Kannada sahitya sammelana: 28ರಂದು ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನ

By Kannadaprabha NewsFirst Published Dec 26, 2022, 7:18 AM IST
Highlights

ಮಡಿಕೇರಿ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಜ.28ರಂದು ನಡೆಸುವಂತೆ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಡಿಕೇರಿ (ಡಿ.26) : ಮಡಿಕೇರಿ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಜ.28ರಂದು ನಡೆಸುವಂತೆ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್‌ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದಲ್ಲಿ ನಡೆಸಬೇಕೆಂದು ತಾಲೂಕು ಸಮಿತಿ ಆಶಯ ಪಟ್ಟಿದೆ. ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಕಾರ ಸಂಘದ ಪದಾಧಿಕಾರಿಗಳು, ಊರಿನ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ, ಯುವಕ ಸಂಘಗಳು, ಯುವತಿ ಸಂಘಗಳು, ಆಟೋ ಮತ್ತು ವಾಹನ ಚಾಲಕರ ಸಂಘಗಳ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಊರಿನ ಎಲ್ಲ ಆಸಕ್ತ ಕನ್ನಡ ಮನಸುಗಳು ಒಂದಾಗಿ ಸೇರಿ ಮಡಿಕೇರಿ ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಊರಿನ ಹಬ್ಬದಂತೆ ನಡೆಸಿ ಕೊಡಬೇಕೆಂದು ಕೋರಿದರು.

ಬೆಟಗೇರಿಯಲ್ಲಿ ಜನವರಿ 28 ರಂದು ಮಡಿಕೇರಿ ತಾಲೂಕು ಕಸಾಪ ಸಮ್ಮೇಳನ

ಸ್ಮರಣ ಸಂಚಿಕೆ ಬಿಡುಗಡೆ:

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್‌ ಮಾತನಾಡಿ, ಸಮ್ಮೇಳನ ನಡೆಯುವ ಪ್ರದೇಶದ ಪ್ರತಿಯೊಬ್ಬರು ಸಮ್ಮೇಳದಲ್ಲಿ ಪಾಲ್ಗೊಳ್ಳಬೇಕು. ಸಮ್ಮೇಳನದಲ್ಲಿ ನಾಡಿಗೆ ಸೇವೆ ಸಲ್ಲಿಸಿ ಗತಿಸಿ ಹೋದವರ ಸೇವೆಗಳನ್ನು ನೆನಪಿಸಿಕೊಳ್ಳುವಂತಹ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಸಾಹಿತ್ಯ ಸಮ್ಮೇಳನ ನಡೆದ ಪ್ರದೇಶದ ಹಿರಿಮೆ ಗರಿಮೆ ಆ ಪ್ರದೇಶದಲ್ಲಿ ಬರುವ ಪ್ರಾಕೃತಿಕ ಸೌಂದರ್ಯ ಪ್ರದೇಶಗಳ ಬಗ್ಗೆ ದೇವಾಲಯಗಳ ಬಗ್ಗೆ ಸಾಂಸ್ಕೃತಿಕ ನೆಲೆಗಳ ಬಗ್ಗೆ ಮಾಹಿತಿ ಇರುವಂತಹ ಸ್ಮರಣ ಸಂಚಿಕೆಯನ್ನು ತರಲಾಗುವುದು. ಸಮ್ಮೇಳನದ ರ್ವಾಧ್ಯಕ್ಷರ ಮೆರವಣಿಗೆ, ಗೋಷ್ಠಿಗಳು, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಮಾಹಿತಿ ನೀಡಿದರು.

ಶಾಸಕರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸುವಂತೆಯೂ ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಅಲಂಕಾರ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹೀಗೆ ಹತ್ತು ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಲ್ಲ ಸಮಿತಿಗಳಿಗೆ ಅಧ್ಯಕ್ಷರು ಸಂಚಾಲಕರು ಹಾಗೂ 10 ಜನ ಸದಸ್ಯರು ಸೇರಿದಂತೆ ಸಮಿತಿ ರಚಿಸಿ ಮುಂದಿನ ಸಭೆಯಲ್ಲಿ ಸಮಿತಿಗಳ ಘೋಷಣೆ ಮಾಡುವಂತೆ ತೀರ್ಮಾನಿಸಲಾಯಿತು.

ಉದಯ ಪ್ರೌಢಶಾಲೆ ಅಧ್ಯಕ್ಷ ತಳೂರು ಕಿಶೋರ್‌ ಮಾತನಾಡಿ, ನಮ್ಮ ಊರಿನಲ್ಲಿ ನಡೆಸಲಿರುವ ಸಾಹಿತ್ಯ ಸಮ್ಮೇಳನ ಒಂದು ಅಭೂತಪೂರ್ವ ಕಾರ್ಯಕ್ರಮದಂತೆ ನಡೆಸಿಕೊಡುವಲ್ಲಿ ತಾವೆಲ್ಲರೂ ಶ್ರಮವಹಿಸುವುದಾಗಿಯೂ ಇಡೀ ಗ್ರಾಮದ ಜನರನ್ನು ಒಗ್ಗೂಡಿಸಿ ಸಮ್ಮೇಳನ ಮಾಡಬೇಕಿದೆ ಎಂದರು.

ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರಾಲಿ ಮಾದಯ್ಯ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಊರಿನಲ್ಲಿ ಮಾಡುವಂತೆ ತೀರ್ಮಾನಿಸಿರುವುದು ಖುಷಿ ತಂದಿದೆ. ನಾವೆಲ್ಲರೂ ಸೇರಿ ಹಿಂದಿನ ಎಲ್ಲಾ ತಾಲೂಕು ಸಮ್ಮೇಳನಗಳನ್ನು ಮೀರಿಸುವಂತಹ ಸಮ್ಮೇಳನ ನಡೆಸಬೇಕಿದೆ. ಅದಕ್ಕೆ ಪಂಚಾಯಿತಿ ಅಧ್ಯಕ್ಷನಾಗಿ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಂಡು ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಘೋಷಿಸಿದರು. ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲ ಗಣಪತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಕುಡೆಕಲ್‌ ಸಂತೋಷ್‌ ಮಾತನಾಡಿದರು.

ಉದಯ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಸೋಮಣ್ಣ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಧರಣಿ, ಭಾಗಮಂಡಲ ಹೋಬಳಿ ಅಧ್ಯಕ್ಷರಾದ ಸುನಿಲ್‌ ಜೆ. ಪತ್ರವೋ, ನಾಪೋಕ್ಲು ಹೋಬಳಿ ಅಧ್ಯಕ್ಷರಾದ ನೆರವಂಡ ಉಮೇಶ್‌, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್‌, ಕೋಶಾಧಿಕಾರಿಗಳಾದ ಎಂ.ಬಿ ಜೋಯಪ್ಪ, ತಾಲೂಕು ಕೋಶಾಧಿಕಾರಿ ಗೀತಾ ಗಿರೀಶ್‌, ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿಗಳಾದ ತಳೂರು ದಿನೇಶ್‌, ಕಡ್ಲೆರ ತುಳಸಿ ಮೋಹನ್‌ ಉಪಸ್ಥಿತರಿದ್ದರು.

Madikeri: ಹೈಕೋರ್ಟ್ ನೀಡಿದ ಗಡುವು ಮುಗಿದರೂ ಪೂರ್ಣಗೊಳ್ಳದ ಮಡಿಕೇರಿ ಕೋಟೆ ದುರಸ್ತಿ

ಸಭೆಯಲ್ಲಿ ತಲಕಾವೇರಿ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ ಮುದ್ದಯ್ಯ, ಪಟ್ಟಡ ಪೊನ್ನಪ್ಪ, ಮಟ್ಟನ ಉಲ್ಲಾಸ್‌, ನೆಯ್ಯಾಣಿ ಹೇಮಲತಾ, ತಳೂರ್‌ ಶಾಂತಿ, ಪ್ರಕಾಶ್‌, ಹೇಮಲತಾ ಪರ್ಣಚಂದ್ರ, ಕಡ್ಲೇರ ಜಯಲಕ್ಷ್ಮೇ, ದೊರೆ ಮಾದಪ್ಪ, ಪವಡಂಡ ಭೀಮಯ್ಯ, ಚಂದ್ರಪ್ರಭ, ಬಿ.ಎಂ. ಪುಷ್ಪಾವತಿ, ಚಳಿಯಂಡ ಯತೀಶ್‌, ಮೊಯ್ದು ಕುನಿಃ, ತಳೂರು ಕೇಶವ, ಉದಯ ಶಾಲೆಯ ಅಧ್ಯಾಪಕರಾದ ನಾಗರಾಜು, ಶಾಲಿನಿ, ಜೀವಿತ, ದಿವ್ಯ, ಜ್ಞಾನ ಪ್ರಕಾಶ್‌, ಜಗನ್ನಾಥ್‌, ಪಟ್ಟಡ ಪ್ರಭಾಕರ್‌, ತಳೂರು ಕಾಳಪ್ಪ, ಕಟ್ರತನ ಚಿನ್ನಪ್ಪ, ಪ್ರಕಾಶ್‌ ಆಚಾರ್ಯ, ಭಾಗಮಂಡಲ ಹೋಬಳಿ ಮಾಜಿ ಅಧ್ಯಕ್ಷ ಶ್ರೀಧರ್‌, ಮೂರ್ನಾಡು ಹೋಬಳಿ ಮಾಜಿ ಅಧ್ಯಕ್ಷರಾದ ಪಿ.ಪಿ. ಸುಕುಮಾರ್‌, ಆರ್‌.ಪಿ.ಚಂದ್ರಶೇಖರ್‌, ಸುನಿಲ್‌ ಪಿಂಟೋ ಅಲ್ಲದೆ ಸ್ತ್ರೀಶಕ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಊರ ಪ್ರಮುಖರು ಉಪಸ್ಥಿತರಿದ್ದು ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ತುಳಸಿ ನಿರೂಪಿಸಿದರು. ತಳೂರು ದಿನೇಶ್‌ ಸ್ವಾಗತಿಸಿದರು. ರೇವತಿ ರಮೇಶ್‌ ವಂದಿಸಿದರು.

click me!