
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಗೆ ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಹೆದ್ದಾರಿ ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದು ತೀವ್ರ ನೋವಿನಿಂದ ಚಡಪಡಿಸುತ್ತಿರುವ ಚಿರತೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸ್ಥಳಾಂತರಕ್ಕೆ ಕ್ರಮಕೈಗೊಂಡಿದ್ದರು.
ಗಾಯಗೊಂಡಿದ್ದ ಚಿರತೆ ಅರವಳಿಕೆ ನೀಡಿ ಸ್ಥಳಾಂತರ ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದು, ಆದರೆ ಅರವಳಿಕೆ ನೀಡಿದ ಸಂದರ್ಭದಲ್ಲಿ ಮತ್ತಷ್ಟು ವ್ಯಾಘ್ರವಾಗಿ ರಕ್ಷಣೆಗೆ ಬಂದ ಅರಣ್ಯ ಸಿಬ್ಬಂದಿ ಮೇಲೆಯೇ ದಾಳಿ ಮಾಡಲು ಮುಂದಾಗಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಚಿರತೆಯ ಹಿಂದಿನ ಕಾಲಿಗೆ ಗಂಭೀರ ಗಾಯವಾಗಿರುವ ಪರಿಣಾಮ, ಕೆಲ ಸಮಯದಲ್ಲೇ ರಸ್ತೆಪಕ್ಕ ಬಂದು ಕುಳಿತುಕೊಂಡಿತ್ತು.
ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡು ನರಳುತ್ತಿದ್ದ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ. ಚಿರತೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಹಂಪಿ ಬಳಿಯ ಕಮಲಾಪುರ ಝೂಲಾಜಿಕಲ್ ಪಾರ್ಕ್ ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯರಾತ್ರಿ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಗಾಯಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಚಿರತೆ ರಕ್ಷಣಾ ಕಾರ್ಯ ನಡೆಸಿದ್ದಾರೆ. ಹೊಸಪೇಟೆಯಿಂದ ಆಗಮಿಸಿದ ಅರವಳಿಕೆ ತಜ್ಞರು ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ.
ಇನ್ನು, ಘಟನೆಯಲ್ಲಿ ಅರಣ್ಯ ಇಲಾಖೆ ವಾಚರ್ ಮರುಳಸಿದ್ದಪ್ಪ ಮೇಲೆ ಚಿರತೆ ದಾಳಿ ಮಾಡಿದ್ದು, ಅದೃಷ್ಟವಶಾತ್ ವಾಚರ್ ಮರುಳಸಿದ್ದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಚರ್ ಮರುಳಸಿದ್ದಪ್ಪ ಕೈ, ಭುಜಕ್ಕೆ ಚಿರತೆ ಕಚ್ಚಿದ್ದು, ಅವರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಸಿಎಫ್ ಆನಂದ ಅವರು ಆಸ್ಪತ್ರೆಗೆ ಭೇಟಿ ನೀಡಿ ಮರುಳಸಿದ್ದಪ್ಪ ಆರೋಗ್ಯ ವಿಚಾರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಭಾಗ, ತರೀಕೆರೆ ವಲಯದ ಹುಣಸಘಟ್ಟ ವ್ಯಾಪ್ತಿಯ ಅರಣ್ಯದಲ್ಲಿ ಮುಳ್ಳು ಹಂದಿ ಬೇಟೆಗಾರರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧನ ಮಾಡಿದ್ದಾರೆ. ಮೂರು ಮುಳ್ಳು ಹಂದಿಗಳನ್ನು ಬೇಟೆಯಾಡಿದ ಆರೋಪ ಮೇರೆಗೆ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದು, ಸಾವೆಮರಡಿ ಕಾವಲ್ ಗ್ರಾಮದ ಸುರೇಶ್ ಎಂಬುವರ ಕೊಟ್ಟಿಗೆಯಲ್ಲಿ ಹಂದಿಗಳ ಕಳೇಬರಗಳು ಪತ್ತೆಯಾಗಿದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ , ಸುರೇಶ್, ಸಂತೋಷ್, ಅಭಿ ಎಂಬುವರ ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಆರೋಪಿ ಶಂಕರ್ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ಕೆ.ಉಮೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಲಾಗಿದೆ.