‘ಯೋಗೇಶ್ವರ್‌ ತಮ್ಮ ನಿಲುವು ಸ್ಪಷ್ಟಪಡಿಸಲಿ’

By Kannadaprabha NewsFirst Published Feb 9, 2020, 10:32 AM IST
Highlights

ರಾಜ್ಯದಲ್ಲಿ ಸಚಿವಾಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಕೈ ಮುಖಂಡರೋರ್ವರು ಹೇಳಿದ್ದಾರೆ. 

ಚನ್ನಪಟ್ಟಣ[ಫೆ.09]:  20 ವರ್ಷ ಈಕ್ಷೇತ್ರವನ್ನು ಪ್ರತಿನಿಧಿಸಿ, ಇಲ್ಲಿನ ಅಲ್ಪಸಂಖ್ಯಾತ ಮಗಳಿಂದ ಗೆಲವು ಸಾಧಿಸುತ್ತಿದ್ದು ಮಾಜಿ ಸಚಿವ ಯೋಗೇಶ್ವರ್‌ ಅವರು ನಾನು ಸಂವಿಧಾನದ ಪರವಾಗಿದ್ದೀನಾ ಇಲ್ಲಾ ವಿರುದ್ಧ ಇದ್ದೇನಾ ಎಂಬುದನ್ನು ಹೇಳಬೇಕು ಎಂದು ಕೆಪಿಸಿಸಿ ವಕ್ತಾರ ಶಾ ನಿಜಾಮುದ್ದೀನ್‌ ಪೌಜ್ದಾರ್‌ ಒತ್ತಾಯಿಸಿದರು.

ನಗರದ ಡ್ಯೂಂ ಲೈಟ್‌ ವೃತ್ತದ ಪೆಟ್ಟಾಶಾಲೆ ಆವರಣದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದಾರೆ. ಆದರೆ ಕನಿಷ್ಟಒಂದು ಬಾರಿಯೂ ಮುಸ್ಲಿಮರ ಪರವಾಗಿ ಮಾತನಾಡಿಲ್ಲ. ಬಿಜೆಪಿ ಬೇರೆ, ನಾನು ನಿಮ್ಮೊಂದಿಗೆ ಇದ್ದೇನೆಂದು ಹೇಳಬಹುದಿತ್ತು. ಆದರೆ ಈವರೆಗೂ ಅವರು ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಎ ಕಾಯಿದೆಯನ್ನು ಅನುಷ್ಠಾನಗೊಳಿಸುವುದರ ಹಿಂದೆ ಬಿಜೆಪಿ ರಹಸ್ಯ ಕಾರ್ಯಸೂಚಿ ಇದೆ. ಚುನಾವಣೆ ವೇಳೆಗೆ ಮುಸ್ಲಿಂ ಸಮುದಾಯ ಅತಂತ್ರಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಅಪಾಯಕಾರಿ ರಾಜಕೀಯಕ್ಕೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಅದನ್ನು ನಾವೆಲ್ಲ ವಿರೋಧಿಸಬೇಕಿದ್ದು, ಈ ಕಾಯಿದೆಯನ್ನು ಹಿಂದಕ್ಕೆ ಪಡೆಯುವವರೆಗೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂವಿಧಾನ ಬದಲಿಸುವ ತಂತ್ರ:

ಸಭೆಯನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಐಎಎಸ್‌ ಅಧಿಕಾರಿ ಜಮೀರ್‌ ಪಾಷಾ, ಮೂರು ಪಿಎಚ್‌ಡಿ ಪಡೆದು ಕಾನೂನು ಮತ್ತು ರಾಜ್ಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಡಾ. ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಈ ದೇಶ ಮತ್ತು ಇಲ್ಲಿನ ಕಾನೂನಿನ ಬಗ್ಗೆ ಸ್ಪಲ್ಪವೂ ಅರಿವಿಲ್ಲದ ಈ ಮಂದಿ ಸಂವಿಧಾನ ತಿದ್ದಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ.

ಅಸ್ಸಾಂಗೆ ಮಾತ್ರ ಎಂದಿದ್ದ ಎನ್‌ಸಿಆರ್‌ ಅನ್ನು ಇದೀಗ ಅಮಿತ್‌ ಶಾ ಇಡೀ ದೇಶಕ್ಕೆ ಅಳವಡಿಸಲು ಮುಂದಾಗಿದ್ದಾರೆ. ಈ ಕಾಯಿದೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಬಾಹ್ಮಣರಿಂದ ದಲಿತರವರೆಗೆ ದೇಶದ ಎಲ್ಲಾ ಸಮುದಾಯಕ್ಕೂ ಅಪಾಯಕಾರಿ. ಇದು ಧರ್ಮ ಮತ್ತು ರಾಜಕೀಯ ಪಕ್ಷದ ಸಮಸ್ಯೆಯಲ್ಲಿ ಇದರ ಹಿಂದಿರುವ ಹುನ್ನಾರಗಳನ್ನು ನಮ್ಮ ಜನತೆ ಸೂಕ್ಷ ್ಮವಾಗಿ ಅರ್ಥೈಸಿಕೊಳ್ಳಬೇಕು ಎಂದು ಎಚ್ಚರಿಸಿದರು.

ಎನ್‌ಆರ್‌ಸಿ ಜಾರಿಗೆ ಹಠ ಯಾಕೆ:

ವ್ಯಾಪಕ ವಿರೋಧದ ನಡುವೆ ಕೇಂದ್ರ ಸರ್ಕಾರ ಎನ್‌ಆರ್‌ಸಿಯನ್ನು ಜಾರಿಗೆ ತರಲೇಬೇಕೆಂದು ಹಠ ಹಿಡಿದಿರುವುದು ಯಾಕೆ? ಇಂತಹ ಮಾನವ ವಿರೋಧಿ ಕಾಯಿದೆಯನ್ನು ತಕ್ಷಣ ರದ್ದುಪಡಿಸ ಬೇಕು. ಈ ದೇಶದ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ರಾಜ್ಯ ಸಭಾ ಸದಸ್ಯ ನಾಸೀರ್‌ ಹುಸೇನ್‌ ಸಭೆಯಲ್ಲಿ ಆಗ್ರಹಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗಿಳಿಯುತ್ತಿದೆ. ಇದೆಲ್ಲವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಸಿಎಎ ವಿಚಾರವನ್ನು ಮುಂದುಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ವ್ಯಾಪಕ ಭದ್ರತಾ ವ್ಯವಸ್ಥೆಯ ನಡುವೆ ಹೊರ ದೇಶದವರು ನಮ್ಮ ದೇಶಕ್ಕೆ ನುಸುಳುತ್ತಿದ್ದಾರೆ ಎಂದರೆ ಅದು ಯಾರ ವೈಫಲ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ದೇಶಕ್ಕೆ ಬೇಕಿರುವುದು ಧರ್ಮವಲ್ಲ, ಸಂವಿಧಾನ:

ಸಭೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾಯದರ್ಶಿ ಆಲ್‌ಫಾನ್ಸ್‌ ಪ್ರಾಂಕೋ, ಎಲ್ಲರಿಗೂ ಅವರ ಧರ್ಮ ದೊಡ್ಡದು. ಆದರೆ, ದೇಶಕ್ಕೆ ಬೇಕಿರುವುದು ಧರ್ಮವಲ್ಲ, ಸಂವಿಧಾನ. ಇದನ್ನು ಬಿಜೆಪಿ ಅರಿತುಕೊಂಡು, ಸಂವಿಧಾನವನ್ನು ಉಳಿಸುವ ಕೆಲಸವನ್ನು ಅಧಿಕಾರದಲ್ಲಿ ಕುಳಿತು ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.

ಪ್ರಮೋದ್‌ ಮುತಾಲಿಕ್‌, ಕಲ್ಲಡ್ಕ ಪ್ರಭಾಕರ್‌ ಭಟ್‌ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ದ್ವೇಷಿಗಳು. ಅವರಿಗೆ ಕ್ರೈಸ್ತರ ದುಡ್ಡು ಆಗುತ್ತ​ದೆ, ​ಕ್ರೈಸ್ತರನ್ನು ಕಂಡರೆ ಆಗುವುದಿಲ್ಲ. ಬಿಜೆಪಿ ಚುನಾವಣೆಯಲ್ಲಿ ಗೆದ್ದಿರುವುದೇ ಇವಿಎಂನಿಂದ ನಿಜವಾದ ಜನಾದೇಶದಿಂದದಲ್ಲ ಎಂದು ಆರೋಪಿಸಿದರು.

click me!