ತಪ್ಪಾಗಿರುವುದು ನಿಜ: ನೌಕರರ ಕ್ಷಮೆ ಯಾಚಿಸಿದ ಆ್ಯಪಲ್‌ ಐಫೋನ್‌ ಘಟಕ

By Kannadaprabha NewsFirst Published Dec 20, 2020, 8:47 AM IST
Highlights

ವಿಶ್ವಾದ್ಯಂತ ಸುದ್ದಿಯಾದ ಬೆನ್ನಲ್ಲೇ ವಿಸ್ಟ್ರಾನ್‌ ಕಂಪನಿ ಎಚ್ಚೆತ್ತುಕೊಂಡಿದೆ. ಘಟನೆ ಸಂಬಂಧ ಭಾರತೀಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಂಪನಿಯ ಉಪಾಧ್ಯಕ್ಷನನ್ನು ವಜಾಗೊಳಿಸಿರುವ ವಿಸ್ಟ್ರಾನ್‌, ನೌಕರರ ಕ್ಷಮೆ ಯಾಚಿಸಿದೆ

ನವದೆಹಲಿ (ಡಿ.20): ಆ್ಯಪಲ್‌ ಐಫೋನ್‌ ಬಿಡಿಭಾಗ ತಯಾರಿಸುವ ಕರ್ನಾಟಕದ ಕೋಲಾರ ಜಿಲ್ಲೆಯ ನರಸಾಪುರದ ವಿಸ್ಟ್ರಾನ್‌ ಘಟಕದಲ್ಲಿನ ಹಿಂಸಾಚಾರ ವಿಶ್ವಾದ್ಯಂತ ಸುದ್ದಿಯಾದ ಬೆನ್ನಲ್ಲೇ ವಿಸ್ಟ್ರಾನ್‌ ಕಂಪನಿ ಎಚ್ಚೆತ್ತುಕೊಂಡಿದೆ. ಘಟನೆ ಸಂಬಂಧ ಭಾರತೀಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಂಪನಿಯ ಉಪಾಧ್ಯಕ್ಷನನ್ನು ವಜಾಗೊಳಿಸಿರುವ ವಿಸ್ಟ್ರಾನ್‌, ನೌಕರರ ಕ್ಷಮೆ ಯಾಚಿಸಿದೆ.

ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಕೆಲವು ನೌಕರರಿಗೆ ಸೂಕ್ತವಾಗಿ ಅಥವಾ ಸಕಾಲಕ್ಕೆ ವೇತನ ಪಾವತಿಸಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸಿ ನೌಕರರ ಕ್ಷಮೆ ಯಾಚಿಸುತ್ತೇವೆ. ಇದನ್ನು ಸರಿಪಡಿಸಲು ಶಿಸ್ತು ಕ್ರಮ ಸೇರಿದಂತೆ ತಕ್ಷಣದ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ವಿಸ್ಟ್ರಾನ್‌ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ಕೋಲಾರ : ಆ್ಯಪಲ್‌ ಕಂಪನಿಯಿಂದ ಕಾನೂನು ಉಲ್ಲಂಘನೆ? ...

ಎಲ್ಲ ನೌಕರರಿಗೆ ತಕ್ಷಣವೇ ಪೂರ್ಣ ವೇತನ ಕೊಡಿಸುವುದು ನಮ್ಮ ಮುಂದಿರುವ ಆದ್ಯತೆ. ಅದನ್ನು ಈಡೇರಿಸಲು ಶ್ರಮವಹಿಸುತ್ತಿದ್ದೇವೆ. ಇದಲ್ಲದೆ ನೌಕರರ ನೆರವು ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್‌ನಲ್ಲಿ ನೌಕರರು 24 ತಾಸು ದೂರು ಹೇಳಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡುತ್ತೇವೆ. ನೌಕರರು ಅನಾಮಧೇಯರಾಗಿ ಬೇಕಾದರೂ ದೂರು ನೀಡಬಹುದು ಎಂದು ಕಂಪನಿ ತಿಳಿಸಿದೆ.

click me!