ಬಿಜೆಪಿ ಸರ್ಕಾರದಿಂದ ‘ಅನ್ನ ಭಾಗ್ಯ’ಕ್ಕೆ ಕತ್ತರಿ

By Kannadaprabha NewsFirst Published Feb 28, 2021, 12:46 PM IST
Highlights

ರಾಜ್ಯದ ಬಡ ಜನತೆಗೆ ನೀಡುವ ಅನ್ನಭಾಗ್ಯಕ್ಕೆ ಕತ್ತರಿ ಹಾಕಲಾಗಿದೆ. ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರದಿಂದ ಪಡಿತರ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ಚಾಮರಾಜನಗರ (ಫೆ.28):  ಕಾಂಗ್ರೆಸ್‌ ಪಕ್ಷಕ್ಕೂ ವಿದ್ಯಾರ್ಥಿಗಳಿಗೂ ಸಂಬಂಧವೇ ಇಲ್ಲವಾಗಿದ್ದು, ಕೇರಳದಲ್ಲಿರುವ ರಾಜ್ಯದಲ್ಲಿರುವಂತೆ ನಮ್ಮಲ್ಲೂ ವಿದ್ಯಾರ್ಥಿ ಹಂತದಿಂದಲೇ ಕಾಂಗ್ರೆಸ್‌ ಪಕ್ಷ ಬಲಪಡಿಸುವ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹೇಳಿದರು.

ನಗರದ ಶಿವಕುಮಾರಸ್ವಾಮಿ ಭವನ ಅವರಣದಲ್ಲಿ  ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಿಂದಲೇ ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ನಾಯಕರ ಕೊಡುಗೆ ಕುರಿತು ಯುವಕರಲ್ಲಿ ಮನವರಿಕೆ ಮಾಡಿಕೊಟ್ಟು ವಿದ್ಯಾರ್ಥಿ ಕಾಂಗ್ರೆಸ್‌ ಸಂಘಟನೆ ಬಲಗೊಳಿಸಲು ಕಾರ್ಯಸೂಚಿ ಮಾಡಲಾಗುತ್ತಿದೆ ಎಂದರು.

'ಸಿದ್ದರಾಮಯ್ಯ, ಡಿಕೆಶಿಯಿಂದ ಕಾಂಗ್ರೆಸ್‌ ಕೊನೆ' ...

ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್‌ ಪಕ್ಷದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ. ಕಳೆದ 50 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಪಕ್ಷ ನೀಡಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಇಂದಿನ ಯುವ ಪೀಳಿಗೆಗೆ ನಾವು ತಿಳಿಸುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ ಪಕ್ಷದ ಗೆಲುವಿಗೆ ಹಿನ್ನೆಡೆಯಾಗಿದೆ ಎಂದು ಧ್ರುವನಾರಾಯಣ್‌ ವಿಶ್ಲೇಷಣೆ ಮಾಡಿದರು.

ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಿದ್ದು, ಎಪಿವಿಪಿ, ಬಿವಿಎಸ್‌ ಮಾದರಿಯಲ್ಲಿ ಕಾಂಗ್ರೆಸ್‌ ಪಕ್ಷದ ಎನ್‌ಎಸ್‌ಯುಐ ಸಂಘಟನೆಯಲ್ಲಿ ಬಲಿಷ್ಠ ಮಾಡಲಾಗುತ್ತಿದೆ. ಈ ಜಿಲ್ಲೆಯಲ್ಲಿ ಶಾಸಕರು ಹಾಗೂ ಮಾಜಿ ಶಾಸಕರು ಮುಂಚೂಣಿ ನಾಯಕರು ಸಂಘಟನೆಗೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಆಯಾ ಕಾಲೇಜು ಮಟ್ಟದಲ್ಲಿ ಸಂಘಟನೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸ್ಥಳೀಯ ನಾಯಕರಿಗೆ ತಿಳಿಸಿದರು.

ನಾವು ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡಿದೆವು. ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಎಲ್ಲ ಸೌಲಭ್ಯ ನೀಡಿದರು. ಆ ಗ್ರಾಮಗಳಲ್ಲಿ ನಮ್ಮ ಪಕ್ಷಕ್ಕೆ ಓಟು ಬರುತ್ತಿರಲಿಲ್ಲ. ಕಾರಣ ಕೇಳಿದರೆ, ಅಲ್ಲಿನ ಯುವಕರು ರಾತ್ರೋರಾತ್ರಿ ತಮ್ಮ ಮನೆಗಳಲ್ಲಿ ಬಿಎಸ್ಪಿ ಹಾಗೂ ಬಿಜೆಪಿ ಓಟು ಬರುವಂತೆ ಮಾಡಿಬಿಟ್ಟರು ಎಂದು ಆ ಗ್ರಾಮಗಳ ಮುಖಂಡರೇ ಹೇಳುತ್ತಿದ್ದಾರೆ. ಇದರಿಂದ ಹೊರ ಬರಲು ನಮ್ಮ ಸಂಘಟನೆಯಲ್ಲಿ ವಿದ್ಯಾರ್ಥಿಗಳ ದೆಸೆಯಿಂದಲೇ ಆರಂಭಿಸಬೇಕು. ನಾಯಕತ್ವ ಗುಣ ರೂಪಿಸಬೇಕು. ಆತ ಅಲ್ಲಿಂದಲೇ ಪ್ರಭಾವಿತನಾಗಿ ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲು ಸಾಧ್ಯವಿದೆ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕಳೆದ ಒಂದುವರೆ ವರ್ಷಗಳಿಂದಯೇ ಯಾವುದೇ ರೀತಿಯ ಅಭಿವೃದ್ಧಿಯಾಗುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾಗಿದ್ದಾರೆ. ಹೊಸ ಯೋಜನೆಗಳ ಜಾರಿಯಾಗಿಲ್ಲ. ಹಿಂದೆ ನಮ್ಮ ಸರ್ಕಾರ ಜಾರಿ ಮಾಡಿದ್ದ ಯೋಜನೆಗಳನ್ನು ಮೊಟಕು ಮಾಡಿದ್ದಾರೆ. ಅನ್ನ ಭಾಗ್ಯಕ್ಕೆ ಕತ್ತರಿ, ಇಂದಿರಾಗಾಂ​ ಕ್ಯಾಂಟೀನ್‌ ಮುಚ್ಚಿಲಾಗಿದೆ. ಬಡವರು ಮತ್ತು ರೈತರಿಗೆ ಈ ಸರ್ಕಾರಿಂದ ಯಾವುದೇ ಪ್ರಯೋಜನ ವಿಲ್ಲ ಎಂದು ಧ್ರುನಾರಾಯಣ ದೂರಿದರು.

click me!