ಕೈ ಕೊಟ್ಟಮಳೆ, ನಗರಗಳತ್ತ ಗುಳೆ ಹೊರಟ ನರಗುಂದ ಯುವಕರು!

By Kannadaprabha NewsFirst Published Jun 29, 2023, 6:59 AM IST
Highlights

 ಪ್ರಸಕ್ತ ವರ್ಷ ಮುಂಗಾರು ಮಳೆಗಳು ಕೈ ಕೊಟ್ಟದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಯುವಕರು ಗುಳೆ ಹೊರಟಿದ್ದಾರೆ.

ನರಗುಂದ (ಜೂ.29) ಪ್ರಸಕ್ತ ವರ್ಷ ಮುಂಗಾರು ಮಳೆಗಳು ಕೈ ಕೊಟ್ಟದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಯುವಕರು ಗುಳೆ ಹೊರಟಿದ್ದಾರೆ.

ವಾಡಿಕೆಯಂತೆ ಮೇ ತಿಂಗಳಲ್ಲಿ ಮಳೆಯಾಗುತ್ತಿತ್ತು, ಜೂನ್‌ ಮೊದಲ ವಾರ ಮುಂಗಾರು ಆರಂಭವಾಗುತ್ತಿತ್ತು. ಈ ಸಮಯದಲ್ಲಿ ರೈತ ಸಮುದಾಯ ಜಮೀನಿನಲ್ಲಿ ಉಳಮೆ ಮಾಡಿ ಆನಂತರ ಬಿತ್ತನೆ ಮಾಡುತ್ತಿದ್ದರು. ಆದರೆ ಈ ವರ್ಷ ಜೂನ್‌ ಮುಗಿಯುತ್ತ ಬಂದರೂ ಮಳೆಯಾಗಿಲ್ಲ. ಎಲ್ಲೆಡೆ ಬರದ ಛಾಯೆ ಆವರಿಸಿದೆ. ರೈತರ ಜಮೀನಿನಲ್ಲಿ ಬಿತ್ತನೆಯಾಗಿಲ್ಲ. ಹಾಗಾಗಿ ರೈತ ಯುವಕರು ಮತ್ತು ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಗೋವಾ, ಬೆಂಗಳೂರು, ಉಡುಪಿ, ಮಂಗಳೂರು ಮತ್ತಿತರ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಕೊಪ್ಪಳ: ಕೈಕೊಟ್ಟಮಳೆ, ನಗರಗಳತ್ತ ಗುಳೆ ಹೊರಟ ರೈತರು!

ನರೇಗಾ ಯೋಜನೆಯಡಿ ಸಮರ್ಪಕ ಉದ್ಯೋಗ ನೀಡಿದರೆ ಗುಳೆ ಹೋಗುವುದು ತಪ್ಪುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಕುರಿತು ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಸದ್ಯ ರೈತರು ಜಮೀನಗಳ​ಲ್ಲಿ ಬಿತ್ತನೆ ಮಾಡಿದ್ದಾರೆ. ಕೆಲವು ರೈತರು ಬಿತ್ತನೆ ಮಾಡಲು ಜಮೀನು ಸಜ್ಜು ಮಾಡಿಕೊಂಡಿದ್ದರಿಂದ ಯಾವ ರೈತರೂ ಬದು ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಈ ನರೇಗಾ ಯೋಜನೆಯಲ್ಲಿ ನೀರಾವರಿ ಕಾಲುವೆ ಮತ್ತು ರೈತರ ಜಮೀನಗಳಿಗೆ ಹೊಂದಿರುವ ಹಳ್ಳ-ಕೊಳ್ಳಗಳ ಹೂಳು ಎತ್ತಲು ಅನುಕೂಲವಿದ್ದರೂ ಅಧಿಕಾರಿಗಳು ಈ ಕೆಲಸ ಮಾಡಿಸುತ್ತಿಲ್ಲ ಎಂದು ಚನ್ನಪ್ಪ ನರಸಾಪುರ ಆರೋಪ ಮಾಡಿದರು. ಮಳೆ ಆಗದೆ ಜಮೀನನಲ್ಲಿ ಕೆಲಸವಿಲ್ಲ. ಗ್ರಾಪಂನವರು ಸರಿಯಾಗಿ ಉದ್ಯೋಗ ನೀಡದ್ದರಿಂದ ನಾವು ಗುಳೆ ಹೊರಟಿದ್ದೇವೆ ಎಂದು ರಡ್ಡೇರನಾಗನೂರ ಗ್ರಾಮದ ಯುವಕ ಶಿದ್ದಪ್ಪ ಹಾದಿಮನಿ ಹೇಳಿದರು.

 

ಲಿಂಗಸುಗೂರು: ಗುಳೆ ಜನರ ಮೊಗ​ದಲ್ಲಿ ಕಳೆ ತಂದ ಖಾತ್ರಿ

ನರೇಗಾ ಯೋಜನೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಾವು ಜನರಿಗೆ ಕೆಲಸ ನೀಡಿದ್ದೇವೆ. ಬರ ಮುಂದುವರಿದರೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚುವರಿಯಾಗಿ ಮಾನವ ದಿನಗಳನ್ನು ನೀಡುತ್ತೇವೆ.

ಮಂಜುಳಾ ಹಕಾರಿ, ತಾಪಂ ಅಧಿಕಾರಿ

click me!