ರಾಜ್ಯದ ಗಡಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಅಗತ್ಯ: ಡಿಸಿಎಂ ಕಾರಜೋಳ

By Kannadaprabha NewsFirst Published Jun 10, 2021, 2:43 PM IST
Highlights

* ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತರುವೆ
* ನಾಯಕತ್ವ ಬದಲಾವಣೆ ಮಾಡುವ ಅಧಿಕಾರ ಇರುವುದು ಹೈಕಮಾಂಡ್‌ಗೆ ಮಾತ್ರ
* ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ಪ್ರಶ್ನೆಯೇ ಉದ್ಭವಿಸಿಲ್ಲ
 

ಬೆಳಗಾವಿ(ಜೂ.10): ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂಧ್ರ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳಿ ಹೇಳಿದ್ದಾರೆ. 

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಗಡಿ ಜಿಲ್ಲೆಗಳ ಪರಿಸ್ಥಿತಿ ಕುರಿತು ಗುರುವಾರ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. 

ಸಿಎಂ ಮಹತ್ವದ ಸಭೆ: 5 ಹಂತದಲ್ಲಿ ರಾಜ್ಯ ಅನ್‌ಲಾಕ್‌ ಸಾಧ್ಯತೆ!

ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವು ಮಾಡಿದರೆ ನಮ್ಮ ಜಿಲ್ಲೆಯ ಗಡಿ ಭಾಗದಲ್ಲಿರುವ ಜನರು ಹೆಚ್ಚಾಗಿ ನೆರೆಯ ರಾಜ್ಯಗಳಿಗೆ ಹೋಗುತ್ತಾರೆ. ಇದರಿಂದ ಸೋಂಕಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಇವೆಲ್ಲದರ ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಅಗತ್ಯವಿದೆ. ಅಲ್ಲದೆ, ವೈದ್ಯರ ತಂಡ, ಅಧಿಕಾರಿಗಳ ತಂಡ ನೀಡುವ ಅಂತಿಮ ಮಾಹಿತಿ ಆಧಾರದ ಮೇಲಿಂದ ಲಾಕ್‌ಡೌನ್‌ ವಿಸ್ತರಣೆಯನ್ನು ನಿರ್ಧರಿಸಲಾಗುತ್ತದೆ ಎಂದರು.

ಮುಂದಿನ ಪೂರ್ಣ ಅವಧಿಯವರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ಆಡಳಿತ ನಡೆಸುತ್ತಾರೆ. ನಾಯಕತ್ವ ಬದಲಾವಣೆ ಮಾಡುವ ಅಧಿಕಾರ ಇರುವುದು ಹೈಕಮಾಂಡ್‌ಗೆ ಮಾತ್ರ. ಆದರೆ, ಸದ್ಯ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಯೂ ಹೈಕಮಾಂಡ್‌ ಮುಂದೆ ಇಲ್ಲ. ಪರ್ಯಾಯ ನಾಯಕತ್ವದ ಪ್ರಶ್ನೆಯೇ ಉದ್ಭವಿಸಿಲ್ಲ ಎಂದ ಅವರು, ಕೊರೋನಾದಂತಹ ಪರಿಸ್ಥಿತಿಯಲ್ಲಿಯೂ ಮುಖ್ಯಮಂತ್ರಿಗಳು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಹಾದಿ ಬೀದಿಯಲ್ಲಿ ಮಾತನಾಡುವವರಿಂದ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
 

click me!