತೀವ್ರ ನಿರಾಶೆ ಮೂಡಿಸಿದ್ದಂತೂ ಸುಳ್ಳಲ್ಲ.

Traveling Tips: ಜಂಗಲ್ ಸಫಾರಿ ವೇಳೆ ಇದು ನೆನಪಿರಲಿ

ಸುಮಾರು 5 ವರ್ಷಗಳಿಂದ ಬೀಗ ಜಡಿಯಲಾಗಿರುವ ಉದ್ಯಾನದ ಬಗ್ಗೆ ಯಾವ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳದೇ ಇರುವುದರಿಂದ ಇಂದಿಗೂ ಪಾಳು ಬಿದ್ದಿದೆ. ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಲಾಶಯ ಮತ್ತು ಉದ್ಯಾನ ಪಟ್ಟಣಕ್ಕೆ ಸಮೀಪವಿದೆ. ಈ ಮಾರ್ಗವಾಗಿ ನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುತ್ತವೆ. ಉದ್ಯಾನ ಅಭಿವೃದ್ಧಿ ಪಡಿಸುವುದರಿಂದ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ತಕ್ಷಣ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಉದ್ಯಾನ ಪುನಾರಂಭಿಸಬೇಕು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು.

ರಾಜು ಗುಬ್ಬಕ್ಕನವರ, ಸಾಮಾಜಿಕ ಕಾರ್ಯಕರ್ತ

click me!