
ಕೊಪ್ಪಳ: ಇಲ್ಲಿಯ ಭಾಗ್ಯನಗರದ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಯುವಕ-ಮುಸ್ಲಿಂ ಯುವತಿಯ ವಿವಾಹ ಸಾಮರಸ್ಯ, ಸೌಹಾರ್ದಕ್ಕೆ ಸಾಕ್ಷಿಯಾಯಿತು. ಪ್ರೀತಿಸಿದ ಯುವಕನಿಗಾಗಿ ಮುಸ್ಲಿಂ ಯುವತಿ ಧರ್ಮದ ಕಟ್ಟಳೆ ಮೀರಿ ಬಿಂದಿ ಧರಿಸಿ, ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ತಾಲೂಕಿನ ಅಳವಂಡಿ ಗ್ರಾಮದ ಚಂದ್ರಕಲಾ ಹಾಗೂ ಸಿದ್ದರಡ್ಡಿ ಬಿಸನಹಳ್ಳಿ ಎಂಬುವರ ಮಗ ವೆಂಕಟೇಶ್ ರಡ್ಡಿ ಹಾಗೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಮಮ್ತಾಜಿ ಹಾಗೂ ಬಾಷುಸಾಬ್ ಕಟ್ಟಿಮನಿ ಅವರ ಪುತ್ರಿ ಶಹೀನಾ ಮದುವೆ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎರಡು ಕುಟುಂಬದವರು ಹಾಗೂ ಎರಡು ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ವಾದ್ಯವೃಂದ, ಮಂತ್ರ ಪಠಣ ಮೂಲಕ ವಿವಾಹ ನೆರವೇರಿತು.
ಕಾಲೇಜು ಓದುವ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಪದವಿ ಮುಗಿದರೂ ಇವರ ಪ್ರೀತಿ ನಿರಂತರವಾಗಿರುತ್ತದೆ. ಮೊದಲು ಕುಟುಂಬದವರು ವಿರೋಧಿಸಿದ್ದರೂ ಯುವಕ-ಯುವತಿ ಕುಟುಂಬದವರನ್ನು ಒಪ್ಪಿಸಿ, ಬಂಧು-ಬಾಂಧವರ ಎದುರು ವಿವಾಹವಾಗಿದ್ದಾರೆ. ಶಹೀನಾ ಸಪ್ತಪದಿ ತುಳಿದು, ಮಂತ್ರ ಪಠಣಗಳೊಂದಿಗೆ ಮಾಂಗಲ್ಯ ಕಟ್ಟಿಸಿಕೊಳ್ಳುವ ಮೂಲಕ ''ಜಾನಕಿ''ಯಾಗಿದ್ದಾರೆ. ಎರಡೂ ಕುಟುಂಬದವರು ಹಾಗೂ ಗೆಳೆಯರು ಒಟ್ಟಾಗಿ ಬೆರೆತು, ವಿವಾಹದಲ್ಲಿ ಪಾಲ್ಗೊಂಡು, ಭೋಜನ ಸವಿದರು.
ಇದನ್ನೂ ಓದಿ: ಅಲ್ಪಸಂಖ್ಯಾತ ಮಕ್ಕಳು ರಫೇಲ್ ಯುದ್ಧವಿಮಾನ ಬಿಚ್ಚಿ ಜೋಡಿಸಬಲ್ಲರು, ಆದ್ರೆ ಓದಿದ್ದು ಮರೀತಾರೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಇದನ್ನೂ ಓದಿ: ಇದೇ ನೋಡಿ ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?