Supreme Court: ಮಾಡಾಳು ವಿರೂಪಾಕ್ಷಪ್ಪನಿಗೆ ಮತ್ತೆ ಕಾನೂನು ಸಂಕಷ್ಟ? ಕ್ಲೀನ್‌ಚಿಟ್ ನೀಡಿದ ಹೈ ಕೋರ್ಟ್‌ಗೆ ಸುಪ್ರೀಂ ಚಾಟಿ!

Published : Sep 09, 2026, 06:09 PM IST
Madalu Virupakshappa

ಸಾರಾಂಶ

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್‌ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಾಯುಕ್ತದ ಮೇಲ್ಮನವಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಇಂತಹ ಗಂಭೀರ ಪ್ರಕರಣಗಳನ್ನು ರದ್ದುಗೊಳಿಸುವುದು ಭ್ರಷ್ಟರಿಗೆ ತಪ್ಪು ಮಾದರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್ ಆದೇಶಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೋರ್ಟ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್‌ನ ನಿರ್ಧಾರ ಅಸ್ವಾಭಾವಿಕವಾದದ್ದು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಸುಪ್ರೀಂಕೋರ್ಟ್ ಪೀಠದ ಗಂಭೀರ ಆಕ್ಷೇಪ!

ನ್ಯಾಯಮೂರ್ತಿ ಅಹ್ಸನುದ್ದೀನ್ ಅಮಾನುಲ್ಲಾ ನೇತೃತ್ವದ ದ್ವಿಸದಸ್ಯ ಪೀಠವು ಲೋಕಾಯುಕ್ತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹೈಕೋರ್ಟ್‌ನ ತೀರ್ಪನ್ನು ಬಲವಾಗಿ ಆಕ್ಷೇಪಿಸಿದ ನ್ಯಾಯಪೀಠ, "ಇಂತಹ ಗಂಭೀರ ಭ್ರಷ್ಟಾಚಾರದ ಪ್ರಕರಣಗಳನ್ನು ರದ್ದುಗೊಳಿಸಿದರೆ, ಭವಿಷ್ಯದಲ್ಲಿ ಲಂಚ ಪಡೆಯುವ ಭ್ರಷ್ಟರಿಗೆ ಅದೊಂದು ತಪ್ಪು ಮಾದರಿಯಾಗುತ್ತದೆ" ಎಂದು ತೀವ್ರ ಕಳವಳ ವ್ಯಕ್ತಪಡಿಸಿತು. ಹೈಕೋರ್ಟ್ ಈ ಪ್ರಕರಣದಲ್ಲಿ ನೀಡಿರುವ ಆದೇಶ ಅಸ್ವಾಭಾವಿಕವಾಗಿದ್ದು, ಲಂಚಕೋರರಿಗೆ ಧೈರ್ಯ ನೀಡುವಂತಿದೆ ಎಂದು ಅಭಿಪ್ರಾಯಪಟ್ಟ ಪೀಠವು ವಿಚಾರಣೆಯನ್ನು ಮುಂದೂಡಿತು.

ಏನಿದು ಮಾಡಾಳು ಲಂಚದ ಪ್ರಕರಣ?

ಈ ಭ್ರಷ್ಟಾಚಾರದ ಜಾಲ ಬಯಲಿಗೆ ಬಂದದ್ದು ೨೦೨೩ ರ ಮಾರ್ಚ್ ೨ ರಂದು. ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಂದ ೪೦ ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲಿಂದ ಮುಂದೆ ಲೋಕಾಯುಕ್ತ ನಡೆಸಿದ ದಾಳಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಪ್ರಶಾಂತ್ ಹಾಗೂ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ ೬.೧ ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಈ ಬೃಹತ್ ಪ್ರಮಾಣದ ಅಕ್ರಮ ಹಣ ಪತ್ತೆಯಾದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ಗಂಭೀರತೆ ಅರಿತು ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತವು, ವಿರೂಪಾಕ್ಷಪ್ಪ ಅವರನ್ನು ಎ-೧ (ಮೊದಲ ಆರೋಪಿ) ಹಾಗೂ ಅವರ ಮಗ ಪ್ರಶಾಂತ್ ಅವರನ್ನು ಎ-೨ (ಎರಡನೇ ಆರೋಪಿ) ಎಂದು ಹೆಸರಿಸಿ ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿತ್ತು.

ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್ ಮತ್ತು ಲೋಕಾ ಮೇಲ್ಮನವಿ!

ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ, ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ೨೦೨೩ ರ ಡಿಸೆಂಬರ್ ೨೦ ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, "ಮಾಡಾಳು ವಿರೂಪಾಕ್ಷಪ್ಪ ಅವರು ಸ್ವತಃ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲು ಸ್ಪಷ್ಟ ಆರೋಪ ಹಾಗೂ ಆಧಾರಪೂರ್ವಕ ಸಾಕ್ಷ್ಯಗಳಿಲ್ಲ" ಎಂದು ಹೇಳಿ ಅವರ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಕ್ಲೀನ್‌ಚಿಟ್ ನೀಡಿತ್ತು.

ಬಿಡದ ಸಂಕಷ್ಟ!

ಹೈಕೋರ್ಟ್‌ನ ಈ ನಿರ್ಧಾರವನ್ನು ಸವಾಲಾಗಿ ಸ್ವೀಕರಿಸಿದ ಲೋಕಾಯುಕ್ತ ಸಂಸ್ಥೆಯು ತಕ್ಷಣವೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ಆಕ್ಷೇಪ ಎತ್ತಿರುವುದರಿಂದ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗುವ ಲಕ್ಷಣಗಳು ದಟ್ಟವಾಗಿವೆ.

PREV
Read more Articles on
click me!

Recommended Stories

ವಿಶ್ವದ ಅತ್ಯುತ್ತಮ ನೈಟ್‌ಲೈಫ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು, ಭಾರತದ ಏಕೈಕ ನಗರ ಎಂಬುದೇ ಹೆಮ್ಮೆ!
ಫಾರ್ಮ್‌ಹೌಸ್ ರಹಸ್ಯ ಹೊಸ ಸಂಕಷ್ಟ, ಕೋರ್ಟ್ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ