ದ.ಕ., ಉಡುಪಿ: ಮಳೆ ಕಡಿಮೆ, ಇಂದು ಆರೆಂಜ್‌ ಅಲರ್ಟ್

By Kannadaprabha NewsFirst Published Jul 18, 2022, 9:08 AM IST
Highlights

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿವಿಪರೀತ ಮಳೆ ಸುರಿದ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಆತಂಕದಲ್ಲೇ ಕಾಲಕಳೆಯುತ್ತಿದ್ದರು, ಇದೀಗ ಮಳೆ ಪ್ರಮಾಣ ಕಡಿಮೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಿರುವುದರಿಂದ ತುಸು ನಿರಾಳವಾಗಿದೆ

ಮಂಗಳೂರು/ಉಡುಪಿ(ಜು.18): ದ.ಕ.ಜಿಲ್ಲೆಯಲ್ಲಿ ಭಾನುವಾರ ಯೆಲ್ಲೋ ಅಲರ್ಚ್‌ ಇದ್ದು, ಮಳೆ ಕಡಿಮೆಯಾಗಿದೆ. ಹಗಲು ಹೊತ್ತು ಅಲ್ಲಲ್ಲಿ ತುಂತುರು, ಸಾಧಾರಣ ಮಳೆಯಾಗಿದೆ. ಉಳಿದಂತೆ ಮೋಡ, ಬಿಸಿಲು ಕಾಣಿಸಿದೆ. ಇಡೀ ದಿನದಲ್ಲಿ ಗ್ರಾಮೀಣ ಭಾಗದ ಅಲ್ಲಲ್ಲಿ ತುಸು ಮಳೆ ಕಾಣಿಸಿದೆ. ಅಪರಾಹ್ನ ಮಂಗಳೂರಿನಲ್ಲಿ ಮೋಡದ ವಾತಾವರಣ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜು.18ರಂದು ಕರಾವಳಿಯಲ್ಲಿ ಆರೆಂಜ್‌ ಅಲರ್ಚ್‌ ಘೋಷಿಸಲಾಗಿದ್ದು, ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಮೂಡುಬಿದಿರೆ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ(Dakshina kannada) ಭಾನುವಾರ ಬೆಳಗ್ಗಿನ ವರೆಗೆ ಮೂಡುಬಿದಿರೆಯಲ್ಲಿ ಗರಿಷ್ಠ 99.2 ಮಿಲಿ ಮೀಟರ್‌ ಮಳೆ(Rain) ದಾಖಲಾಗಿದೆ. ಬೆಳ್ತಂಗಡಿ(Beltangadi) 84.5 ಮಿ.ಮೀ, ಬಂಟ್ವಾಳ 52.7 ಮಿ.ಮೀ, ಮಂಗಳೂರು(Mangaluru) 40.4 ಮಿ.ಮೀ, ಪುತ್ತೂರು 65.3 ಮಿ.ಮೀ, ಸುಳ್ಯ 78.9 ಮಿ.ಮೀ, ಕಡಬ 68.4 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 71 ಮಿ.ಮೀ. ದಾಖಲಾಗಿದೆ.

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.8 ಮೀಟರ್‌, ಬಂಟ್ವಾಳದಲ್ಲಿ ನೇತ್ರಾವತಿ ನದಿ 6.2 ಮೀಟರ್‌, ಗುಂಡ್ಯ ಹೊಳೆ 4.2 ಮೀಟರ್‌ನಲ್ಲಿ ಹರಿಯುತ್ತಿದೆ. ಇದನ್ನೂ ಓದಿ:  ಆದೇಶ ಪರಿಷ್ಕರಿಸಿದ ಡಿಸಿ, ಶಿರಾಡಿಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ!

ಭಾರಿ ಮಳೆಗೆ ದ.ಕ.ದಲ್ಲಿ ಒಟ್ಟು 8 ಮನೆಗಳು ಹಾನಿಗೀಡಾಗಿದ್ದು, ಇದರಲ್ಲಿ ಒಂದು ಮನೆ ಪೂರ್ತಿ ನಾಶ, 7 ಮನೆ ಭಾಗಶಃ ಹಾನಿಗೀಡಾಗಿದೆ. ಮೂಲ್ಕಿಯಲ್ಲಿ ಮನೆ ಪೂರ್ತಿ ನಾಶವಾಗಿದ್ದು, ಕಡಬ, ಮೂಲ್ಕಿ ತಲಾ 1, ಸುಳ್ಯದಲ್ಲಿ 5 ಮನೆಗಳು ಭಾಗಶಃ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡದ ವಾತಾವರಣವಿದ್ದರೂ ಆಗಾಗ್ಗೆ ಲಘುವಾದ ಮಳೆಯಷ್ಟೇ ಸುರಿದಿದೆ. ಹವಾಮಾನ ಇಲಾಖೆ ಜುಲೈ 18ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಆರೆಂಜ್‌ ಅಲರ್ಚ್‌ ಘೋಷಿಸಿದೆ. ಶನಿವಾರ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 90 ಮಿ.ಮೀ.ನಷ್ಟುಉತ್ತಮ ಮಳೆಯಾಗಿದ್ದು, ಜಿಲ್ಲೆಯಲ್ಲಿ 39 ಮನೆಗಳಿಗೆ ಹಾನಿಯಾಗಿದೆ. ಒಟ್ಟು 10.39 ಲಕ್ಷ ರು. ನಷ್ಟಅಂದಾಜಿಸಲಾಗಿದೆ.

 3 ಮನೆ ಸಂಪೂರ್ಣ ನಷ್ಟ: ಕಾಪು ತಾಲೂಕಿನ ಎಲ್ಲೂರು ಗ್ರಾಮದ ಪ್ರಭಾಕರ ಆಚಾರ್ಯ ಅವರ ಮನೆಗೆ ಸಂಪೂರ್ಣ ಹಾನಿಯಾಗಿ 2,00,000 ರು., ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ನರಸಿಂಹ ಜಟ್ಟಅವರ ಪಕ್ಕಾ ಮನೆ ಸಂಪೂರ್ಣ ಹಾನಿಗೊಂಡು 1,00,000 ರು., ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಚಿಕ್ಕು ಅವರ ಮನೆಗೆ ಲಂಪೂರ್ಣ ಹಾನಿಯಾಗಿ 1,20,000 ರು. ನಷ್ಟವಾಗಿದೆ. ಇದನ್ನೂ ಓದಿ: ಶಿರಾಡಿ ಬಂದ್‌: ಸಾಲುಗಟ್ಟಿ ನಿಂತ ಸರಕು ವಾಹನಗಳು

ಕುಂದಾಪುರ ತಾಲೂಕಿನ 26 ಮನೆಗಳಿಗೆ 4.99 ಲಕ್ಷ ರು., ಕಾಪು ತಾಲೂಕಿನ 4 ಮನೆಗಳಿಗೆ 2.90 ಲಕ್ಷ ರು., ಬೈಂದೂರು ತಾಲೂಕಿನ 5 ಮನೆಗಳಿಗೆ 1.50 ಲಕ್ಷ ರು., ಬ್ರಹ್ಮಾವರ ತಾಲೂಕಿನ 3 ಮನೆಗಳಿಗೆ 50 ಸಾವಿರ ರು. ಮತ್ತು ಕಾರ್ಕಳ ತಾಲೂಕಿನ 1 ಮನೆಗೆ 50 ಸಾವಿರ ರು. ನಷ್ಟಉಂಟಾಗಿದೆ.

ಶನಿವಾರ ಮುಂಜಾನೆಯಿಂದ ಭಾನುವಾರ ಮುಂಜಾನೆ ವರೆಗೆ ಜಿಲ್ಲೆಯಲ್ಲಿ ಸರಾಸರಿ 90 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಉಡುಪಿ 77, ಬ್ರಹ್ಮಾವರ 73.40, ಕಾಪು 94.30, ಕುಂದಾಪುರ 71.20, ಬೈಂದೂರು 100.10, ಕಾರ್ಕಳ 105.60, ಹೆಬ್ರಿ 107.70 ಮಿ.ಮೀ. ಮಳೆ ದಾಖಲಾಗಿದೆ.

click me!