ಸಿದ್ದಗಂಗಾ ಮಠದ ಗೋಶಾಲೆಗೆ ಚಿರತೆ ದಾಳಿ ನಡೆಸಿದ್ದು, ಹಸು ಕರುಗಳಿಗೆ ಗಾಯವಾಗಿದೆ.
ತುಮಕೂರು (ಸೆ.04): ಸಿದ್ಧಗಂಗಾ ಮಠದ ಆವರಣದಲ್ಲಿರುವ ಗೋಶಾಲೆಗೆ ನುಗ್ಗಿದ್ದ ಒಂದು ಚಿರತೆಯೊಂದು ಎಮ್ಮೆ ಹಾಗೂ ಕರುವನ್ನು ಕೊಂದು ತಿಂದು ಮತ್ತೊಂದು ಹಸುವಿಗೆ ಗಾಯಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈಗಾಗಲೇ ಚಿರತೆದಾಳಿಗೆ ಐವರು ಮೃತಪಟ್ಟಿರುವ ತುಮಕೂರು ಜಿಲ್ಲೆಯಲ್ಲಿ ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬೆಟ್ಟದ ಕೆಳಗೆ ಚಿರತೆ ಸೆರೆಗೆ ಬೋನನ್ನು ಇಡಲಾಗಿದೆ. ಬುಧವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮಠದ ಹಿಂಭಾಗದಲ್ಲಿರುವ ಬೆಟ್ಟದಿಂದ ಬಂದಿರುವ ಚಿರತೆ ಗೋಶಾಲೆಗೆ ನುಗ್ಗಿ ಎಮ್ಮೆ, ಕರುವನ್ನು ತಿಂದು ಮತ್ತೊಂದು ಹಸುವನ್ನು ಗಾಯಗೊಳಿಸಿದೆ. ಗುರುವಾರ ಬೆಳಿಗ್ಗೆ ಖುದ್ದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ.
ಈ ವೇಳೆಗೆ ಹಸು, ಕರುವಿನ ಚೀರಾಟ ಕೇಳಿ ಮಠದ ಸಿಬ್ಬಂದಿಯೊಬ್ಬರು ಗೋಶಾಲೆ ಬಳಿ ಬಂದಿದ್ದಾರೆ. ಜೋರು ಮಳೆ ಹಾಗೂ ಕತ್ತಲು ಇದ್ದುದ್ದರಿಂದ ವಾಪಸ್ ಹೋಗಿದ್ದಾರೆ.
ಬೆಳ್ಳಂಬೆಳಗ್ಗೆ ಮಠದ ಇತರೆ ಸಿಬ್ಬಂದಿ ಗೋಶಾಲೆಗೆ ಹೋಗಿ ನೋಡಿದಾಗ ಹಸು, ಕರು ಸತ್ತು ಬಿದ್ದಿದ್ದವು. ಗುರುವಾರ ಬೆಳಿಗ್ಗೆ ಖುದ್ದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಗೋಶಾಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಹಸುಗಳಿವೆ. ಸಿದ್ಧಗಂಗಾ ಮಠದ ಹಿಂಭಾಗದಲ್ಲಿರುವ ಬೆಟ್ಟದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದರು.