ದಾವಣಗೆರೆ: 15ಕ್ಕೂ ಹೆಚ್ಚು ಜಾನುವಾರುಗಳಿಗೆ ಹುಚ್ಚು ನಾಯಿ ಕಡಿತ

By Kannadaprabha NewsFirst Published Sep 9, 2019, 10:32 AM IST
Highlights

ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಹುಚ್ಚು ನಾಯಿಯ ಹಾವಳಿ ಮಿತಿ ಮೀರಿದೆ. ಹುಚ್ಚು ನಾಯಿಯೊಂದು 15ಕ್ಕೂ ಹೆಚ್ಚು ಜಾನುವಾರುಗಳಿಗೆ ಕಚ್ಚಿದೆ. ಇದರಿಂದ ಆಸುಪಾಸಿನ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ(ಸೆ.09): ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಒಂದೇ ದಿನ ಕರು, ದನ, ಎಮ್ಮೆ ಸೇರಿ 15 ಜಾನುವಾರುಗಳಿಗೆ ಹುಚ್ಚು ನಾಯಿಯೊಂದು ಕಚ್ಚಿದ ಘಟನೆ ಭಾನುವಾರ ನಡೆದಿದೆ.

ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು, ದನ, ಎಮ್ಮೆಗಳನ್ನು ಹುಚ್ಚು ನಾಯಿ ಕಚ್ಚಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹುಚ್ಚು ನಾಯಿಯನ್ನ ಬೆನ್ನಟ್ಟಿಹೊಡೆದು ನಂತರ ಅದನ್ನು ಗ್ರಾಪಂ ಮುಂಬಾಗಿಲಲ್ಲಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಐದಾರು ತಿಂಗಳಿಂದ ಸಾಸ್ವೆಹಳ್ಳಿಯ ಹೋಬಳಿಯ ಯಾವುದೇ ಗ್ರಾಮಗಳಿಗೆ ಹೋದರೂ ನಾಯಿಗಳ ಹಿಂಡು ಕಂಡು ಬರುತ್ತದೆ. ಈಗಾಗಲೇ 15-20 ಜನರಿಗೆ ನಾಯಿಗಳು ಕಚ್ಚಿದ್ದು ಚಿಕಿತ್ಸೆ ಪಡೆದಿದ್ದಾರೆ.

ನಾಯಿಗಳ ಹುಚ್ಚಾಟಕ್ಕೆ ಕಡಿವಾಣ ಹಾಕಿ:

ಗ್ರಾಮದ ಹುಚ್ಚು ನಾಯಿ ಕಡಿತಕ್ಕೊಳಗಾದ ಜಾನುವಾರು ಮಾಲೀಕ ಅಬ್ಬಾಸ್‌ ಮಾತನಾಡಿ, ಗ್ರಾಮದಲ್ಲಿ 2 ತಿಂಗಳಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಇವುಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಗಮನಕ್ಕೆ ಹಲವು ಬಾರಿ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ಈಗಲಾದರೂ ಗ್ರಾಪಂನವರು ಮುಂದೆ ಇಂತಹ ಘಟನೆ ನಡೆಯದಂತೆ ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ: 'ಬಿಜೆಪಿ ದೇಶದ ಜನರ ಪ್ರೀತಿಯ ಪಕ್ಷ'

ಗ್ರಾಪಂ ಅಧ್ಯಕ್ಷ ಆರ್‌.ಎಂ. ಕುಬೇಂದ್ರಯ್ಯ ಮಾತನಾಡಿ, ನಾಯಿಗಳನ್ನು ಹಿಡಿದರೆ, ಪ್ರಾಣಿ ದಯಾ ಸಂಘದವರು ಗ್ರಾಪಂ ವಿರುದ್ಧ ದೂರು ದಾಖಲಿಸುತ್ತಾರೆ. ಆದ್ದರಿಂದ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಕೊಂಡು ನಾಯಿಗಳ ನಿಯಂತ್ರಣ ಮಾಡಬಹುದು. ಈ ಬಗ್ಗೆ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

click me!