'ಸಿದ್ದರಾಮಯ್ಯ, ಡಿಕೆಶಿಯಿಂದ ಕಾಂಗ್ರೆಸ್‌ ಕೊನೆ'

By Kannadaprabha NewsFirst Published Feb 28, 2021, 11:30 AM IST
Highlights

ಕಾಂಗ್ರೆಸ್ ಈಗಾಗಲೇ ಅವನತಿಗೆ ಬಂದಿದ್ದು ಈ ಇಬ್ಬರು ಸೇರಿ ಪಕ್ಷವನ್ನು ಮುಗಿಸಲಿದ್ದಾರೆ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ. 

 ಹಾಸನ (ಫೆ.28):  ಈಗಾಗಲೇ ಕಾಂಗ್ರೆಸ್‌ ಪಕ್ಷ ಬೀದಿಗೆ ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ಪಕ್ಷವನ್ನು ಮುಗಿಸಿದ್ರು, ಇದೀಗ ಇವರ ಜೊತೆಗೆ ಡಿಕೆಶಿ ಸೇರಿಕೊಂಡಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೆಸ್‌ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಎಲ್ಲವನ್ನು ನೋಡುತ್ತಿದ್ದಾರೆ. ಸಿದ್ದರಾಮಯ್ಯ ರೆಸಾರ್ಟ್‌ನಲ್ಲಿ ಕುಳಿತು ರಾಜಕೀಯ ಮಾಡಲು ಹೊರಟಿದ್ದಾರೆ. ಇಲ್ಲೆ ಗೊತ್ತಾಗುತ್ತದೆ ಅವರು ಕಾಂಗ್ರೆಸ್‌ನಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ ನಾಯಕತ್ವಕ್ಕಾಗಿ ಬೆತ್ತಲಾಗಿ ಬಿದಿಗೆ ಬಿದ್ದಿದೆ. ಇದರಲ್ಲೇ ಗೊತ್ತಾಗುತ್ತದೆ ಅವರ ಹಣೆಬರಹ ಎಂದು ವಾಗ್ದಾಳಿ ನಡೆಸಿದರು.

ಸಸ್ಪೆಂಡ್ ಮಾಡಿದ್ರೂ ಓಕೆ: ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕಾಂಗ್ರೆಸ್ ಶಾಸಕ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಪಕ್ಷವನ್ನು ಉಳಿಸಿಕೊಳ್ಳಲಿ. ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಟಾಂಗ್‌ ನೀಡಿದರು.

ಹೈಕಮಾಂಡ್‌ಗೆ ಬಿಟ್ಟದ್ದು :  ಶಾಸಕರಾದ ರೇಣುಕಾಚಾರ್ಯ ಹಾಗೂ ಯತ್ನಾಳ್‌ ಪದೇ ಪದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವುದು ತಪ್ಪು. ಯತ್ನಾಳಗೆ ಈಗಾಗಲೇ ಪಕ್ಷದಿಂದ ನೋಟಿಸ್‌ ಕೊಟ್ಟಿದ್ದಾರೆ. ಹೈಕಮಾಂಡ್‌ನವರು ಮುಂದೆ ಏನು ಮಾಡುತ್ತಾರೆ ನೋಡೊಣ. ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ನಡುವೆ ಕುಳಿತು ಮಾತನಾಡುವುದು ಒಳ್ಳೆಯದು ಎಂದರು.

click me!