Kolar : ಜೆಡಿಎಸ್‌, ಕಾಂಗ್ರೆಸ್‌ ಮತದಾರರ ಹೆಸರು ರದ್ದು

By Kannadaprabha NewsFirst Published Nov 20, 2022, 5:56 AM IST
Highlights

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರಾಬಲ್ಯ ಇರುವ ಬೂತ್‌ಗಳಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಬಿಜೆಪಿಯವರು ರದ್ದು ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

 ಬಂಗಾರಪೇಟೆ (ನ.20):  ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರಾಬಲ್ಯ ಇರುವ ಬೂತ್‌ಗಳಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಬಿಜೆಪಿಯವರು ರದ್ದು ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ತಾಲೂಕಿನ ಮಾವಹಳ್ಳಿ ಗ್ರಾಪಂ ವ್ಯಾಪ್ತಿಯ ನಾಯಕರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರ ಮಾಹಿತಿ ಅಕ್ರಮ ಸಂಗ್ರಹ ಮಾಡುತ್ತಿರುವುದರ ಕುರಿತು (Govt)  ಹಾರಿಕೆ ಉತ್ತರವನ್ನ ನೀಡುತ್ತಿದೆ. ಇದೊಂದು ವ್ಯವಸ್ಥಿತವಾಗಿ ನಡೆಯುತ್ತಿರುವ ತಂತ್ರ ಎಂದರು.

ಚುನಾವಣಾ ಆಯೋಗಕ್ಕೆ ದೂರು

BJP)  ಕುತಂತ್ರದ ರಾಜಕಾರಣ ಮಾಡುತ್ತಿದೆ. ಸಮಾಜ ಹಾಗೂ ದೇಶವನ್ನ ಒಡೆಯುವಂತಹ ಕೆಲಸ ಮಾಡುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ, ಬಿಜೆಪಿ ಕುತಂತ್ರದ ರಾಜಕಾರಣದಿಂದ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇಂದೊಂದು ಹೇಯ ಕೃತ್ಯ. ಈ ಕುರಿತು ಬಿಜೆಪಿಯವರು ನಡೆಸುವ ತನಿಖೆ ಮೇಲೆ ನಂಬಿಕೆ ಇಲ್ಲ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದಾಗ, ಸಚಿವರೊಬ್ಬರಿಗೆ ಸೇರಿದ ಚೆಕ್‌ಗಳು ಸಿಕ್ಕಿವೆ, ಹೀಗಿರುವಾಗ ಈ ಮಂತ್ರಿಯನ್ನ ಇಟ್ಟುಕೊಂಡು ಇವರು ಯಾವ ತನಿಖೆ ಮಾಡುತ್ತಾರೆ. ಅವರ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದ್ರು.

ಜನರ ವಿಶ್ವಾಸ ಗಳಿಸಬೇಕಾದರೆ ಆ ಮಂತ್ರಿಯನ್ನ ವಜಾ ಮಾಡಬೇಕು. ಇಲ್ಲವಾದರೆ ಕಾಟಚಾರದ ತನಿಖೆ ಮಾಡಿ ಪ್ರಕರಣ ಮುಚ್ಚಿ ಹಾಕುತ್ತಾರೆ. ಅಲ್ಲದೆ ಚುನಾವಣಾ ಆಯೋಗ ತಮ್ಮದೆ ಆದ ಸ್ವತಂತ್ರ ಸಂಸ್ಥೆ ಇದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಹೊರಟಿರುವ ದುಷ್ಟಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದರು.

ವಿಡಿಯೋ ಮಾಡಲು ಬರಬೇಕೆ

ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಟಾಂಗ್‌ ನೀಡಿದ ಕುಮಾರಸ್ವಾಮಿ ಅವರು, ನಾವು ಅಧಿಕಾರಕ್ಕೆ ಬರದೆ ಕಾಂಗ್ರೆಸ್‌ ಅಧಿಕಾರಕ್ಕೆ ಬರದೆ ರಮೇಶ್‌ ಜಾರಕಿಹೊಳಿ ಅಧಿಕಾರಕ್ಕೆ ಬರಬೇಕೆ ಎಂದು ಪ್ರಶ್ನಿಸಿದರು. ಅಲ್ಲದೆ ರಮೇಶ್‌ ಜಾರಕಿಹೊಳಿ ಅವರು, ಇನ್ನೊಂದು ವಿಡಿಯೋ ಮಾಡಲು ಬರಬೇಕೆ ಎಂದು ವ್ಯಂಗ್ಯವಾಗಿಡಿದರು. ನಾವು ಪಂಚರತ್ನ ಕಾರ್ಯಕ್ರಮ ಕಳ್ಳಕಾಕರಿಗೆ ಸಹಾಯ ಮಾಡಲು ಪ್ರಾರಂಭಿಸಿಲ್ಲ, ವ್ಯಂಗ್ಯ ಮಾಡಿರುವವರಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು ಎಂದರು.?

ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸಂಬಂಧ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಚುನಾವಣೆ ನಡೆಸದೆ ಎಲ್ಲಾ ರೀತಿಯ ಹುನ್ನಾರ ಮಾಡಲಾಗುತ್ತಿದೆ. ಚುನಾವಣೆ ನಡೆಸುತ್ತಾರೆಂಬ ನಂಬಿಕೆ ಇಲ್ಲ, ಚುನಾವಣೆ ಮಾಡುವುದಾದರೆ ಎಂದೋ ಮಾಡಿರುತ್ತಿದ್ದರು. ಬಿಜೆಪಿಯವರು ಸಮಾವೇಶಗಳನ್ನ ಮಾಡುತ್ತಿದ್ದು, ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ, ಕಲ್ಬುರ್ಗಿಯಲ್ಲಿ ಸಮಾವೇಶ ಮಾಡಿ, ತಾಕತ್ತು ಧಮ್ಮಿನ ಬಗ್ಗೆ ಬೊಮ್ಮಯಿ ಅವರು ಮಾತನಾಡುತ್ತಾರೆ. ಆವರ ಧಮ್ಮು ತಾಕತ್ತುಗಳನ್ನು ಅಕ್ರಮ ನಿಲ್ಲಿಸುವುದಕ್ಕೆ ಪ್ರದರ್ಶನ ಮಾಡಲಿ ಎಂದರು.

ಕಾಂಗ್ರೆಸ್‌ಗೆ ನಕಲಿ ವೋಟರ್ಸ್‌ ಡಿಲೀಟ್‌ ಆತಂಕ: ಸಿಎಂ

 ಮಂಗಳೂರು

ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲೀಟ್‌ ಮಾಡುವುದು ಚುನಾವಣಾ ಆಯೋಗವೇ ಹೊರತು ಸರ್ಕಾರವಲ್ಲ. ನಕಲಿ ಮತದಾರರ ಹೆಸರು ಡಿಲೀಟ್‌ ಆಗುವ ಆತಂಕದಲ್ಲಿ ಕಾಂಗ್ರೆಸ್‌ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮತದಾರರ ಮಾಹಿತಿ ಸೋರಿಕೆ ಆರೋಪಕ್ಕೆ ಸಂಬಂಧಿಸಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮತದಾರರ ಪರಿಷ್ಕರಣೆ ಪ್ರತಿ ವರ್ಷ ಹಾಗೂ ಚುನಾವಣೆ ಸಂದರ್ಭದಲ್ಲಿ ಮಾಡಲಾಗುತ್ತದೆ. ಇದು ಚುನಾವಣಾ ಆಯೋಗದ ನಿರಂತರ ಪ್ರಕ್ರಿಯೆ. ಮತದಾರರ ಪಟ್ಟಿಡಿಲೀಟ್‌ ಪ್ರಕರಣದಲ್ಲಿ ಸರ್ಕಾರದ ಕೈವಾಡವಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಹೆಸರು ಡಿಲೀಟ್‌ ಮಾಡುವುದು ಚುನಾವಣಾ ಆಯೋಗ, ಅದಕ್ಕೂ ನಮಗೂ ಸಂಬಂಧ ಇಲ್ಲ. ಪ್ರತಿ ವರ್ಷವೂ ಹೆಸರು ಸೇರ್ಪಡೆ, ಡಿಲಿಟೇಷನ್‌ ಪ್ರಕ್ರಿಯೆ ನಡೆಯುತ್ತದೆ. ನಕಲಿ ಮತದಾರರು ಡಿಲೀಟ್‌ ಆಗುವ ಭಯದಲ್ಲಿ ನಮ್ಮ ಮೇಲೆ ಕಾಂಗ್ರೆಸ್‌ ಈ ರೀತಿಯ ಆರೋಪ ಮಾಡುತ್ತಿದೆ ಎಂದೆನಿಸುತ್ತಿದೆ ಎಂದರು.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಎಲ್ಲದಕ್ಕೂ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಪಾರಾಗಲು ಅನುಕೂಲವಾಯಿತು. ಮತಾದರರ ಪಟ್ಟಿಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಬಂಧನವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

click me!