ವದಂತಿಗಳಿಂದ ಪೋಷಕರ ಹಿಂದೇಟು, ಗರ್ಭಕಂಠ ಕ್ಯಾನ್ಸರ್ ಲಸಿಕೆ ಎಚ್‌ಪಿವಿ ನೀಡಿಕೆಗೆ ಭಾರೀ ಹಿನ್ನೆಡೆ!

Published : May 12, 2026, 09:03 PM IST
Low HPV Vaccination Coverage in Ballari

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ನೀಡಲಾಗುತ್ತಿರುವ ಉಚಿತ ಎಚ್.ಪಿ.ವಿ. ಲಸಿಕೆ ಅಭಿಯಾನಕ್ಕೆ ಭಾರೀ ಹಿನ್ನಡೆಯಾಗಿದೆ. ವದಂತಿಗಳು ಹಾಗೂ ತಪ್ಪು ಮಾಹಿತಿಯಿಂದಾಗಿ ಪೋಷಕರು ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದು, ನಿಗದಿತ ಗುರಿ ತಲುಪಲು ಆರೋಗ್ಯ ಇಲಾಖೆ ಸವಾಲು ಎದುರಿಸುತ್ತಿದೆ.

ಬಳ್ಳಾರಿ: ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್.ಪಿ.ವಿ. (ಹ್ಯೂಮನ್ ಪ್ಯಾಪಿಲೋಮ್ ವೈರಸ್) ಲಸಿಕೆ ನೀಡಿಕೆಗೆ ಜಿಲ್ಲೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಜಿಲ್ಲೆಯ 16,495 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿಯಲ್ಲಿ ಈ ವರೆಗೆ 5,658 ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಈ ಅಭಿಯಾನ ಮಾರ್ಚ್ 11ರಿಂದ ಪ್ರಾರಂಭವಾಗಿದ್ದು, ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಎಲ್ಲಾ ಹೆಣ್ಣು ಮಕ್ಕಳು ಈ ಲಸಿಕೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಸಮಾಧಾನಕರವಾಗಿಲ್ಲ ಎಂಬುದು ಅಂಕಿ ಸಂಖ್ಯೆಗಳೇ ಬಹಿರಂಗಪಡಿಸುತ್ತವೆ.

ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಎಚ್.ಪಿ.ವಿ. ಸೋಂಕು ಕಾಲಕ್ರಮೇಣ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಇದನ್ನು ತಡೆಯಲು 14 ವರ್ಷದ ಹರೆಯದಲ್ಲೇ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ. ಪೋಷಕರು ನಾನಾ ವದಂತಿಗಳಿಗೆ ಕಿವಿಗೊಟ್ಟು ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದು ಜಿಲ್ಲೆಯ ಪ್ರಗತಿಯ ಗುರಿಗೆ ಹಿನ್ನಡೆಯಾಗಿದೆ.

ತಾಲೂಕುವಾರು ವಿವರ:

ಬಳ್ಳಾರಿ ತಾಲೂಕಿನಲ್ಲಿ 7,578 ಹೆಣ್ಣು ಮಕ್ಕಳ ಗುರಿ ಹೊಂದಲಾಗಿದ್ದು, ಇದು ವರೆಗೆ 2,324 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಅದರಂತೆ, ಸಂಡೂರು ತಾಲೂಕಿನಲ್ಲಿ 2,840 ಮಕ್ಕಳಲ್ಲಿ 881 ಮಕ್ಕಳಿಗೆ ಹಾಕಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ 3,054 ಮಕ್ಕಳಲ್ಲಿ 1,453 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ 1,543 ಮಕ್ಕಳಲ್ಲಿ 630 ಮಂದಿಗೆ ಲಸಿಕೆ ನೀಡಲಾಗಿದೆ ಹಾಗೂ ಕಂಪ್ಲಿ ತಾಲೂಕಿನ 1,480 ಹೆಣ್ಣು ಮಕ್ಕಳಲ್ಲಿ 370 ಹೆಣ್ಣು ಲಸಿಕೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಮಹತ್ವದ ಯೋಜನೆಯಿಂದ ಮಹಿಳೆಯರು ದೂರು ಉಳಿಯುತ್ತಿರುವುದು ಕಂಡು ಬಂದಿದ್ದು, ಇದು ಗುರಿಮುಟ್ಟುವ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕ್ಯಾನ್ಸರ್ ಮುಕ್ತ ನಾಳೆಗಾಗಿ ಹೆಣ್ಣು ಮಕ್ಕಳಿಗೆ ಲಸಿಕೆಯು ಸುರಕ್ಷಾ ಕವಚವಾಗಿದ್ದು, ಪೋಷಕರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮನವಿ ಮಾಡಿದ್ದಾರೆ.

ವದಂತಿಗಳಿಂದಾಗಿ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಇದುವರೆಗೆ ಲಸಿಕೆ ಪಡೆದವರಲ್ಲಿ ಯಾರಲ್ಲೂ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹೀಗಾಗಿ ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತಾಗಬೇಕು.

ಡಾ.ಹನುಮಂತಪ್ಪ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ, ಬಳ್ಳಾರಿ ಜಿಲ್ಲೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಖಾಕಿ ಭರ್ಜರಿ ಶಿಕಾರಿ: ಮನೆಗಳ್ಳರು, ಡ್ರಗ್ ಪೆಡ್ಲರ್ಸ್ ಸೇರಿ 10 ಮಂದಿಯ ಬಂಧನ
ವರ್ಕ್ ಫ್ರಮ್ ಹೋಂ ಮಾಡಲು ಪಿಎಂ ಮೋದಿ ಸಲಹೆ, ದೇಶದ ಐಟಿ ಹಬ್ ಬೆಂಗಳೂರಿನ ಪ್ರತಿಕ್ರಿಯೆ ಏನು?