ಗಂಗಾವತಿ ನಗರಸಭೆ ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್‌ ಇಲ್ವಂತೆ..!

By Kannadaprabha NewsFirst Published May 17, 2020, 8:53 AM IST
Highlights

ಇಂಧನ ತುಂಬಿಸಿ ಕಸ ವಿಲೇ​ವಾರಿ ಮಾಡಲು ಕಾರ್ಮಿಕ ಮುಖಂಡ ಜೆ. ಭಾರದ್ವಾಜ್‌ ಆಗ್ರ​ಹ| ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಡೀಸೆ​ಲ್‌ ಕೊಡದೇ ಇರುವುದರಿಂದ ಕಸ ತುಂಬಿದ ಗಾಡಿಗಳು ಮೂರು ದಿನಗಳ ಕಾಲ ನಗರದ ಗುಂಡಮ್ಮಕ್ಯಾಂಪಿನ ಸಿಟಿ ಮಾರ್ಕೆಟ್‌ನಲ್ಲಿ ನಿಂತಿವೆ| ಕೆಲಸದ ಅವಧಿ ಮುಗಿದರೂ ಚಾಲಕರು ವಾಹನಗಳನ್ನು ಕಾಯುತ್ತಾ, ರಾತ್ರಿ-ಹಗಲು ಸೇವೆ ಮಾಡುತ್ತಿದ್ದಾರೆ|

ಗಂಗಾವತಿ(ಮೇ.17):  ನಗರಸಭೆಯ ವಾಹನಗಳಿಗೆ ಡೀಸೆ​ಲ್‌ ಕೊರತೆಯಿಂದಾಗಿ ಕಸ ವಿಲೇವಾರಿ ಮಾಡುವ ವಾಹನಗಳು ನಿಂತ ಸ್ಥಳದಲ್ಲಿ ನಿಂತಿವೆ ಎಂದು ಕಾರ್ಮಿಕ ಮುಖಂಡ ಜೆ. ಭಾರದ್ವಾಜ್‌ ಅರೋಪಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಡೀಸೆ​ಲ್‌ ಕೊಡದೇ ಇರುವುದರಿಂದ ಕಸ ತುಂಬಿದ ಗಾಡಿಗಳು ಮೂರು ದಿನಗಳ ಕಾಲ ನಗರದ ಗುಂಡಮ್ಮಕ್ಯಾಂಪಿನ ಸಿಟಿ ಮಾರ್ಕೆಟ್‌ನಲ್ಲಿ ನಿಂತಿವೆ. ಕೆಲಸದ ಅವಧಿ ಮುಗಿದರೂ ಚಾಲಕರು ವಾಹನಗಳನ್ನು ಕಾಯುತ್ತಾ, ರಾತ್ರಿ-ಹಗಲು ಸೇವೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಕೊರೋನಾ ಕಂಟಕದಿಂದ ಮತ್ತೆ ಕೊಪ್ಪಳ ಪಾರು: ನಿಟ್ಟುಸಿರು ಬಿಟ್ಟ ಜನತೆ..!

ಕೊರೋನಾ ಬಂದಾಗಿನಿಂದ ಊರು ಸ್ವಚ್ಛಗೊಳಿಸಲಾಗದೇ ಗಬ್ಬು ನಾರುತ್ತಿದೆ. ಇದರ ಬಗ್ಗೆ ನಗರಸಭೆಯ ಆಡಳಿತ ವರ್ಗ ಕಾಳಜಿವಹಿಸುತ್ತಿಲ್ಲ. ಟ್ರ್ಯಾಕ್ಟರುಗಳು ಕಳೆದ 5-6 ತಿಂಗಳಿನಿಂದ ದುರಸ್ತಿಗೆ ನಿಂತಿವೆ. ಕಸ ಸಾಗಿಸುವ ಮೂರು ವಾಹನಗಳಿದ್ದು, ಒಂದು ವಾಹನ ಎರಡು ವರ್ಷದ ಕೆಳಗೆ ದುರಸ್ತಿಗೆ ಬಂದು ನಿಂತಿದೆ. ಇನ್ನೊಂದು ಕಂಪ್ಯಾಕ್ಟರ್‌ ಕಳೆದ ಎರಡು ತಿಂಗಳಿನಿಂದ ದುರಸ್ತಿಯಾಗದೆ ನಿಂತಿದೆ. ಒಂದು ಕಂಪ್ಯಾಕ್ಟರ್‌ ಚಾಲನೆಯಲ್ಲಿದ್ದು, ಅದಕ್ಕೂ ಡೀ​ಸೆ​ಲ್‌ ವ್ಯವಸ್ಥೆ ಇಲ್ಲ. ಇದರಿಂದಾಗಿ 10-12 ಟಾಟಾ ಏಸ್‌ ಗಾಡಿಗಳು ಕಸ ತುಂಬಿಕೊಂಡು ಮಾರ್ಕೆಟ್‌ನಲ್ಲಿ ನಿಂತಿವೆ. ಇಷ್ಟೆಲ್ಲಾ ವಿಷಯಗಳು ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ.

ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗಂಗಾವತಿ ನಗರಸಭೆಯ ತ್ಯಾಜ್ಯ ಸಾಗಿಸುವ ವಾಹನಗಳ ದುರಸ್ತಿಯ ಬಗ್ಗೆ ಹಾಗೂ ಅವುಗಳಿಗೆ ಇಂಧನ ಒದಗಿಸುವ ವ್ಯವಸ್ಥೆ ಮಾಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಪರವಾಗಿ ಜೆ. ಭಾರದ್ವಾಜ್‌ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
 

click me!